ಹುಣಸೂರಿಗೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಶ್ರೀರಾಮುಲು
ಮೈಸೂರು, ನವೆಂಬರ್ 24: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ದಿನಾಂಕ ಡಿಸೆಂಬರ್ 05 ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರವಾಗಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ ಪ್ರಚಾರ ಆರಂಭಿಸಿದ ಶ್ರೀರಾಮುಲು, ಹುಣಸೂರು ಕ್ಷೇತ್ರಕ್ಕೆ ವಿಶ್ವನಾಥ್ ಅಭ್ಯರ್ಥಿಯಲ್ಲ, ಶ್ರೀರಾಮುಲುನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಬೇಕೆಂದು ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಮನವಿ ಮಾಡಿದರು.
ಹುಣಸೂರು ಉಪ ಚುನಾವಣೆ: ಜಿಲ್ಲಾಡಳಿತದ ತಯಾರಿ ಹೇಗಿದೆ?
ವಿಶ್ವನಾಥ್ ಹಿರಿಯ ನಾಯಕರು, ಅನುಭವಿಗಳು ಅವರ ಸೇವೆ ಕ್ಷೇತ್ರಕ್ಕೆ ಬೇಕಿದೆ, ಎಲ್ಲರಿಗೂ ಒಳ್ಳೆಯದು ಬಯಸುವ ವ್ಯಕ್ತಿಯನ್ನು ಗೆಲ್ಲಿಸಿ. ವಿಸ್ವನಾಥ್ ಹಣ, ಅಧಿಕಾರಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿಲ್ಲ. ಬದಲಾಗಿ ಕ್ಷೇತ್ರದ ಅಭಿವೃದ್ದಿ ಮತ್ತು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದರು ಎಂದು ಹೇಳಿದರು.
ಮೈಸೂರನ್ನು ಇಬ್ಭಾಗ ಮಾಡಿ ಹೊಸ ಜಿಲ್ಲೆ ರಚಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ರಾಮುಲು ದೇವರಾಜ್ ಅರಸು ಜಿಲ್ಲೆ ಮಾಡಬೇಕೆಂಬ ಬೇಡಿಕೆ ಇದೆ, ಚುನಾವಣೆ ಬಳಿಕ ನಾನು, ಯಡಿಯೂರಪ್ಪ, ವಿಶ್ವನಾಥ್ ಹಾಗೂ ಎಲ್ಲರೂ ಸೇರಿ ಈ ಬಗ್ಗೆ ಸಮಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳತ್ತೇವೆ. ಕ್ಷೇತ್ರದ ಅನುದಾನ ವಿಚಾರದಲ್ಲಿ ಯಾವ ಅನ್ಯಾಯ ಮಾಡಲ್ಲ ಎಂದು ಹೇಳಿದರು.
ಹುಣಸೂರು ಚುನಾವಣೆ: ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವೆ ಬಿಗ್ ಫೈಟ್
ವಿಪಕ್ಷ ನಾಯಕ ಸಿದ್ಧರಾಮಯ್ಯ ಪದೇ ಪದೇ ಅನರ್ಹರು ಎಂದು ಹೇಳಿಕೆ ನೀಡುತ್ತಾರೆ. ಆದರೆ ಅದನ್ನು ಹೇಳಲು ಅವರಿಗೆ ನೈತಿಕತೆ ಇಲ್ಲ, ಜಿಲ್ಲೆಯ ಜನ ಈಗಾಗಲೇ ಸಿದ್ಧರಾಮಯ್ಯರನ್ನು ತೀರಸ್ಕರಿಸಿದ್ದಾರೆ. ಮತದಾರರೇ ಉಪ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.