ವೈಭವೋಪೇತವಾಗಿ ಜರುಗಿದ ಚಾಮುಂಡಿ ವರ್ಧಂತ್ಯೋತ್ಸವ
ಮೈಸೂರು, ಜುಲೈ 17: ತಾಯಿ ಚಾಮುಂಡಿಯ ವರ್ಧಂತಿ ಮಹೋತ್ಸವ ಚಾಮುಂಡಿಬೆಟ್ಟದಲ್ಲಿ ನಿನ್ನೆ(ಜುಲೈ 16) ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸಕಲವನ್ನೂ ನೀಡುವ, ಭಕ್ತರ ಪೊರೆವ ಶಕ್ತಿದೇವತೆಯ ದರ್ಶನಕ್ಕಾಗಿ ಭಕ್ತ ಸಾಗರವೇ ಹರಿದುಬಂದಿತ್ತು.
ಆಷಾಢ ಮಾಸದ ಮೂರನೇ ಶುಕ್ರವಾರದ ಬಳಿಕ ಪ್ರತಿವರ್ಷ ವರ್ಧಂತಿ ಮಹೋತ್ಸವ ಜರುಗಲಿದ್ದು, ಎಂದಿನಂತೆ ಈ ವರ್ಷವೂ ವೈಭವಯುತವಾಗಿ ಜರುಗಿತು. ದೇವಿಯನ್ನು ವಿವಿಧ ಪುಷ್ಪ ಹಾಗೂ ಚಿನ್ನಾಭರಣಗಳಿಂದ ವಿಶೇಷವಾಗಿ ಅಲಂಕರಿಸಿ ನಿನ್ನೆ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಅಭ್ಯಂಜನ ಮಜ್ಜನ, ಪಂಚಾಮೃತ ಅಭಿಷೇಕ, ಏಕದಶಾವರ ರುದ್ರಾಭಿಷೇಕ, ನೆರವೇರಿಸಿ ನಂತರ ಮಹಾಮಂಗಳಾರತಿ ಮಾಡಿ ಬೆಳಗ್ಗೆ 8 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಸ್ಥಾನದ ಆವರಣವನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಮೈಸೂರು ದಸರಾ ವೈಭವ ಸವಿಯಲು ಚಾಮುಂಡಿಬೆಟ್ಟದಲ್ಲಿ ಟೆಲಿಸ್ಕೋಪ್
ಬಳಿಕ 10:30 ರ ಶುಭ ಮುಹೂರ್ತದಲ್ಲಿ ತಾಯೀ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಸುತ್ತಲೂ ಸಕಲ ಬಿರುದು-ಬಾವಲಿಗಳೊಂದಿಗೆ ಮೆರವಣಿಗೆ ಮಾಡಲಾಯಿತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಮಹಾಮಂಗಳಾರತಿ ನೆರವೇರಿಸಿ ಚಾಲನೆ ನೀಡಿದರು. ಉತ್ಸವ ಪೂರ್ಣಗೊಂಡ ನಂತರ ರುದ್ರಾಕ್ಷಿ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿ ಮಂಟಪೋತ್ಸವ ನೆರವೇರಿಸಲಾಯಿತು.
ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶಿಸಿದ ಸೃಜನ್, ದರ್ಶನ್
ಬಿಗಿ ಬಂದೋಬಸ್ತ್
ಇಷ್ಟಾರ್ಥ ಸಿದ್ಧಿಸುವ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಕಂಡು ಭಕ್ತರು ಭಕ್ತಿಭಾವ ಮೆರೆದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಕ್ತರಿಗೆ ವಿವಿಧ ಸಂಘಟನೆಗಳಿಂದ ಪ್ರಸಾದ ವಿತರಣೆ ಮಾಡಲಾಯಿತು. ವರ್ಧಂತಿ ಅಂಗವಾಗಿ ಚಾಮುಂಡಿಬೆಟ್ಟವೇ ಭಕ್ತ ಸಾಗರದಲ್ಲಿ ಮಿಂದೆದ್ದಿತು.
ಚಾಮುಂಡಿ ದರ್ಶನ ಪಡೆದ ಯದುವೀರ್
ಇನ್ನು ಚಾಮುಂಡಿಬೆಟ್ಟದಲ್ಲಿ ದೇವಿಯ ಜನ್ಮೋತ್ಸವದ ಪ್ರಯುಕ್ತ ಉತ್ಸವಮೂರ್ತಿ ಚಿನ್ನದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಹಾರಾಜ ಯದುವೀರ್ ಒಡೆಯರ್ ನಿನ್ನೆ(ಜುಲೈ 17) ಬೆಳಿಗ್ಗೆ 5 ಗಂಟೆಗೆ ಬೆಟ್ಟಕ್ಕೆ ಆಗಮಿಸಿದ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕಿ ಉತ್ಸವದಲ್ಲಿ ಪಾಲ್ಗೊಂಡರು.
ಸಾವಿರಾರು ಭಕ್ತರು ಭಾಗಿ
ನಾಡಿನ ಅಧಿದೇವತೆಯ ವರ್ಧಂತಿಯಲ್ಲಿ ಸಾವಿರಾರು ಭಕ್ತರು ಮುಂಜಾನೆಯಿಂದಲೇ ಬೆಟ್ಟಕ್ಕೆ ಆಗಮಿಸಿ ಚಿನ್ನದ ಪಲ್ಲಕ್ಕಿ ಉತ್ಸವ ಆರಂಭವಾಗುತ್ತಿದ್ದಂತೆ ದೇವಿಗೆ ಜೈಕಾರ ಹಾಕಿದರು. ದೇವಾಲಯದ ಸುತ್ತ ಮೂರು ಬಾರಿ ಉತ್ಸವ ಮೂರ್ತಿ ಪ್ರದಕ್ಷಿಣೆ ಹಾಕಿದ ನಂತರ ಸ್ವಸ್ಥಾನ ತಲುಪಿತು. ಯದುವೀರ್ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಶುಭಾಶಯ ಹೇಳಿದ ಯುವರಾಜ
ಕೃಷ್ಣ ಪಕ್ಷ ರೇವತಿ ನಕ್ಷತ್ರ ದಿನ ಮುಮ್ಮಡಿ ಕೃಷ್ಣ ರಾಜ ಒಡೆಯರ್ ಅವರು ದೇವಸ್ಥನಾದಲ್ಲಿ ಉತ್ಸವ ಮೂರ್ತಿಯನ್ನ ಸ್ಥಾಪನೆ ಮಾಡಿದರು. ಈ ದಿನವನ್ನ ಚಾಮುಂಡೇಶ್ವರಿ ಹುಟ್ಟಿದ ದಿನವೆಂದು ಆಚರಣೆ ಮಾಡುತ್ತಿವೆ. ಕಳೆದ ಎರಡು ವರ್ಷದಿಂದ ಚಾಮುಂಡಿ ತಾಯಿಗೆ ರುದ್ರಾಭಿಷೇಕ ಹಾಗೂ ಪಂಚಾಮೃತಾಭಿಷೇಕ ಮಾಡುವುದನ್ನ ನೋಡಿರಲಿಲ್ಲ. ಆದ್ದರಿಂದ ಈ ಬಾರಿ ಮುಂಜಾನೆ ದೇಗುಲಕೆ ಆಗಮಿಸಿ ಪೂಜಾ ವಿಧಿ ವಿಧಾನದಲ್ಲಿ ಭಾಗವಹಿಸಿದ್ದೇನೆ. ಸಮಸ್ತ ಕನ್ನಡಿಗರಿಗೆ ಹಾಗೂ ನಾಡಿನ ಎಲ್ಲಾ ಜನತೆಗೆ ಚಾಮುಂಡೇಶ್ವರಿ ವರ್ಧಂತಿಯ ಶುಭಾಶಯ ತಿಳಿಸಲು ಬಯಸುತ್ತೇನೆ ಎಂದು ಯುವರಾಜ ಯದುವೀರ ಹೇಳಿದರು.
ರಾಜಮಾತೆ ಹಾಗೂ ತ್ರಿಷಿಕಾ ಗೈರು
ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಹಾಗೂ ರಾಜ ಮಾತೆ ಪ್ರಮೋದಾದೇವಿ ಒಡೆಯರ್ ಗೈರು ಹಾಜರಾಗಿದ್ದರು. ಪ್ರತಿ ವರ್ಷ ಚಾಮುಂಡಿ ವರ್ಧಂತಿಯಂದು ಬೆಟ್ಟಕ್ಕೆ ರಾಜಮಾತೆ ಪ್ರಮೋದಾದೇವಿ ಬಂದು ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿತ್ತು. ಆದರೆ, ಈ ಬಾರಿ ಯದುವೀರ್ ಒಬ್ಬರೇ ದೇವಸ್ಥಾನಕ್ಕೆ ಆಗಮಿಸಿ ತಾಯಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ವಿವಿಧ ಪೂಜಾ ವಿಧಿ ವಿಧಾನದಲ್ಲಿ ಭಾಗಿಯಾದರು. ತ್ರಿಷಿಕಾ ಕುಮಾರಿ ಗರ್ಭಿಣಿಯಾಗಿರುವುದರಿಂದ ಬೆಟ್ಟಕ್ಕೆ ಆಗಮಿಸಿಲ್ಲ ಎಂದು ಅರಮನೆ ಮೂಲಗಳು ತಿಳಿಸಿವೆ.