"ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಕುಟುಂಬದ ಹಸ್ತಕ್ಷೇಪವಿಲ್ಲ''
ಮೈಸೂರು, ಏಪ್ರಿಲ್ 5: ರಾಜ್ಯ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಕುಟುಂಬದವರ ಹಸ್ತಕ್ಷೇಪವಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ ಅವರ ಹೆಸರೇಳಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರ್ಕಾರದಲ್ಲಿ ಮಂತ್ರಿಗಳಿದ್ದೀವಿ, ಜಿಲ್ಲಾಡಳಿತ ಇದೆ, ಶಾಸಕರಿದ್ದಾರೆ, ಆಡಳಿತ ನಡೆಸುವವರಿದ್ದಾರೆ. ಆದರೆ ಪದೇ ಪದೇ ಮುಖ್ಯಮಂತ್ರಿ ಅವರ ಕುಟುಂಬದವರನ್ನು ಎಳೆದು ತರುವುದು ಸರಿಯಲ್ಲ ಎಂದು ತಿಳಿಸಿದರು.
ಸಹಕಾರ ಇಲಾಖೆಗೂ ಯಾರೂ ಹಸ್ತಕ್ಷೇಪ ಮಾಡಿಲ್ಲ
ಮುಖ್ಯಮಂತ್ರಿಗಳು ಮಾಡುವ ಒಳ್ಳೆಯ ಕೆಲಸಗಳನ್ನು ವಿರೋಧ ಪಕ್ಷದವರಿಂದ ಹೇಳಲು ಸಾಧ್ಯವಾಗುತ್ತಿಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ನಮ್ಮ ಸಹಕಾರ ಇಲಾಖೆಗೂ ಯಾರೂ ಹಸ್ತಕ್ಷೇಪ ಮಾಡಿಲ್ಲ. ಮೈಸೂರು ಉಸ್ತುವಾರಿ ಆಡಳಿತವನ್ನು ಸ್ವತಂತ್ರವಾಗಿ ನಡೆಸಲು ಮುಕ್ತ ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದರು.
ಬಿ.ವೈ ವಿಜಯೇಂದ್ರ ಅವರು ಪಕ್ಷದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಅವರ ಸಲಹೆ ಪಕ್ಷಕ್ಕೆ ಮಾತ್ರ ಸೀಮಿತ. ಸರ್ಕಾರ ನಡೆಸಲು ಸಿಎಂ ಸಮರ್ಥರಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅವರಿಗೆ ಎಲ್ಲಾ ರೀತಿಯ ನಿರ್ಧಾರ ಕೈಗೊಳ್ಳುವ ಪರಮಾಧಿಕಾರವಿದೆ ಎಂದರು.
ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಲಹರಣ
ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಎಂಬುದು ವಿರೋಧ ಪಕ್ಷದವರಿಂದ ಮಾತ್ರ ಇದೆ. ರಾಜ್ಯದಲ್ಲಿ ಯಾವ್ಯಾವ ಮುಖ್ಯಮಂತ್ರಿಗಳ ಕಾಲದಲ್ಲಿ ಯಾರು ಅಧಿಕಾರ ನಡೆಸಿದ್ದಾರೆ ಎಂಬುದು ಕರ್ನಾಟಕದ ಜನತೆಗೂ ಗೊತ್ತಿದೆ. ಸೂಕ್ತ ಸಮಯ ಬಂದಾಗ ನಾವೂ ಕೂಡ ಅದನ್ನೆಲ್ಲ ತಿಳಿಸಲಾಗುವುದು ಎಂದು ಸಚಿವ ಸೋಮಶೇಖರ್ ಹೇಳಿದರು. ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾವತ್ತಾದರೂ ಒಂದು ದಿವಸ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚಿಸಲಿಲ್ಲ. ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲಿಲ್ಲ. ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡಿದರು. ವಿಧಾನಸಭೆಯಲ್ಲಿ ನಡೆಯುವ ಚರ್ಚೆಯನ್ನು ರಾಜ್ಯದ ಜನರೆಲ್ಲಾ ವೀಕ್ಷಿಸುತ್ತಿರುತ್ತಾರೆ. ಜನರ ಕಷ್ಟ ಸುಖದ ಬಗ್ಗೆ ಮಾತನಾಡದೆ ಪ್ರತಿಭಟನೆ ನಡೆಸಿದರು ಎಂದರು.
ರಾಜ್ಯದ 224 ಕ್ಷೇತ್ರಗಳು ಕೂಡ ಒಂದೇ
ಕಾಂಗ್ರೆಸ್ ಶಾಸಕರ ಕ್ಷೇತ್ರಗಳು ಅನುದಾನ ಕೊರತೆ ಮಾಡಲಾಗುತ್ತಿದೆ ಎಂಬ ವಿಷಯ ಕುರಿತು ಮಾತನಾಡಿದ ಸಚಿವ ಸೋಮಶೇಖರ್, ಈ ಆರೋಪದಲ್ಲಿ ಹುರುಳಿಲ್ಲ. ಮುಖ್ಯಮಂತ್ರಿಗಳಿಗೆ ರಾಜ್ಯದ 224 ಕ್ಷೇತ್ರಗಳು ಕೂಡ ಒಂದೇ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂದು ತಾರತಮ್ಯ ಮಾಡುತ್ತಿಲ್ಲ. ಯಡಿಯೂರಪ್ಪ ಅವರು ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಒಂದು ಲಕ್ಷ ಕೋವಿಡ್ ಡೋಸ್
ಇದೇ ವೇಳೆ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಬಗ್ಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಯಾವ ಪ್ರವಾಸಿ ತಾಣವನ್ನು ಬಂದ್ ಮಾಡೋಲ್ಲ. ಕೊರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೋಳ್ಳುತ್ತೇವೆ. ಸಚಿವ ಸುಧಾಕರ್ಗೆ ಮನವಿ ಮಾಡಿದ್ದೇವೆ. ಇಂದು ಒಂದು ಲಕ್ಷ ಕೋವಿಡ್ ಡೋಸ್ ಕಳುಹಿಸುತ್ತಾರೆ. ನಾಳೆ ಬೆಂಗಳೂರಿಗೆ ಹೋಗಿ ಸಿಎಸ್ ಬಳಿ ಮಾತನಾಡಿ ಇನ್ನಷ್ಟು ಡೋಸ್ ಕಳುಹಿಸಲು ಮನವಿ ಮಾಡುತ್ತೇನೆ. ಕೆಲವು ಸಮಸ್ಯೆಗಳು ಇವೆ. ಅವುಗಳ ಜೊತೆಗೆ ಕೋವಿಡ್ ನಿಯಂತ್ರಣ ಮಾಡುತ್ತೇವೆ ಎಂದರು.