ಇದು ಪಾಕಿಸ್ತಾನವಲ್ಲ; ಮುಡಾ ಆಯುಕ್ತರಿಂದ ಮೆಕ್ಯಾನಿಕ್ಗೆ ಧಮ್ಕಿ
ಮೈಸೂರು, ಜೂನ್ 23: ಇದು ಪಾಕಿಸ್ತಾನ ಅಲ್ಲ, ಮೊದಲು ಜಾಗ ಖಾಲಿ ಮಾಡಿ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಟೇಶ್ ಬೆದರಿಕೆ ಹಾಕಿದ್ದಾರೆ ಎಂದು ಮೆಕ್ಯಾನಿಕ್ ಅತಾವುಲ್ಲಾ ಖಾನ್ ಆರೋಪಿಸಿದ್ದಾರೆ.
ಮೈಸೂರು ನಗರದ ದೇವರಾಜ ಅರಸು ರಸ್ತೆಗೆ ಹೊಂದಿಕೊಂಡಿರುವ ಜಾಗವೊಂದರ ವಿವಾದ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅದರಲ್ಲಿ ಗ್ಯಾರೇಜ್ ಇಟ್ಟುಕೊಂಡಿರುವ ಅತಾವುಲ್ಲಾ ಮುಡಾ ಅಧಿಕಾರಿ ವಿರುದ್ಧ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ.
ಭೂ ಒತ್ತುವರಿ ಆರೋಪ: ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಹೋರಾಟ
ಅವರ ಹೇಳಿಕೆಯ ಪ್ರಕಾರ, ಮಹಾರಾಜರ ಕಾಲದಲ್ಲಿ ಗರ್ಭಿಣಿಯರ ಆರೈಕೆ ಕೇಂದ್ರವಾಗಿದ್ದ ಗುಣಾಂಬ ಟ್ರಸ್ಟ್ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿದೆ. ಟ್ರಸ್ಟ್ ಜಾಗದಲ್ಲಿ 40 ವರ್ಷಗಳಿಂದ ಬಾಡಿಗೆಗೆ ಇರುವ ಅತಾವುಲ್ಲಾ ಖಾನ್ ಗ್ಯಾರೇಜ್ ನಡೆಸುತ್ತಿದ್ದಾರೆ.
"ಒಂದು ವಾರದ ಹಿಂದೆ ಟ್ರಸ್ಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಮುಡಾ ಆಯುಕ್ತ ನಟೇಶ್, ಈ ಜಾಗ ಮುಡಾಕ್ಕೆ ಸೇರಿದ್ದೆಂದು ವಾದಿಸುತ್ತಿದ್ದಾರೆ. ಟ್ರಸ್ಟ್ ಆಸ್ತಿ ಪ್ರಕರಣ ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಹೊತ್ತಿನಲ್ಲಿ ಮುಡಾ ಆಯುಕ್ತ ಎಚ್.ಬಿ. ನಟೇಶ್ ಜಾಗ ತೆರವು ಮಾಡುವಂತೆ ಬೆದರಿಕೆ ಹಾಕಿದ್ದಾರೆ. ನಮ್ಮ ಪರ ವಕೀಲ ಸೈಯದ್ ಅಮೀರ್ ಸಮಜಾಯಿಷಿ ನೀಡಿದರಾದರೂ, ಮುಡಾ ಆಯುಕ್ತರು ಅದನ್ನು ಕೇಳಿಸಿಕೊಳ್ಳಲಿಲ್ಲ. ವಕೀಲರೊಂದಿಗೆ ಮುಡಾ ಆಯುಕ್ತರು ವಾಗ್ವಾದ ನಡೆಸಿದರು. ನಂತರ ನಾವು ಕೋರ್ಟ್ ತೀರ್ಪಿಗೆ ಬದ್ದರಾಗಿರುತ್ತೇವೆ ಎಂದಿದ್ದೇವೆ.''
"ಈ ವೇಳೆ ಆಯುಕ್ತರು, ಇದು ಪಾಕಿಸ್ತಾನವಲ್ಲ ಅಂತಾ ಬೆದರಿಕೆ ಹಾಕಿದರು. ಪಾಕಿಸ್ತಾನದ ಹೆಸರಿನಲ್ಲಿ ಅಧಿಕಾರಿಯಿಂದ ಬೆದರಿಕೆ ಬಂದಿದೆ. ಆಸ್ತಿ ವಿವಾದಕ್ಕೆ ಪಾಕಿಸ್ತಾನವನ್ನು ಎಳೆದು ತಂದಿದ್ದಾರೆ. ರಾಷ್ಟ್ರೀಯತೆ ಹೆಸರಲ್ಲಿ ಧಮಕಿ ಹಾಕಿದ್ದಾರೆ. ನಾನು ಹುಟ್ಟು ಭಾರತೀಯ, ನಮ್ಮೊಂದಿಗೆ ಪಾಕಿಸ್ತಾನದ ಹೆಸರು ಥಳಕು ಹಾಕಿ ಅವಮಾನಿಸಿದ್ದಾರೆ. ಮುಡಾಕ್ಕೂ ಈ ಆಸ್ತಿಗೂ ಸಂಬಂಧವಿಲ್ಲ. ಆಸ್ತಿ ಮೇಲೆ ಕಣ್ಣು ಹಾಕಿ ಹಲವರಿಂದ ಲಪಟಾಯಿಸುವ ಹುನ್ನಾರ ನಡೆದಿದೆ.''
"ಮೈಸೂರು ರಾಜವಂಶಸ್ಥರು ಮಾತ್ರ ನಮ್ಮನ್ನು ಪ್ರಶ್ನಿಸಬಹುದು. ಈ ಆಸ್ತಿ ರಕ್ಷಣೆ ಮಾಡುತ್ತಿರುವ ಕಾರಣಕ್ಕೆ ರಾಜ ಮನೆತನದವರೇ ನಮ್ಮನ್ನು ಇರಲು ಬಿಟ್ಟಿದ್ದಾರೆ,'' ಎಂದು ಅತಾವುಲ್ಲಾ ಖಾನ್ ಸ್ಪಷ್ಟಪಡಿಸಿದ್ದಾರೆ.