ಕುಶಾಲತೋಪುಗೆ ಬಳಸುವ ಮೈಸೂರು ಅರಮನೆ ಫಿರಂಗಿಗಳ ಹಿಂದಿನ ರೋಚಕ ಕಥೆ
ಮೈಸೂರು, ಅಕ್ಟೋಬರ್.16: ಅರಮನೆಗೆ ಭೇಟಿ ನೀಡಿದರೆ ಇಲ್ಲಿರುವ ಹಳೆಯ ಕಾಲದ ಫಿರಂಗಿಗಳು ಆಕರ್ಷಿಸದಿರವು. ಅಷ್ಟೇ ಅಲ್ಲ, ಅವುಗಳನ್ನು ನೋಡಿದವರು ಒಂದಷ್ಟು ಕುತೂಹಲದಿಂದ ಇಣುಕಿ ನೋಡುವ ಪ್ರಯತ್ನ ಮಾಡುತ್ತಾರೆ.
ಅರಮನೆಗೊಂದು ಸುತ್ತುಹೊಡೆದರೆ ಇಲ್ಲಿರುವ ಚಿನ್ನದ ಸಿಂಹಾಸನದಿಂದ ಆರಂಭವಾಗಿ ಕಣ್ಣಿಗೆ ಕಾಣಸಿಗುವ ಪ್ರತಿಯೊಂದು ಕೂಡ ಇತಿಹಾಸದ ಕಥೆ ಹೇಳುತ್ತವೆ.
ಇವುಗಳ ಪೈಕಿ ಅರಮನೆಯ ಫಿರಂಗಿಗಳು ಕೂಡ ಒಂದಾಗಿವೆ. ಇವುಗಳು ದಸರಾ ಸಂದರ್ಭದಲ್ಲಿ ಹೆಚ್ಚಿನ ಪಾತ್ರವಹಿಸುತ್ತವೆ. ದಸರಾ ಜಂಬೂಸವಾರಿಯಲ್ಲಿ ಇವುಗಳಿಂದಲೇ ಕುಶಾಲತೋಪು ಸಿಡಿಸಲಾಗುತ್ತದೆ. ಜತೆಗೆ ಇವುಗಳ ಮೆರವಣಿಗೆಯೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಫಿರಂಗಿ ಹೊಂದಿದ ರಾಜರು ಯುದ್ಧದಲ್ಲಿ ಜಯಶೀಲರಾಗುತ್ತಿದ್ದರು.
ವಿಜಯದಶಮಿಯಂದು ವಜ್ರಮುಷ್ಠಿ ಕಾಳಗದಲ್ಲಿ ತೊಡೆ ತಟ್ಟಲು ಮುಂದಾದ ಜಟ್ಟಿಗಳು
ಅಂದು ಮೈಸೂರು ರಾಜರ ಶಕ್ತಿಯಾಗಿ ಹೋರಾಟದಲ್ಲಿ ಗಮನಸೆಳೆದಿದ್ದ ಫಿರಂಗಿಗಳು ಈಗ ಮ್ಯೂಸಿಯಂ ಸೇರಿವೆ. ದಸರಾ ಸಂದರ್ಭದಲ್ಲಿ ಹೊರ ತೆಗೆದು ಸ್ವಚ್ಛಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲು ಮತ್ತು ಮೆರವಣಿಗೆಗೆ ಬಳಸಲಾಗುತ್ತದೆ.
ಈಗ ಫಿರಂಗಿಗಳನ್ನು ಗಜಪಡೆ ಮತ್ತು ಕುದುರೆಗಳು ಬೆದರದಂತೆ ಸಿಡಿಮದ್ದು ತಾಲೀಮಿಗೆ ಬಳಸಿಕೊಳ್ಳಲಾಗುತ್ತಿದೆ. ಮುಂದೆ ಓದಿ...
ಸುಲಭದ ಕೆಲಸವಲ್ಲ
ಇನ್ನು ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುರ್ಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಬಾರಿ ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ.
ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ. ಇದನ್ನು ಸಿಎಆರ್ ಪೊಲೀಸರು ಚಾಚುತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಫಿರಂಗಿ ಸಿಡಿಸುವಾಗ ಬಹಳಷ್ಟು ಅವಘಡ ಸಂಭವಿಸಿದೆ ಹೀಗಾಗಿ ಸಿಬ್ಬಂದಿಗೆ ವಿಮೆ ಮಾಡಿಸುವ ಯೋಜನೆ ಜಾರಿಗೆ ಬಂದಿದೆ.
1,001 ಮೆಟ್ಟಿಲೇರಿ ಚಾಮುಂಡಿ ತಾಯಿಯ ದರ್ಶನ ಪಡೆದ ನಟಿ ಹರಿಪ್ರಿಯಾ
ಕುಶಾಲತೋಪು ಸಿಡಿಸುವುದಾದರೂ ಹೇಗೆ?
ಇಷ್ಟಕ್ಕೂ ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದಾದರೂ ಹೇಗೆ ಎನ್ನುವುದನ್ನು ನೋಡುವುದಾದರೆ ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ.
ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ. ಬಳಿಕ ಆ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ.
ಇದು ಸುಲಭದ ಕೆಲಸವಲ್ಲ ಏಕೆಂದರೆ ಇಲ್ಲಿ ಒಂದೇ ಚಿಕ್ಕ ಕಿಡಿಯಿದ್ದರೂ ಮತ್ತೆ ಮದ್ದು ತುಂಬಿಸುವಾಗ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಅವಘಡಗಳು ಸಂಭವಿಸಿವೆ
ಕುಶಾಲ ತೋಪು ಸಿಡಿಸುವಾಗ ಅವಘಡಗಳು ಸಂಭವಿಸಿ ಅದನ್ನು ಸಿಡಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಘಟನೆಗಳೂ ಹಲವಷ್ಟು ನಡೆದಿವೆ. 2013ರಲ್ಲಿ ಹಾಗೂ 2014ರಲ್ಲೂ ಅವಘಡಗಳು ಸಂಭವಿಸಿ, ಕುಶಾಲು ತೋಪು ಸಿಡಿಸುತ್ತಿದ್ದ ಸಿಬ್ಬಂದಿ ಗಾಯಗೊಂಡಿದ್ದೂ ಇದೆ.
ದಶಕಗಳ ಹಿಂದೆ ಸಿಎಆರ್ ಪೊಲೀಸ್ ಸಿಬ್ಬಂದಿ ಪರಶುರಾಮ್ ಎಂಬುವರು ಕುಶಾಲ ತೋಪು ಸಿಡಿಸುವ ಸಂದರ್ಭ ಅವರ ಇಡೀ ಮೈಸುಟ್ಟಿತ್ತಂತೆ. 2014ರಲ್ಲಿ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಸಂದರ್ಭ ಕುಶಾಲ ತೋಪು ಸಿಡಿಸಿದಾಗ ಸಿಎಆರ್ ಪೊಲೀಸ್ ರಾಜು ಎಂಬುವರಿಗೆ ಗಾಯವಾಗಿತ್ತು.
ಈಗ ಪ್ರವಾಸಿಗರ ಪ್ರಮುಖ ಆಕರ್ಷಣೆ
ಅವಘಡ ತಪ್ಪಿಸುವ ಸಲುವಾಗಿ ಸಿಬ್ಬಂದಿಗಳಿಗೆ ಅಗ್ನಿ ನಿರೋಧಕ ಜಾಕೆಟ್ ಗಳನ್ನು ನೀಡಲಾಗುತ್ತದೆ. ಏನೇ ಆದರೂ ಫಿರಂಗಿ ಸಿಡಿಸುವಾಗ ಸಿಬ್ಬಂದಿ ಮೈಯ್ಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅವಘಡ ಖಚಿತ. ಇನ್ನು ನಾವು ಫಿರಂಗಿಗಳ ಇತಿಹಾಸವನ್ನು ಮೆಲುಕು ಹಾಕಿದರೆ ಅವುಗಳ ಬಳಕೆ ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ.
ಇದನ್ನು ಮೊಟ್ಟ ಮೊದಲಿಗೆ 1260ರಲ್ಲಿ ಚೀನಿಯರು ಆವಿಷ್ಕರಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಆರಂಭಿಸಿದರು. 13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎನ್ನಲಾಗುತ್ತಿದೆ.
16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆಯಿತು. ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 10 ಅಡಿ ಉದ್ದ, 9,100 ಕೆ.ಜಿ.ತೂಕದ ಉಕ್ಕಿನ ಫಿರಂಗಿಗಳಿತ್ತು ಎನ್ನುವುದಕ್ಕೆ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿರುವ ಫಿರಂಗಿ ಸಾಕ್ಷಿಯಾಗಿದೆ.
ಅದು ಏನೇ ಇರಲಿ ಇತಿಹಾಸದ ಪುಟಗಳನ್ನು ನೆನಪಿಸುವ ಅರಮನೆಯ ಫಿರಂಗಿಗಳು ಇದೀಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನಸೆಳೆಯುತ್ತಿರುವುದಂತು ಸತ್ಯ.