ಮೈಸೂರಿನ ಎಟಿಎಂ ಆಯಿತು, ಈಗ ಬ್ಯಾಂಕ್ ನಲ್ಲೂ 'ನೋ ಕ್ಯಾಶ್'
ಮೈಸೂರು, ಮಾರ್ಚ್ 19 : ಇಷ್ಟು ದಿನ ಎಟಿಎಂಗಳಲ್ಲಿ ಹಣವಿಲ್ಲ ಎಂಬ ಮಾತುಗಳು ಮೈಸೂರಿಗರಿಗೆ ಸಾಮಾನ್ಯವಾಗಿಬಿಟ್ಟಿತ್ತು. ಆದರೆ ಈಗ ಕಥೆಯೇ ಬೇರೆ. ಅಂದರೇನು ಎಲ್ಲ ಕಡೆ ಕ್ಯಾಶ್ ತುಂಬಿ ತುಳುಕುತ್ತಿದೆ ಅಂತಿಲ್ಲ. ಸದ್ಯಕ್ಕೆ ಬ್ಯಾಂಕ್ ಗಳಲ್ಲೇ ಹಣಕ್ಕೆ ಕೊರತೆ. ಮೈಸೂರಿನ ಹಲವು ಬ್ಯಾಂಕ್ ಗಳಲ್ಲಿ ಹಣವಿಲ್ಲದೆ ಗ್ರಾಹಕರು ಪರದಾಡುವಂತಾಗಿದೆ.
ನೋಟು ಅಪನಗದೀಕರಣದ ವೇಳೆ ಗ್ರಾಹಕರು ಅನುಭವಿಸಿದ ಸ್ಥಿತಿಯಂತೆ, ಈಗ ಹಣಕ್ಕಾಗಿ ಎಟಿಎಂನಿಂದ ಎಟಿಎಂಗೆ ಅಲೆದಾಡುವಂತಾಗಿದೆ. ಅರಮನೆ ನಗರಿಯ ಈ ಪರಿಸ್ಥಿತಿ ಈಗ ರಾಜ್ಯದ ಬಹುತೇಕ ಕಡೆ ಸಾಮಾನ್ಯವಾಗಿದೆ. ಮೈಸೂರು ನಗರದ ಬಹುಪಾಲು ಎಟಿಎಂಗಳಲ್ಲಿ 'ನೋ ಕ್ಯಾಶ್' ಎಂಬ ಬೋರ್ಡ್ ನೇತು ಹಾಕಿರುವುದು ಕಾಣಿಸಿಕೊಳ್ಳುತ್ತಿದೆ.
ಮೈಸೂರಿನ ಎಟಿಎಂಗಳಲ್ಲಿ ನಗದು ಇಲ್ಲದಕ್ಕೂ, ಎಲೆಕ್ಷನ್ ಗೂ ಏನು ಸಂಬಂಧ?
ಜನರು ಬಹಿರಂಗವಾಗಿ ಎಲೆಕ್ಷನ್ ಕ್ರಮದ ಬಗ್ಗೆ ಮಾತನಾಡುತ್ತಿದ್ದರೂ ಚುನಾವಣೆ ಆಯೋಗವಾಗಲಿ, ರಿಸರ್ವ್ ಬ್ಯಾಂಕ್ ಆಗಲಿ ಇದುವರೆಗೂ ಈ ಸಂಬಂಧ ಯಾವುದೇ ಪ್ರಕಟಣೆ ನೀಡಿಲ್ಲ. ಒಂದೆಡೆ ಎಟಿಎಂಗಳಲ್ಲಿ ನೋಟುಗಳ ಕಂತೆ ನೀರಿನಂತೆ ಬರಿದಾಗುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕ್ಗಳಿಗೆ ಹಣ ಬಾರದ ಕಾರಣ ಎಟಿಎಂಗಳಿಗೆ ತುಂಬಲೂ ಹಣದ ಕೊರತೆ ಎದುರಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
40 ಲಕ್ಷದ ಬದಲು ನಾಲ್ಕೈದು ಲಕ್ಷ ತುಂಬುತ್ತಾರೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಂತಹ ದಿಗ್ಗಜ ಬ್ಯಾಂಕ್ಗಳೇ ಎಟಿಎಂ ಕೇಂದ್ರವೊಂದಕ್ಕೆ 40 ಲಕ್ಷ ರುಪಾಯಿ ತುಂಬುವ ಬದಲು ಕೇವಲ ನಾಲ್ಕೈದು ಲಕ್ಷ ಹಣ ತುಂಬುವಂತಹ ಸ್ಥಿತಿ ಬಂದೊದಗಿದೆ. ಈ ಹಣ ಕೇವಲ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದೆ. ಗ್ರಾಹಕರು ನೇರವಾಗಿ ಬ್ಯಾಂಕಿಗೆ ಬಂದು ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್ ಬಿಐನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬ್ಯಾಂಕ್ ಸಿಬ್ಬಂದಿ ವರ್ಗಕ್ಕೆ ಕಸಿವಿಸಿ
ಹಣವಿಲ್ಲ ಎಂದು ಬೋರ್ಡ್ ಹಾಕಿದ್ದಕ್ಕೆ ಗ್ರಾಹಕರು ಬ್ಯಾಂಕ್ ಸಿಬ್ಬಂದಿಗೆ ದಿನವೂ ಹಿಡಿಶಾಪ ಹಾಕುತ್ತಿದ್ದಾರೆ. ಇದರಿಂದ ಬ್ಯಾಂಕ್ ಸಿಬ್ಬಂದಿ ವರ್ಗಕ್ಕೆ ಕಸಿವಿಸಿಯಾದಂತಾಗಿದೆ. ಡ್ರಾ ಮಾಡಿದ ಅಷ್ಟು ಹಣ ಯಾವುದೇ ವ್ಯವಹಾರಗಳಿಗೆ ಬಳಸಲಾಗುತ್ತಿಲ್ಲ. ಒಂದು ವೇಳೆ ಬಳಸುತ್ತಿದ್ದರೆ ಹಣ ವಾಪಸ್ ಬ್ಯಾಂಕ್ಗಳಿಗೆ ಹರಿದುಬರುತ್ತದೆ. ಈ ಹಣ ಎಲ್ಲೋ ಒಂದು ಕಡೆ ಸಂಗ್ರಹವಾಗುತ್ತಿದೆ. ಇದರಿಂದಲೇ ಬ್ಯಾಂಕ್ಗಳಿಗೆ ನಗದು ಕೊರತೆ ಎದುರಾಗಿದೆ. ಬಹುಶಃ ಚುನಾವಣೆ ಘೋಷಣೆ ಬಳಿಕ ಹಣದ ಹರಿವು ಹೆಚ್ಚಾಗಬಹುದು. ಆಗ ಈ ಸಮಸ್ಯೆ ಪರಿಹಾರವಾಗಬಹುದು ಎಂದು ಎಸ್ಬಿಐ ಎಟಿಎಂಗಳಿಗೆ ಹಣದ ಪೂರೈಕೆ ವ್ಯವಹಾರ ನಿರ್ವಹಿಸುತ್ತಿರುವ ಬ್ಯಾಂಕ್ ಸಿಬ್ಬಂದಿಯೊಬ್ಬರು ಹೇಳಿದರು.
ಕೆಲವೇ ಗಂಟೆಗಳಲ್ಲಿ ಹಣ ಖಾಲಿ
ಕೆಲವರು ಮೂರ್ನಾಲ್ಕು ಎಟಿಎಂ ಕಾರ್ಡ್ಗಳನ್ನು ತಂದು ಕಂತೆ ಕಂತೆ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಹಾಕಿದ ಕೆಲವೇ ಗಂಟೆಗಳಲ್ಲಿ ಹಣ ಖಾಲಿಯಾಗುತ್ತಿದೆ. ಆ ನಂತರ ಬರುವ ಗ್ರಾಹಕರು ಹಣವಿಲ್ಲದೆ ಬೇರೆ ಎಟಿಎಂಗಳಿಗೆ ತಡಕಾಡುವಂತಾಗಿದೆ ಎಂದು ಎಟಿಎಂ ಸೆಕ್ಯೂರಿಟಿ ಸಿಬ್ಬಂದಿ ಹೇಳುತ್ತಾರೆ.
ಬ್ಯಾಂಕ್ಗಳಿಂದ ಹಣ ಡ್ರಾ ಮಾಡುತ್ತಿರುವ ಪ್ರಮಾಣ ಹೆಚ್ಚಳ
ಎರಡು ತಿಂಗಳಿಂದ ಬ್ಯಾಂಕ್ಗಳಿಂದ ಹಣ ಡ್ರಾ ಮಾಡುತ್ತಿರುವ ಪ್ರಮಾಣ ಹೆಚ್ಚಿದ್ದು, ಕೆಲವು ಬ್ಯಾಂಕ್ಗಳಲ್ಲಿ ಕೆಲವರು ಒಂದೊಂದು ಬಾರಿಗೆ 5ರಿಂದ 10 ಲಕ್ಷ ರುಪಾಯಿ ಹಣ ಡ್ರಾ ಮಾಡುತ್ತಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ಬ್ಯಾಂಕ್ಗಳಿಗೆ ಹಣ ಹರಿದುಬರುತ್ತಿಲ್ಲ. ಹೆಚ್ಚಿನ ಮೊತ್ತ ಕೇಳಿ ಬರುವ ಗ್ರಾಹಕರಿಗೆ ಒಂದೇ ಬಾರಿಗೆ ಹಣ ಪೂರೈಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಯಾವಕಾಶ ಕೇಳುತ್ತೇವೆ. ಬಳಿಕ ಎರಡು -ಮೂರು ಕಂತಿನಲ್ಲಿ ನೀಡುತ್ತೇವೆ ಎಂದು ಕೆನರಾ ಬ್ಯಾಂಕ್ ಮ್ಯಾನೇಜರ್ ವೊಬ್ಬರು ಮಾಹಿತಿ ನೀಡಿದರು.
ಎರಡು ಸಾವಿರ ರುಪಾಯಿ ನೋಟುಗಳ ಪೂರೈಕೆ ಕಡಿಮೆ
ಎರಡು ಸಾವಿರ ರುಪಾಯಿ ನೋಟುಗಳ ಪೂರೈಕೆ ಕಡಿಮೆಯಾಗಿದ್ದರಿಂದ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ಸಮಸ್ಯೆಯಾಗಿದೆ. 2 ಸಾವಿರ ರುಪಾಯಿ ನೋಟುಗಳಿದ್ದರೆ 40 ಲಕ್ಷಗಳವರೆಗೆ ಒಂದು ಬಾರಿ ಎಟಿಎಂಗಳಿಗೆ ಹಣ ಲೋಡ್ ಮಾಡಬಹುದು. ಆದರೆ 500 ಮತ್ತು 200, 100 ರುಪಾಯಿಗಳ ನೋಟುಗಳಾದರೆ ಈ ಪ್ರಮಾಣ 20 ಲಕ್ಷ ರುಪಾಯಿಗಳಿಗಿಂತ ಕೆಳಗಿಳಿಯುತ್ತದೆ. ಎಟಿಎಂಗಳಲ್ಲಿ ಬೇಗನೇ ಹಣ ಖಾಲಿಯಾಗಲು ಇದು ಒಂದು ಕಾರಣ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸುತ್ತಾರೆ.
ಈ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ?
ರಿಸರ್ವ್ ಬ್ಯಾಂಕ್ ನಿಂದಲೇ ಬೇಕಾದಷ್ಟು ಹಣ ಬರುತ್ತಿಲ್ಲ. ಇದರಿಂದ ಬ್ಯಾಂಕ್ಗಳು ಇರುವ ಹಣದಲ್ಲೇ ಹೊಂದಿಸಬೇಕಾಗಿದೆ. ಮೂರ್ನಾಲ್ಕು ತಿಂಗಳಿಂದ ಈ ಸಮಸ್ಯೆ ಮೈಸೂರಿನಲ್ಲಿ ಮಾತ್ರವಲ್ಲ, ಎಲ್ಲ ಕಡೆ ಇದೆ. ಸದ್ಯಕ್ಕೆ ಗ್ರಾಹಕರೊಬ್ಬರು 2-3 ಲಕ್ಷ ರುಪಾಯಿ ಕೇಳಿದರೆ, ಕೇವಲ 25 ಸಾವಿರ ರುಪಾಯಿ ಪಾವಿತಿಸಬೇಕಾದ ಸ್ಥಿತಿಯಿದೆ. ಈ ಸಮಸ್ಯೆ ಯಾವಾಗ ಪರಿಹಾರವಾಗುತ್ತದೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.