ಬಿಜೆಪಿ ಜೊತೆ ಸದ್ಯ ಮೈತ್ರಿ ಇಲ್ಲ, ಎಚ್ ಡಿ ರೇವಣ್ಣ: ಆಮೇಲೆ?
Recommended Video
ಮೈಸೂರು, ಜುಲೈ 12: ಸಮ್ಮಿಶ್ರ ಸರಕಾರದ ಭವಿಷ್ಯ ತೂಗೊಯ್ಯಾಲೆಯಲ್ಲಿ ಇರುವಾಗಲೇ, ಜೆಡಿಎಸ್ ಮುಖಂಡ, ಸಚಿವ ಸಾ.ರಾ.ಮಹೇಶ್, ಬಿಜೆಪಿ ಮುಖಂಡರನ್ನು ಭೇಟಿಯಾಗಬೇಕೇ? ಕಾಕತಾಳೀಯ ಇದ್ದರೂ ಇರಬಹುದು..
ಎರಡನೇ ಆಷಾಢ ಶುಕ್ರವಾರದ ನಿಮಿತ್ತ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ತಾಯಿಯ ಆಶೀರ್ವಾದ ಇದ್ದಷ್ಟು ದಿನ ಸರಕಾರ ಇರುತ್ತೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದ್ದಾರೆ.
ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ
'ನೋಡ್ರೀ.. ಕುಮಾರಸ್ವಾಮಿಗೆ ಮುಖ್ಯಮಂತ್ರಿ ಹುದ್ದೆಯ ಅವಶ್ಯಕತೆಯಿಲ್ಲ, ಆದರೆ, ರಾಜ್ಯದ ಜನತೆಗೆ ಕುಮಾರಸ್ವಾಮಿಯ ಅವಶ್ಯಕತೆ ಇದೆ' ಎಂದು ರೇವಣ್ಣ ಹೇಳಿದ್ದಾರೆ.
ಸಾ.ರಾ. ಮಹೇಶ್, ಬಿಜೆಪಿ ಮುಖಂಡರನ್ನು ಭೇಟಿಯಾಗಿರುವ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಸದ್ಯಕ್ಕಂತೂ ಬಿಜೆಪಿ ಜೊತೆ ಹೋಗುವ ಬೆಳವಣಿಗೆ ನಡೆದಿಲ್ಲ ಎಂದು ರೇವಣ್ಣ ಸ್ಪಷ್ಟ ಪಡಿಸಿದ್ದಾರೆ.
ಕುಮಾರಸ್ವಾಮಿಯ ಹೆಸರಿನಲ್ಲಿ ಸಂಕಲ್ಪ ಮಾಡಿಸಿದ್ದೇನೆ, ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ದೇವತಾನುಗ್ರಹ ಇರುವ ತನಕ ನಮ್ಮ ಸರಕಾರವಿರುತ್ತದೆ ಎಂದು ಸಮ್ಮಿಶ್ರ ಸರಕಾರದ ಭವಿಷ್ಯವನ್ನು ದೇವರ ಮೇಲೆ ರೇವಣ್ಣ ಹಾಕಿದ್ದಾರೆ.
ಬಡ್ತಿ, ವರ್ಗಾವಣೆಗೆ 500 ಕೋಟಿ ಲಂಚ: ರೇವಣ್ಣ ವಿರುದ್ಧ ರಾಜ್ಯಪಾಲರಿಗೆ ದೂರು
ಚಾಮುಂಡೇಶ್ವರಿಯ ಆಶೀರ್ವಾದ ಕುಮಾರಸ್ವಾಮಿಯ ಮೇಲಿದೆ ಎಂದು ಹೇಳಿರುವ ರೇವಣ್ಣ, ಸರಕಾರಕ್ಕೆ ಏನೂ ಆಗಲ್ಲ ಎಂದು ಹೇಳಿ ಕಾರು ಹತ್ತಿದ್ದಾರೆ.