ಶಾಲಾ-ಕಾಲೇಜುಗಳ ಆರಂಭದ ವಿಚಾರದಲ್ಲಿ ಆತುರ ಇಲ್ಲ: ಶ್ರೀರಾಮುಲು
ಮೈಸೂರು, ಅಕ್ಟೋಬರ್ 7: ಶಾಲಾ-ಕಾಲೇಜುಗಳ ಆರಂಭದ ವಿಚಾರದಲ್ಲಿ ರಾಜ್ಯ ಸರ್ಕಾರ ಆತುರತೆ ತೋರುವುದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಮೈಸೂರಿನಲ್ಲಿಂದು ಸ್ಪಷ್ಟಪಡಿಸಿದರು.
ಮೈಸೂರು ಪ್ರವಾಸದಲ್ಲಿರುವ ಆರೋಗ್ಯ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಮಾತನಾಡಿ, ""ನನಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತ ಮುಖ್ಯವಾಗಿದೆ. ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ನೀಡುವ ವರದಿ ಅಧರಿಸಿ ಶಾಲಾ ಕಾಲೇಜುಗಳ ಆರಂಭದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಸ್ಪಷ್ಟಪಡಿಸಿದರು.
ಮೈಸೂರು ದಸರಾ 2020: ಚಾಮುಂಡಿ ಬೆಟ್ಟ ತಲುಪಿದ ಜಂಬೂಸವಾರಿ ಉತ್ಸವಮೂರ್ತಿ
ಶಾಲೆ ಆರಂಭಿಸಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ, ಒಂದು ವಾರದಲ್ಲಿ ಆರೋಗ್ಯ ಇಲಾಖೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ಎಲ್ಲಾ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದು ಸಚಿವರು ಹೇಳಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವ ರೀತಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಂಡರೋ, ಅದೇ ಶಾಲಾ-ಕಾಲೇಜು ಪ್ರಾರಂಭವಾದಾಗಲೂ ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ಪಡೆದರು.
ಸವಿಸ್ತಾರವಾದ ವರದಿ ಪಡೆದ ನಂತರ, ತಜ್ಞರ ಸಲಹೆಗಳನ್ನು ಪಡೆದು ಆದಷ್ಟು ಒಂದು ವಾರದೊಳಗೆ ಶಿಕ್ಷಣ ಇಲಾಖೆಗೆ, ಸಚಿವರಾದ ಸುರೇಶ್ ಕುಮಾರ್ ಅವರಿಗೆ ನೀಡುವ ಕೆಲಸವಾಗಲಿದೆ ಎಂದರು.
ಇಡೀ ಬಾರತದಲ್ಲಿ 17 ರಾಜ್ಯಗಳನ್ನು ಗುರುತಿಸಿದ್ದಾರೆ. 17 ರಾಜ್ಯಗಳಲ್ಲಿ 60 ಜಿಲ್ಲೆಗಳಲ್ಲಿ ಅದರಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ವಿಶೇಷವಾಗಿ ಬೆಂಗಳೂರು, ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚು ಇವೆ. ಸಾವಿನ ಸಂಖ್ಯೆ ಕೂಡ ಮೈಸೂರಿನಲ್ಲಿ ಹೆಚ್ಚುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಸಂಬಂಧ ದೇಶದ 16 ರಾಜ್ಯಗಳು ಹೆಚ್ಚಿನ ನಿಗಾ ವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಪ್ರಧಾನಿಗಳು ಸಲಹೆ ನೀಡಿದ್ದಾರೆ ಎಂದರು.
ಇಂದು ಮೈಸೂರು ಭಾಗದ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ದಸರಾ ಮಹೋತ್ಸವವನ್ನು ಮತ್ತಷ್ಟು ಸರಳವಾಗಿ, ಸುರಕ್ಷಿತವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.