ಕಟ್ಟೆಮಳಲವಾಡಿ ಸಿಡಿ ಜಾತ್ರೆಯಲ್ಲಿ ಸಂಭ್ರಮವೋ ಸಂಭ್ರಮ
ಮೈಸೂರು, ಏಪ್ರಿಲ್ 01 : ಸಿಡಿ ಏರಿದ ದೇವರುಗಳು..ಹಣ್ಣು ದವನ, ಜೀವಂತ ಕೋಳಿಗಳನ್ನು ಎಸೆದು ಹರಕೆ ತೀರಿಸಿದ ಭಕ್ತರು..ಎಲ್ಲೆಡೆ ಸಡಗರ ಸಂಭ್ರಮ..ಇದೆಲ್ಲ ಕಂಡು ಬಂದಿದ್ದು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ನಡೆದ ಸಿಡಿ ಉತ್ಸವದಲ್ಲಿ.
ಗ್ರಾಮ ದೇವತೆ ಶ್ರೀ ಸಿಡಿಯಮ್ಮನ ಸಿಡಿ ಉತ್ಸವ ಈ ಬಾರಿ ಗುಡುಗು ಸಿಡಿಲು, ಮಳೆಯ ನಡುವೆ ನಡೆದಿದ್ದು ವಿಶೇಷವಾಗಿತ್ತು. ಮರೂರು, ಕಟ್ಟೆಮಳಲವಾಡಿ ಕೊಪ್ಪಲು, ಕಲ್ಕುಣಿಕೆ, ಕಟ್ಟೆಮಳಲವಾಡಿ ಗ್ರಾಮದ ದೇವತೆಗಳೆಲ್ಲವೂ ಒಂದೆಡೆ ನೆರೆದು ಆಚರಿಸುವ ಉತ್ಸವ ಇಂದು ನಿನ್ನೆಯದಲ್ಲ. ಇದನ್ನು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತದೆ.
ಅದ್ಧೂರಿಯಾಗಿ ಜರುಗಿದ ನಂಜುಂಡೇಶ್ವರನ ಪಂಚ ಮಹಾರಥೋತ್ಸವ
ಸುತ್ತಲ ಗ್ರಾಮಗಳಿಂದ ಬರುವ ದೇವರುಗಳು ಗ್ರಾಮದ ಲಕ್ಷ್ಮಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿದ ನಂತರ ಮಂಗಳ ವಾದ್ಯಗಳ ಸಮೇತ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಈ ವೇಳೆ ಗ್ರಾಮದ ಎಲ್ಲಾ ಸಮುದಾಯದಿಂದ ಶೇಖರಿಸಿದ (ಪಡಿ) ಅಕ್ಕಿಯಲ್ಲಿ ದೇವಸ್ಥಾನದ ಪೂಜಾರಿ ಮನೆತನದವರು ತಯಾರಿಸಿದ ಮಡೆ ಅನ್ನವನ್ನು ದೇವರುಗಳು ಹೊತ್ತು ಸಿಡಿ ಆಡುವ ಸ್ಥಳಕ್ಕೆ ತಂದು ಪೂಜೆ ಮಾಡಿ ನಂತರ ಮಡೆ ಅನ್ನ ಎರಚಿದ ನಂತರ ಸಿದ್ಧಗೊಂಡಿದ್ದ ಸಿಡಿ ಮರ ಏರಿ ದೇವರುಗಳು ಒಂದೊಂದು ಸುತ್ತು ತಿರುಗಿದವು, ಈ ವೇಳೆ ನೆರೆದ ಭಕ್ತರು ದೇವಿಗೆ ಸಿಳ್ಳೆ ಹೊಡೆದು, ಜೈ ಕಾರ ಕೂಗಿ ಆನಂದಿಸಿದರು.
ಮೈಸೂರು: ಬೆಟ್ಟದಪುರದಲ್ಲಿ ತ್ರಿವಳಿ ರಥ ಎಳೆದ ಭಕ್ತರು
ಕಟ್ಟೆಮಳಲವಾಡಿಯಿಂದ ಸಿಡಿಯಮ್ಮ, ದರ್ಶಳಮ್ಮ, ಕೊಪ್ಪಲು ಗ್ರಾಮದಿಂದ ಬೆಟ್ಟದ ಚಿಕ್ಕಮ್ಮ, ಮರೂರು ಗ್ರಾಮದಿಂದ ಆಂಜನೇಯ, ಕಲ್ಕುಣಿಕೆಯಿಂದ ಪಟ್ಲದಮ್ಮ, ಹೀಗೆ ಸುಮಾರು 5 ದೇವರುಗಳು ಬಂದಿದ್ದು 4 ದೇವರುಗಳು ಸಿಡಿಮರ ಏರಿ ಆಡಿದವು.
ಈ ವೇಳೆ ನೆರೆದಿದ್ದ ನವದಂಪತಿಗಳು, ಭಕ್ತರು, ಜನಪ್ರತಿನಿಧಿಗಳು ಹಣ್ಣು, ದವನ, ಜೀವಂತ ಕೋಳಿಗಳನ್ನು ಸಿಡಿ ರಥಕ್ಕೆ ಎಸೆದು ದೇವರ ಕೃಪೆಗೆ ಪಾತ್ರರಾದರು. ಸುತ್ತ-ಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತಾಧಿಗಳು ಜಾತ್ರೆಯ ಸಂಭ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.