ಲಾಕ್ ಡೌನ್ ಮುಂದುವರೆಸುವ ಬಗ್ಗೆ ಚಿಂತನೆ: ಸಚಿವ ಶ್ರೀರಾಮುಲು
ಮೈಸೂರು, ಏಪ್ರಿಲ್ 08: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಇಂದು ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ವೈರಸ್ ಹಾಟ್ ಸ್ಪಾಟ್ ನಗರಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಜೊತೆಗೆ ಸಭೆ ನಡೆಸಿ, ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ""ನಾವು ಬಳ್ಳಾರಿಯಿಂದ ಬಂದಿದ್ದೇವೆ. ತಿನ್ನಲು ಊಟ ಇಲ್ಲ. ಉಳಿದುಕೊಳ್ಳಲು ಪಿಜಿಯವರು ಅವಕಾಶ ನೀಡುತ್ತಿಲ್ಲ. ಕೊರೊನಾ ಕೆಲಸ ಮಾಡುವ ನಾವು ಎಲ್ಲಿಗೆ ಹೋಗಬೇಕು'' ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮುಂದೆ ವೈದ್ಯಕೀಯ ವಿದ್ಯಾರ್ಥಿಗಳ ಅಳಲು ತೊಡಿಕೊಂಡರು.
ತಬ್ಲಿಘಿ ಜಮಾತ್ ಮರ್ಕಾಜ್ : ಭಾರತದ ಕೊರೊನಾ ಹಾಟ್ ಸ್ಪಾಟ್ ಎನಿಸಿದ್ದೇಕೆ?
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರ್ಷವರ್ಧನ್, ""ಕೊರೊನಾ ಹರಡಿಸಿದ ಜ್ಯುಬಿಲಿಯಂಟ್ ಕಾರ್ಖಾನೆ ಪರವಾಗಿ ಒತ್ತಡ ಬರುತ್ತಿದೆ. ಒತ್ತಡ ಹಾಕುತ್ತಿರುವವರಲ್ಲಿ ರಾಜಕಾರಣಿಗಳೂ ಇದ್ದಾರೆ, ಉದ್ಯಮಿಗಳೂ ಇದ್ದಾರೆ. ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಮೇಯವೇ ಇಲ್ಲ. ಒತ್ತಡ ಹಾಕುವವರು ಯಾರು ಎಂಬುದನ್ನು ನಾನು ಹೇಳುವುದಿಲ್ಲ ಎಂದು ಹೇಳಿದರು.
ಪಿಜಿನೂ ಇಲ್ಲ, ಊಟನೂ ಇಲ್ಲ
ಜಿಲ್ಲಾ ಪಂಚಾಯಿತಿ ಎದುರು ಸಚಿವರ ಮುಂದೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು. ""ದೂರದ ಊರುಗಳಿಂದ ಬಂದಿದ್ದೇವೆ.
ಹೆಂಡತಿ, ಮಕ್ಕಳು, ಅಪ್ಪ, ಅಪ್ಪನನ್ನು ನೋಡಿ ಎಷ್ಟೋ ದಿನಗಳಾಗಿದೆ. ನಮ್ಮನ್ನು ಐಸೋಲೇಷನ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಹಾಕುತ್ತಿದ್ದಾರೆ.
ಒಂದು ವಾರ ಡ್ಯೂಟಿ ಮುಗಿಸಿ ಬಂದರೆ ಎರಡು ವಾರ ಕ್ವಾರಂಟೈನ್ ಇರಬೇಕು. ಕ್ವಾರಂಟೈನ್ ಮುಗಿಸಿ ಬಂದರೆ ನಮಗೆ ಪಿಜಿ ಸಿಗುತ್ತಿಲ್ಲ,
ಊಟಕ್ಕೂ ಸಮಸ್ಯೆಯಾಗಿದೆ'' ಎಂದು ಹೇಳಿಕೊಂಡರು.
ಲಾಕ್ ಡೌನ್ ಮುಂದುವರೆಯಬೇಕು
ವೈದ್ಯಕೀಯ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವ ಶ್ರೀರಾಮುಲು, ಊಟ ವಸತಿ ಸೌಲಭ್ಯವನ್ನು ಜಿಲ್ಲಾಧಿಕಾರಿಗಳು ಕಲ್ಪಿಸುತ್ತಾರೆ.
ಸಂಬಳ ಕೊಡಿಸುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.
ಕೊರೊನಾ ಪಾಸಿಟಿವ್ ಆಗಿರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ನಾಳೆ ಸಚಿವ ಸಂಪುಟ ಸಭೆ
ಬೆಂಗಳೂರು, ಮೈಸೂರು, ಕಲಬುರಗಿ ಜಿಲ್ಲೆಗಳನ್ನು ರೆಡ್ಝೋನ್ ಅಂತ ಘೋಷಣೆ ಮಾಡಿದ್ದೇವೆ. ಈ ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವು ಮಾಡಲು ಸಾಧ್ಯವೇ ಇಲ್ಲ. 18 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯುವ ಅನಿವಾರ್ಯತೆ ಇದೆ ಎಂದರು.
ರಾಜ್ಯದಲ್ಲಿ ಕರೊನಾ ಸೋಂಕು ಹತೋಟಿಗೆ ಬರುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರ ಸ್ಥಿತಿ ಆತಂಕ ಉಂಟು ಮಾಡುತ್ತಿದೆ. ಲಾಕ್ಡೌನ್ ಮುಂದುವರಿಯುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಮುಖ್ಯಮಂತ್ರಿಗಳ ಜೊತೆ ನಾಳಿನ ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.
ಜ್ಯುಬಿಲಿಯಂಟ್ ಕಾರ್ಖಾನೆ ವಿರುದ್ಧ ಕ್ರಮ
ಪಂಜಾಬ್ ಮುಖ್ಯಮಂತ್ರಿ ಏ.30 ರವರೆಗೆ ಲಾಕ್ಡೌನ್ ಮುಂದುವರಿಸುವ ಬಗ್ಗೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಮೈಸೂರು ಜಿಲ್ಲೆಯನ್ನು ರೇಡ್ ಜೋನ್ ಎಂದು ಘೋಷಿಸಲಾಗಿದೆ. ಸೋಂಕು ಹರಡಿದ ಜ್ಯುಬಿಲಿಯಂಟ್ ಕಾರ್ಖಾನೆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಈಗಾಗಲೇ ನೋಟೀಸ್ ನೀಡಲಾಗಿದೆ. ವೈರಸ್ ಸಂಪೂರ್ಣ ಹತೋಟಿಗೆ ಬರುವವರೆಗೆ ಕಾರ್ಖಾನೆ ಸ್ಥಗಿತಕ್ಕೆ ಆದೇಶಿಸಲಾಗಿದೆ ಎಂದು ಮೈಸೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದರು.