ದಸರಾ ಮಹೋತ್ಸವ: ವರ್ಚುವಲ್ ಮೂಲಕ ಲಕ್ಷಾಂತರ ಜನರನ್ನು ಆಕರ್ಷಿಸಿದ ಕಾರ್ಯಕ್ರಮಗಳು
ಮೈಸೂರು, ಅಕ್ಟೋಬರ್ 23: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಸರಳವಾಗಿ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವ ವರ್ಚುವಲ್ ಮೂಲಕ ದೇಶ ವಿದೇಶದ ಉದ್ದಗಲಕ್ಕೂ ತಲುಪಿದ್ದು, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ದಿನ 6 ಲಕ್ಷಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.
ವರ್ಚುವಲ್ ವೇದಿಕೆ ಮೂಲಕ ಚೆನ್ನೈ, ಜೈಪುರ, ಕೊಲ್ಕೊತ್ತಾ ಇನ್ನೂ ಮುಂತಾದ ಪ್ರಮುಖ ನಗರಗಳು, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳ ಜನರು ದಸರಾ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದಾರೆ. ಈ ಬಾರಿ ದಸರಾ ಕಾರ್ಯಕ್ರಮಗಳು ಅರಮನೆ ವೇದಿಕೆಗೆ ಮಾತ್ರ ಸೀಮಿತವಾಗಿದ್ದು, ಕಾರ್ಯಕ್ರಮದ ವೀಕ್ಷಣೆಗೂ ಜನ ಭಾಗವಹಿಸುವಿಕೆಗೆ ಮಿತಿ ವಿಧಿಸಿದ್ದರಿಂದ ವರ್ಚುವಲ್ ವೇದಿಕೆ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು.
ದಸರಾ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್: ಇಲ್ಲಿದೆ ಮಾಹಿತಿ...
ಹೀಗಾಗಿ, ಅಧೀಕೃತ ಫೇಸ್ಬುಕ್ ಮತ್ತು ಯೂಟ್ಯೂಬ್ ಪೇಜ್ನಲ್ಲಿ ನೇರಪ್ರಸಾರ ಮಾಡುವ ಜೊತೆಗೆ ಎಲ್ಲಾ ಚಾನೆಲ್ಗಳಿಗೂ RTMP video link ನೀಡಿ, ನೇರ ಪ್ರಸಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವರ್ಚುವಲ್ ವೇದಿಕೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಅ.21ರಂದು ನಡೆದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ನಡೆಸಿಕೊಟ್ಟ ಎಸ್ಪಿಬಿ ನುಡಿನಮನ ಕಾರ್ಯಕ್ರಮವನ್ನು ಒಂದೇ ದಿನ ವಾರ್ತಾ ಇಲಾಖೆಯ FB ಪೇಜ್ ನಲ್ಲೇ 1.93 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಎಲ್ಲಾ ನೇರ ಪ್ರಸಾರಗಳ ವೀಕ್ಷಣೆಯನ್ನು ಪರಿಗಣಿಸಿದರೆ ಅ.21ರ ಒಂದೇ ಕಾರ್ಯಕ್ರಮವನ್ನು 6 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.
ಪ್ರತಿ ದಿನ ಸರಾಸರಿ 20 ಸಾವಿರ ಜನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ FB page ನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ 17 ಸ್ಥಳೀಯ ಕೇಬಲ್ ಚಾನೆಲ್ಗಳಿಗೆ live streams ಮಾಡಲು link ಒದಗಿಸಲಾಗಿದ್ದು ಎಲ್ಲಾ ವೀಕ್ಷಣೆ ಸಂಖ್ಯೆಯನ್ನು ಪರಿಗಣಿಸಿದರೆ ಇನ್ನೂ ಹೆಚ್ಚು ಜನ ವೀಕ್ಷಣೆ ಮಾಡಿರುವ ಮಾಹಿತಿ ಸಿಗುತ್ತದೆ ಎಂದು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ದಸರಾ ವರ್ಚುವಲ್ ಪ್ರಸಾರದ ನೋಡಲ್ ಅಧಿಕಾರಿ ಆರ್. ರಾಜು ತಿಳಿಸಿದ್ದಾರೆ.