ಮೈಸೂರಿನಲ್ಲಿ ವಿಮಾನಯಾನ ವಿಸ್ತರಣೆಗೆ ಚಿಂತನೆ
ಮೈಸೂರು, ಜುಲೈ 11: ಮೈಸೂರನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ದಿನವಿಡೀ ದೇಶದ ಮೂಲೆ ಮೂಲೆಗೂ ವಿಮಾನಯಾನವನ್ನು ವಿಸ್ತರಿಸುವ ಯೋಜನೆ ರೂಪುಗೊಳ್ಳುತ್ತಿದೆ.
ನಗರದಲ್ಲಿ ವಿಪ್ರೋ, ಇನ್ಫೋಸಿಸ್, ಎಲ್ ಅಂಡ್ ಟಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು, ವಾಣಿಜ್ಯ, ಶಿಕ್ಷಣ ಸಂಪರ್ಕ ವ್ಯವಸ್ಥೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮೈಸೂರಿನಿಂದ ಚೆನ್ನೈ, ಬೆಂಗಳೂರು, ಹೈದರಾಬಾದ್ ನಗರಕ್ಕೆ ವಿಮಾನಯಾನ ಸೌಲಭ್ಯವಿದ್ದು, ಇನ್ನು ಮುಂದೆ ಮೈಸೂರಿನಿಂದ ಕೊಚ್ಚಿ, ಗೋವಾ ನಗರಕ್ಕೆ ವಿಮಾನಯಾನ ಸೌಲಭ್ಯವು ಜುಲೈ 19ಕ್ಕೆ ಆರಂಭವಾಗಲಿದೆ. ಸದ್ಯದಲ್ಲೇ ಶಿರಡಿ, ಕಣ್ಣೂರಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರಾದ ಆರ್.ಮಂಜುನಾಥ್ ತಿಳಿಸಿದರು.
ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್
ಇದೇ ಜುಲೈ 19ರಂದು ಕಾರ್ಯಾರಂಭಿಸಲಿರುವ ವಿಮಾನಗಳಲ್ಲಿ ಆರಂಭಿಕ ಉಡುಗೊರೆಯಾಗಿ ಮೈಸೂರು-ಹೈದರಾಬಾದ್ಗೆ 2,100 ರೂ, ಮೈಸೂರು-ಕೊಚ್ಚಿಗೆ 1,400 ರೂ, ಮೈಸೂರು-ಗೋವಾಕ್ಕೆ 1,900 ರೂ ಹಾಗೂ ಮೈಸೂರು-ಬೆಂಗಳೂರಿಗೆ 1,150 ರೂಪಾಯಿ ದರ ವಿಧಿಸಲಾಗುತ್ತದೆ ಎಂದು ಹೇಳಿದರು. ಸದ್ಯ ವಾರಕ್ಕೆ ಸರಾಸರಿ 10 ಚಾರ್ಟರ್ಡ್ ವಿಮಾನಗಳು ಮೈಸೂರಿಗೆ ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಆ ಸಂಖ್ಯೆ ಇನ್ನೂ ಹೆಚ್ಚಿತ್ತು ಎಂದು ತಿಳಿದರು.
ಪ್ರಯಾಣಿಕರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿರುವ ಯೋಗ ಸಂಸ್ಥೆಗಳು ಹಾಗೂ ಹೋಟೆಲ್ ಮಾಲೀಕರ ಸಂಘದೊಂದಿಗೆ ಚರ್ಚಿಸಲು ಸಹ ಅಧಿಕಾರಿಗಳು ಮುಂದಾಗಿದ್ದಾರೆ. 300ಕ್ಕೂ ಅಧಿಕ ವಿದೇಶಿಗರು ಯೋಗಾಭ್ಯಾಸದ ಸಲುವಾಗಿ ಮೈಸೂರಿಗೆ ಬರುತ್ತಾರೆ. ಆದರೆ, ಕೆಲವರಿಗೆ ವಿಮಾನ ಸಂಪರ್ಕದ ಮಾಹಿತಿ ಇಲ್ಲ. ಮಾಹಿತಿ ನೀಡಿ ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸಲಾಗುವುದು. ಹೋಟೆಲ್ಗಳಲ್ಲೂ ಪ್ರಚಾರ ಕೈಗೊಳ್ಳಲಾಗುವುದು ಎಂದರು.
ಜೂ. 7ರಿಂದ ಮೈಸೂರು -ಬೆಂಗಳೂರು ವಿಮಾನಯಾನಕ್ಕೆ ಗ್ರೀನ್ ಸಿಗ್ನಲ್
ಮೈಸೂರಿನಲ್ಲಿ ಪ್ರವಾಸಿಗರು ಬರಲು ಮುಂದಾದರೆ ಮೈಸೂರು -ಶಿರಡಿ ನಡುವೆ ವಿಮಾನ ಹಾರಾಟ ಸೇವೆ ಒದಗಿಸಲು ಇಂಡಿಗೋ ಸಂಸ್ಥೆ ಮುಂದೆ ಬಂದಿದೆ. ಅದಕ್ಕೆ ಪೂರಕವಾಗಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಚಿಂತನೆ ನಡೆದಿದೆ. ಅದು ಸಾಕಾರಗೊಂಡಲ್ಲಿ ಧಾರ್ಮಿಕ ಯಾತ್ರೆ ಕೈಗೊಳ್ಳುವವರಿಗೆ ಇದೊಂದು ಸಂತಸದ ಸುದ್ದಿಯಾಗಲಿದೆ.