ನಂಜನಗೂಡು THO ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ; ಜಿ.ಪಂ. ಸಿಇಒ ಎತ್ತಂಗಡಿ
ಮೈಸೂರು, ಆಗಸ್ಟ್ 22: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪಂಚಾಯತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಸರ್ಕಾರದ ಮುಂದಿನ ಆದೇಶದವರೆಗೂ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯನಿರ್ವಹಿಸುವ ಕುರಿತು ಆದೇಶದಲ್ಲಿ ತಿಳಿಸಲಾಗಿದೆ.
ಭ್ರಷ್ಟಾಚಾರ ಅರಿತಿದ್ದೆ ಡಾ. ನಾಗೇಂದ್ರ ಜೀವಕ್ಕೆ ಮುಳುವಾಯಿತಾ?
ಅಲ್ಲದೇ ವರ್ಗಾವಣೆಗೊಂಡಿರುವ ಪ್ರಶಾಂತ್ ಮಿಶ್ರಾ ಅವರಿಗೆ ಸರ್ಕಾರ ಯಾವುದೇ ಸ್ಥಳ ನಿಗದಿಪಡಿಸಿಲ್ಲ. ಪ್ರಶಾಂತ್ ಮಿಶ್ರಾ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಪಂ ಸಿಇಒ ವಿರುದ್ಧ ಡಾ.ನಾಗೇಂದ್ರ ಅವರ ತಂದೆ ರಾಮಕೃಷ್ಣ ಅವರು ದೂರು ನೀಡಿದ್ದು, ಠಾಣೆಯಲ್ಲಿ IPC ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಎಸ್.ಆರ್. ನಾಗೇಂದ್ರ ಅವರು ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಆಗಸ್ಟ್ 20ರ ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲಸದ ಒತ್ತಡ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ .ಜಿಲ್ಲಾ ಪಂಚಾಯಿತಿ ಸಿಇಒ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿ.ಪಂ. ಸಿಇಒ ವಿರುದ್ಧದ ದೂರಿನಲ್ಲಿ ಏನಿದೆ?
ನನ್ನ ಮಗ ಡಾ.ನಾಗೇಂದ್ರ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿದ್ದರ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದಕ್ಕೆ ಅವಶ್ಯಕ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ಇದೆ ಎಂದು ಜಿಲ್ಲಾಧಿಕಾರಿ, ಡಿಎಚ್ ಒ, ಜಿಪಂ ಸಿಇಒ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸಿದ್ದರೂ ಯಾವ ಸೌಲಭ್ಯವನ್ನೂ ಕೊಡಲಿಲ್ಲ. ಕೊನೆಗೆ ತನ್ನನ್ನು ಹೆಚ್ಚುವರಿ ಪ್ರಭಾರದ ಕರ್ತವ್ಯದಿಂದ ವಿಮುಕ್ತಿಗೊಳಿಸುವಂತೆ ಮನವಿ ಮಾಡಿದ್ದರೂ ಗಮನಕ್ಕೆ ತೆಗೆದುಕೊಂಡಿರಲಿಲ್ಲ ಎಂದು ದೂರಿದ್ದಾರೆ ನಾಗೇಂದ್ರ ಅವರ ತಂದೆ.
"ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ"
ಆದರೆ ಇಷ್ಟೆಲ್ಲಾ ಆದರೂ ಸಿಇಒ ಇನ್ನೂ ಹೆಚ್ಚುವರಿಯಾಗಿ ಕೆಲಸದ ಟಾರ್ಗೆಟ್ ನೀಡಿ ಕಾರ್ಯನಿರ್ವಹಿಸುವಂತೆ ಆದೇಶಿಸಿದ್ದರು. ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದಾಗಿ ಎಚ್ಚರಿಕೆ ನೀಡಿದ್ದರು. ಸಿಇಒ ಒತ್ತಡದಿಂದ ಕಾರ್ಯನಿರ್ವಹಿಸಲಾಗದೇ ಮನನೊಂದು ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಮಗನ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಜಿಪಂ ಸಿಇಒ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಾಗೇಂದ್ರ ಅವರ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಾ. ನಾಗೇಂದ್ರ ಆತ್ಮಹತ್ಯೆ ಕುರಿತು ವರದಿ ಸಲ್ಲಿಸಿದ ಡಿಎಚ್ಓ
ಮೈಸೂರಿನಲ್ಲಿ ಮುಂದುವರೆದ ವೈದ್ಯರ ಮುಷ್ಕರ
ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು DHO ಕಚೇರಿ ಆವರಣದಲ್ಲೇ ಮೈಸೂರು ಸರ್ಕಾರಿ ವೈದ್ಯರ ಸಂಘದ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ. ನಾಗೇಂದ್ರ ಅವರ ಸಾವಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಹಾಗೂ ಜಿ.ಪಂ ಸಿಇಒ ಪ್ರಶಾಂತ್ ಮಿಶ್ರಾ ಅಮಾನತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ನಾಳೆ ರಾಜ್ಯ ಸಂಘದಿಂದ ಪ್ರಕರಣ ಕುರಿತು ಸಭೆ ನಡೆಸಿ ನಂತರ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
"ಸಿಬ್ಬಂದಿ ಕೊರತೆ ನೀಗಿಸಲೇಬೇಕು"
ಮೈಸೂರಿನಲ್ಲಿ ಶೇ 40% ರಷ್ಟು ವೈದ್ಯಕೀಯ ಹುದ್ದೆಗಳು ಖಾಲಿ ಇವೆ. ಗ್ರೂಪ್ A ಯಿಂದ ಗ್ರೂ D ವರೆಗೆ 1066 ಹುದ್ದೆಗಳು ಖಾಲಿ ಇವೆ. 2800 ಹುದ್ದೆಗಳ ಪೈಕಿ 1066 ಹುದ್ದೆಗಳು ಭರ್ತಿಯೇ ಆಗಿಲ್ಲ. ಕೋವಿಡ್ ಸಂದರ್ಭದಲ್ಲಿ ಎಲ್ಲವನ್ನು ಆನ್ಲೈನ್ನಲ್ಲಿ ಅಪ್ಡೇಟ್ ಮಾಡಬೇಕು. ಆದರೆ ಆರೋಗ್ಯ ಇಲಾಖೆಯಲ್ಲಿ ಡಾಟಾ ಎಂಟ್ರಿ ಸಿಬ್ಬಂದಿಗಳಿಲ್ಲ. ಕೊರೊನಾ ಸಂದರ್ಭದಲ್ಲಿ ಎಲ್ಲ ಕೆಲಸ ಆನ್ಲೈನ್ ಅಲ್ಲಿ ಮಾಡಲು ವೈದ್ಯರೇ ಬೇಕು. ಸಿಬ್ಬಂದಿ ಕೊರತೆ ನೀಗಿಸದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ನಾಳೆ ರಾಜ್ಯ ಸಂಘದಿಂದ ಸಭೆ ಇದ್ದು, ಸಭೆ ನಂತರ ರಾಜ್ಯವ್ಯಾಪ್ತಿ ಹೋರಾಟ ಮಾಡಲು ನಿರ್ಧಾರ ಮಾಡುತ್ತೇವೆ ಎಂದು ಮೈಸೂರು ಸರ್ಕಾರ ವೈದ್ಯರ ಸಂಘದ ಅಧ್ಯಕ್ಷ ದೇವಿ ಆನಂದ್ ಹೇಳಿಕೆ ನೀಡಿದ್ದಾರೆ.