ಮೈಸೂರಿನಲ್ಲಿ ಹೊಸ ರೀತಿಯಲ್ಲಿ ಕಳ್ಳತನಕ್ಕೆ ಸ್ಕೆಚ್, ಕಳ್ಳರು ಹೇಗೆಲ್ಲಾ ದೋಚಿದ್ದಾರೆ ಗೊತ್ತಾ?
ಮೈಸೂರು, ನವೆಂಬರ್ 22: ನಗರದ ವಿವಿಧ ಬಡಾವಣೆಗಳಲ್ಲಿ ಕಳೆದೊಂದು ವಾರದಿಂದೀಚೆಗೆ 4 ಮನೆಗಳಲ್ಲಿ ತಮ್ಮ ಕೈ ಚಳಕ ತೋರಿರುವ ಕಳ್ಳರು, ಸುಮಾರು 9.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 70 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ವಿಶೇಷವೆಂದರೆ ಈ ಬಾರಿ ಕಳ್ಳರು ಬೀಗ ಹಾಕಿರುವ ಮನೆಗಳನ್ನೇ ತಮ್ಮ ಕುಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಮನೆಯ ಮುಂದೆ ಬಿದ್ದಿರುವ 2-3 ದಿನಗಳ ದಿನಪತ್ರಿಕೆಗಳನ್ನು ನೋಡಿಯೇ ಕಳ್ಳರು ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಮಳವಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು!
ಮೊದಲನೇ ಪ್ರಕರಣದಲ್ಲಿ ಶಿಕ್ಷಕರ ಬಡಾವಣೆ ನಿವಾಸಿ ಅಶೋಕ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅವರು ನ.16 ರಿಂದ 18 ರವರೆಗೆ ಕುಟುಂಬ ಸಮೇತ ತಮ್ಮ ಊರಿಗೆ ಹೋಗಿದ್ದರು. ಈ ನಡುವೆ ಮನೆ ಮುಂಬಾಗಿಲು ಮೀಟಿ ಕಳ್ಳರು ಒಳ ನುಗ್ಗಿದ್ದಾರೆ.
ಈ ಸಂಬಂಧ ಮನೆ ಮಾಲೀಕರಾದ ಕೆ.ಸಿ.ನಾಗರಾಜು ಅವರು ದೂರವಾಣಿ ಮೂಲಕ ಅಶೋಕ್ ಅವರಿಗೆ ಕಳ್ಳತನದ ಮಾಹಿತಿ ನೀಡಿದ್ದರು. ಕೂಡಲೇ ಮನೆಗೆ ಬಂದ ಅವರು ಪರಿಶೀಲನೆ ನಡೆಸಿದಾಗ 2 ಚಿನ್ನದ ನಕ್ಲೇಸ್, 2 ಚಿನ್ನದ ಸರ, 2 ಚಿನ್ನದ ಬಳೆ, ಮಕ್ಕಳ 2 ಬಳೆ, ಸೊಂಟದ ಚೈನ್, 14 ಕಿವಿ ಓಲೆಗಳು, 1 ಸೆಟ್ ಡೈಮಂಡ್ ಬಳೆ, 1 ಬೆಳ್ಳಿತಟ್ಟೆ, ಬೆಳ್ಳಿ ದೀಪ ಇನ್ನಿತರ ವಸ್ತುಗಳು, 70 ಸಾವಿರ ರೂ. ನಗದು ಸೇರಿದಂತೆ 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿರುವುದು ತಿಳಿದುಬಂದಿದೆ.
ಶಿಕ್ಷಕರ ಬಡಾವಣೆಯಲ್ಲಿ ಕಳ್ಳತನ
ಹಾಗೆಯೇ ಎರಡನೇ ಪ್ರಕರಣದಲ್ಲಿ ಶಿಕ್ಷಕರ ಬಡಾವಣೆ ನಿವಾಸಿ ಎಸ್.ಬಸವರಾಜಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅವರು, ನ.16ರಂದು ಮಧ್ಯಾಹ್ನ ಮನೆಯ ಡೋರ್ ಲಾಕ್ ಮಾಡಿಕೊಂಡು ಸ್ವಂತ ಕಾರ್ಯದ ನಿಮಿತ್ತ ಕಾಂಚೀಪುರಂಗೆ ಹೋಗಿದ್ದರು. 18ರಂದು ಬೆಳಗಿನ ಜಾವ ಮನೆಗೆ ವಾಪಸಾದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕಳ್ಳರು ಮನೆ ಬಾಗಿಲು ಒಡೆದು ಒಳ ನುಗ್ಗಿ 18 ಗ್ರಾಂ ಚಿನ್ನವಿರುವ ಹವಳದ ಸರ, 16 ಜೊತೆ ವಿವಿಧ ಮಾದರಿಯ ಚಿನ್ನದ ಓಲೆಗಳು, 1 ಜೊತೆ 10 ಗ್ರಾಂ ತೂಕವಿರುವ ನಕ್ಷತ್ರ ಆಕಾರದ ಓಲೆ, 10 ಗ್ರಾಂ ತೂಕವಿರುವ ಪ್ಲೇಟ್ ಓಲೆ, 10 ಗ್ರಾಂ ತೂಕವಿರುವ ಓಲೆ ಮತ್ತು ಜುಮುಕಿ 10 ಗ್ರಾಂ ಇರುವ ಬಿಳಿ ಉಂಗುರ, 10 ಗ್ರಾಂನ 1 ಬಳೆ ಸೇರಿದಂತೆ 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಇಲ್ಲೂ ಹಾಗೇ ನಡೆದಿದೆ
ಮೂರನೇ ಪ್ರಕರಣದಲ್ಲಿ ಡಾ.ರಾಜ್ ಕುಮಾರ್ ರಸ್ತೆ ನಿವಾಸಿ ಚಂದ್ರಶೇಖರ್ ಎಂಬುವವರ ಮನೆಯಲ್ಲಿ ಕಳವು ನಡೆದಿದೆ. ಅವರು ಈಗ್ಗೆ 15 ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿರುವ ಅವರ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿದ್ದ ಅವರ ತಂಗಿ ಗೀತಾ ನ.17ರಂದು ಸಂಜೆ ಬೀಗ ಹಾಕಿಕೊಂಡು ಕೆ.ಆರ್. ಪೇಟೆಗೆ ಹೋಗಿದ್ದರು. ನಂತರ ಕಳವು ನಡೆದಿದೆ.
ಬೀರುವಿನಲ್ಲಿದ್ದ 3 ಗ್ರಾಂನ ಚಿನ್ನದ ಪೆಂಡೆಂಟ್, 7 ಗ್ರಾಂನ ಇಂದು ಚಿನ್ನದ ಸರ, 3 ಗ್ರಾಂ ಚಿನ್ನದ ಉಂಗುರ, 4 ಜೊತೆ ಚಿನ್ನದ ಓಲೆಗಳು, ಚಿನ್ನದ ಗುಂಡು, ಬೆಳ್ಳಿ ಸಾಮಾನುಗಳು, ನಗದು ಸೇರಿದಂತೆ ಸುಮಾರು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಕೂಡಲೇ ಅವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೈಸೂರಲ್ಲಿ ವ್ಯಾನಿಟಿ ಬ್ಯಾಗ್, ಚಿನ್ನ ಎಗರಿಸುತ್ತಿದ್ದ ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದರು
ಚಿಲಕ ಮುರಿದು ಕಳ್ಳತನ
ನಾಲ್ಕನೇ ಪ್ರಕರಣದಲ್ಲಿ ಹೆಬ್ಬಾಳು ನಿವಾಸಿ ಆರ್.ಅಪ್ಪಾಜಿಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅವರು, ನ.17ರಂದು ಸಂಜೆ 7 ಗಂಟೆ ಸಮಯದಲ್ಲಿ ತಾವು ಕೆಲಸ ಮಾಡುವ ವಿಜಯ ಕರ್ನಾಟಕ ಪ್ರೆಸ್ ನಲ್ಲಿ ಕೆಲಸ ಮುಗಿಸಿಕೊಂಡು ಮುಂಜಾನೆ 3.30 ಗಂಟೆಗೆ ಮನೆಗೆ ಬಂದಾಗ ಮನೆಯ ಮುಂದಿನ ಬಾಗಿಲಿನ ಡೋರ್ ಲಾಕ್ ಮೀಟಿ, ಚಿಲಕ ಮುರಿದು ಬಾಗಿಲು ತೆರೆದಿದ್ದುದು ಕಂಡುಬಂದಿದೆ.
ಮನೆಯ ಒಳಗೆ ಪರಿಶೀಲನೆ ನಡೆಸಿದಾಗ ಕಳ್ಳರು ಮನೆಯ ರೂಮಿನ ಬೀಗ ತೆರೆದು ಬೀರುವಿನಲ್ಲಿಟ್ಟಿದ್ದ 22 ಗ್ರಾಂ ತೂಕದ ಕತ್ತಿನ ಚಿನ್ನದ ಸರ, 11 ಗ್ರಾಂ ತೂಕದ 2 ಬಿಳಿ ಕಲ್ಲಿನ ಉಂಗುರಗಳು, 8 ಗ್ರಾಂ ತೂಕದ 1 ಜೊತೆ ಬಿಳಿಕಲ್ಲಿನ ಓಲೆ, ಜುಮುಕಿ, ಹಾಗೂ ಬೆಳ್ಳಿ ಸಾಮಾನು ಸೇರಿದಂತೆ 90 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ. ಕೂಡಲೇ ಅವರು ಹೆಬ್ಬಾಳು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ರಜಾ ದಿನದಂದೇ ಹೆಚ್ಚು ಕಳುವು
ಸಾಮಾನ್ಯವಾಗಿ ರಜೆ ದಿನಗಳಂದೇ ಹೆಚ್ಚಿನವರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿರುತ್ತಾರೆ. ಅಂಗಡಿಗಳು ಬೇಗನೆ ಬಾಗಿಲು ಹಾಕಿರುತ್ತವೆ. ಪೊಲೀಸರೂ ಒಂದು ರೀತಿಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಗಸ್ತು ಕಾರ್ಯದಲ್ಲಿ ಹೆಚ್ಚು ತೊಡಗಿರುವುದಿಲ್ಲ. ಹೀಗಾಗಿ, ಕಳ್ಳತನಕ್ಕೆ ರಜೆ ದಿನವನ್ನೇ ಕಳ್ಳರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಹೇಳುತ್ತಾರೆ.
ಎಲ್ಲ ಸರಣಿ ಕಳ್ಳತನಗಳ ಬೆರಳಚ್ಚು ವರದಿಗಳನ್ನು ಹೋಲಿಕೆ ಮಾಡಿ ನೋಡಿದರೆ ಇದು ಒಂದೇ ತಂಡದ ಕೆಲಸವೇ ಅಲ್ಲವೇ ಎಂಬುದು ತಿಳಿಯುತ್ತದೆ. ಜತೆಗೆ, ಈ ತಂಡ ವೃತ್ತಿಪರ ಕಳ್ಳತನ ನಡೆಸುವವರೇ ಆಗಿದ್ದಾರೆ. ಬಹಳ ನಾಜೂಕಾಗಿ ಹೆಚ್ಚು ಶಬ್ದವಾಗದ ಹಾಗೇ ಹ್ಯಾಂಡ್ ಲಾಕ್ಗಳನ್ನು ಮೀಟಿರುವುದು ಇದನ್ನು ಪುಷ್ಟೀಕರಿಸುತ್ತದೆ. '
ಬಹುತೇಕ ಎಲ್ಲ ಕಳ್ಳತನ ಆಗಿರುವ ಮನೆಗಳ ಮುಂದೆ ದಿನಪತ್ರಿಕೆಗಳು ಬಿದ್ದಿವೆ. ಇವುಗಳನ್ನು ಹಗಲಿನ ವೇಳೆ ಹೊಂಚು ಹಾಕಿ ಖಾತರಿಪಡಿಸಿಕೊಳ್ಳುವ ಕಳ್ಳರು ರಾತ್ರಿ ವೇಳೆ ಬಾಗಿಲು ಒಡೆಯುತ್ತಿದ್ದಾರೆ. ಪೊಲೀಸರು ರಾತ್ರಿ ವೇಳೆ ಗಸ್ತು ಕಾರ್ಯವನ್ನು ಹೆಚ್ಚಿಸಬೇಕಿದೆ. ರಾತ್ರಿ 12ರಿಂದ ನಸುಕಿನ 5ವರೆಗೆ ನಿರಂತರವಾದ ಗಸ್ತು ಅನಿವಾರ್ಯ ಎನಿಸಿದೆ.
ಮೈಸೂರಿನಲ್ಲಿ ಟ್ರಯಲ್ ನೋಡುವುದಾಗಿ ಹೇಳಿ ಕಾರಿನೊಂದಿಗೆ ಪರಾರಿಯಾದ ಖದೀಮ