ಮೈಸೂರಿನಲ್ಲಿ ಬೀಫ್ ಮಾಫಿಯಾ ? 5 ಹಸುಗಳನ್ನು ಕೊಂದ ದುಷ್ಕರ್ಮಿಗಳು
ಮೈಸೂರು, ಜನವರಿ 11 : ಗೋಮಾಂಸಕ್ಕಾಗಿ ಹಸುಗಳನ್ನ ಕದ್ದು ಅವುಗಳನ್ನು ಕೊಂದು ಮಾಂಸವನ್ನು ಕೊಂಡೊಯ್ದಿರುವಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ದಡದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಐದು ಹಸುಗಳ ಮಾಂಸ ಕಳ್ಳತನ ಮಾಡಲಾಗಿದೆ. ರೈತ ಮಹಿಳೆ ಚಿಕ್ಕಸಣ್ಣಮ್ಮ ಅವರ ಎರಡು ಹಸುಗಳು ರೈತ ಶಿವರಾಮು ಅವರ ಒಂದು ಹಸು ರೈತ ನಾಗರಾಜು ಅವರ ಎರಡು ಹಸುಗಳನ್ನ ರೈತ ನಂಜಪ್ಪ ಅವರ ಜೋಡಿ ಎತ್ತುಗಳನ್ನು ಕದ್ದೊಯ್ದ ಕಳ್ಳರು ಊರ ಹೊರಗೆ ಚರ್ಮ ಸುಲಿದು ಮಾಂಸವನ್ನ ತೆಗೆದುಕೊಂಡು ಹೋಗಿದ್ದಾರೆ. ಹಸುಗಳು ಸುಮಾರು 2 ಲಕ್ಷ ಬೆಲೆ ಬಾಳುವ ಹಸುಗಳಾಗಿದ್ದು ಇದರಲ್ಲಿ 80 ಸಾವಿರ ಬೆಲೆ ಬಾಳುವ ಜೋಡೆತ್ತುಗಳು ಸಹ ಸೇರಿವೆ.
ಹಸುಗಳನ್ನು ಕೊಟ್ಟಿಗೆಗೆ ಕಟ್ಟಿದ್ದ ವೇಳೆ ದುಷ್ಕರ್ಮಿಗಳು ಕೊಟ್ಟಿಗೆಗೆ ನುಗ್ಗಿ ರಾಸುಗಳನ್ನು ಕದ್ದೊಯ್ದಿದ್ದಾರೆ. ನಂತರ ಅವುಗಳನ್ನು ಗ್ರಾಮದ ಹೊರವಲಯಕ್ಕೆ ತಂದು ಹತ್ಯೆ ಮಾಡಿದ್ದಲ್ಲದೆ, ಮಾಂಸವನ್ನು ಮಾತ್ರ ತೆಗೆದುಕೊಂಡು ಹೋಗಿರುವುದು ಮಾತ್ರ ವಿಪರ್ಯಾಸವೇ ಸರಿ. ಮರುದಿನ ಬೆಳಿಗ್ಗೆ ಸ್ಥಳೀಯರಿಗೆ ಈ ವಿಚಾರ ಗೊತ್ತಾಗಿದೆ. ಕೂಡಲೇ ಅವರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.