ಕಾಡುಹಂದಿಗೆ ಇಟ್ಟ ಉರುಳಿಗೆ ಗಂಡು ಚಿರತೆ ಬಲಿ!
ಮೈಸೂರು, ಜುಲೈ 9: ಬೇಟೆಗಾರರು ಕಾಡು ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ಮುಮ್ಮಡಿಕಾವಲು ಮೀಸಲು ಅರಣ್ಯದಲ್ಲಿ ನಡೆದಿದೆ.
ಕಿಡಿಗೇಡಿಗಳು ಹಾಕಿದ್ದ ಉರುಳಿಗೆ ಸಿಲುಕಿ ಸಾವನ್ನಪ್ಪಿದ ಚಿರತೆ ಮೂರು ವರ್ಷದ ಪ್ರಾಯದ್ದಾಗಿದೆ. ಈ ವ್ಯಾಪ್ತಿಯಲ್ಲಿ ಕೆಲವರು ಬೇಟೆಯಾಡುವ ಸಲುವಾಗಿ ಉರುಳು ಹಾಕುತ್ತಿದ್ದು, ಈ ಉರುಳಿಗೆ ಹಂದಿ ಬದಲು ಚಿರತೆ ಸಿಲುಕಿ ಸಾವನ್ನಪ್ಪಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸಿಎಫ್ ಸೋಮಪ್ಪ, ಆರ್ಎಫ್ಓ ರತನ್ಕುಮಾರ್, ಸಿಬ್ಬಂದಿ ಸಿದ್ದರಾಜು, ರಾಜು, ಬೆಮ್ಮಯ್ಯ ಮೊದಲಾದವರು ಪರಿಶೀಲಿಸಿ, ಉರುಳಿನಿಂದ ಚಿರತೆಯನ್ನು ಬಿಡಿಸಿ ಹೊರತೆಗೆದಿದ್ದಾರೆ.
ಎಚ್.ಡಿ ಕೋಟೆ ಬಳಿ ಅನುಮಾನಾಸ್ಪದವಾಗಿ ಆನೆ, ಚಿರತೆ ಸಾವು
ಬಳಿಕ ನಾಗರ ಹೊಳೆ ಅರಣ್ಯದ ಪಶುವೈದ್ಯ ಡಾ.ಮುಜೀಬ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ.
ಈ ಬಗ್ಗೆ ಎಸಿಫ್ ಸೋಮಪ್ಪ ಮಾತನಾಡಿ, ಅರಣ್ಯ ಪ್ರದೇಶದ ಸುತ್ತಲೂ ಪರಿಶೀಲನೆ ನಡೆಸಿ ಎಲ್ಲೆಲ್ಲಿ ಉರುಳು ಅಳವಡಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಉರುಳುಗಳನ್ನು ತೆರವುಗೊಳಿಸಲಾಗುವುದು. ಅಲ್ಲದೆ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಕೀಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಉರುಳು ಹಾಕಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಇತ್ತ ಗಮನಹರಿಸಿ ನಿಯಂತ್ರಿಸದೆ ಹೋದರೆ ಉರುಳಿಗೆ ಸಿಲುಕಿ ಇನ್ನಷ್ಟು ಪ್ರಾಣಿಗಳು ಪ್ರಾಣ ಕಳೆದುಕೊಳ್ಳುವ ದಿನ ದೂರವಿಲ್ಲ.