ಮಡಿಕೇರಿಯಲ್ಲಿ ಭಾರೀ ಮಳೆ; ಬಸ್ ಇಲ್ಲ, ಪರೀಕ್ಷೆ ಇಲ್ಲ, ನೆಮ್ಮದಿ ಇಲ್ಲ
ಮೈಸೂರು, ಆಗಸ್ಟ್ 17 : ಮಡಿಕೇರಿಯಲ್ಲಿ ಸುರಿಯುತ್ತಿರುವ ತೀವ್ರ ಮಳೆ, ಜತೆಗೆ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮೈಸೂರಿನಿಂದ ಮಡಿಕೇರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ಕೆಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಂದ ದಾಖಲೆ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ.
ಇತ್ತ ಎಚ್.ಡಿ.ಕೋಟೆ ತಾಲೂಕಿನ ತಾರಕ ಹಾಗೂ ನುಗು ಜಲಾಶಯಗಳಿಂದಲೂ 9,400 ಕ್ಯುಸೆಕ್ ನೀರು ಬಿಡಲಾಗಿದ್ದು, ನಾಲ್ಕು ಜಲಾಶಯಗಳಿಂದ ಒಟ್ಟು 2.90 ಲಕ್ಷ ಕ್ಯುಸೆಕ್ ನೀರು ಹೊರ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ಎರಡು ಬದಿಯ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಕರ್ನಾಟಕದ ಪ್ರವಾಹ ಪೀಡಿತರ ರಕ್ಷಣೆಗೆ ಸೇನಾಪಡೆ : ಕುಮಾರಸ್ವಾಮಿ
ಮೈಸೂರಿನಿಂದ ಮಡಿಕೇರಿಗೆ ನಿತ್ಯ 150 ಕೆಎಸ್ ಆರ್ಟಿಸಿ ಬಸ್ಗಳ ಸಂಚಾರವಿದ್ದು, ಗುರುವಾರ ಬೆಳಗ್ಗೆ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿವೆ. ಆದ್ದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರಿನ
ಕೆಎಸ್ ಆರ್ ಟಿಸಿ ಗ್ರಾಮಾಂತರದ ವಿಭಾಗೀಯ ನಿಯಂತ್ರಣಾಧಿಕಾರಿ ವಾಸು ತಿಳಿಸಿದ್ದಾರೆ.
ಇತ್ತ ಮಳೆಯ ಕಾರಣದಿಂದ ಮೈಸೂರು ನಗರ ಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಿದ್ದು, ಆಗಸ್ಟ್ 19ರಂದು ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿಗೆ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಪರೀಕ್ಷೆಯ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ ಮುಂತಾದ ಕಡೆಗಳಲ್ಲಿ ಭಾರಿ ಮಳೆಯಾಗಿರುವ ಕಾರಣ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಮೈಸೂರು ರೋಟರಿ ಮತ್ತು ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯರು ಸಂತ್ರಸ್ತರಿಗೆ ಆಹಾರ ಪದಾರ್ಥ ಒದಗಿಸಲು ಮುಂದಾಗಿದ್ದಾರೆ.
ಮಡಿಕೇರಿ ಮಳೆಯಲ್ಲಿ ಸಿಲುಕಿದವರ ಕರುಣಾಜನಕ ಕಥೆ
ಆಹಾರ ಪದಾರ್ಥಗಳು, ಕುಡಿಯುವ ನೀರಿನ ಬಾಟಲಿಗಳು, ಬೆಡ್ ಶಿಟ್ ಗಳು, ಮೆಡಿಕಲ್ ಕಿಟ್ ಗಳು, ಬಟ್ಟೆಗಳನ್ನು ಸಂತ್ರಸ್ತರಿಗೆ ನೀಡಲು 10ಕ್ಕೂ ಹೆಚ್ಚು ಮಂದಿ ಮೈಸೂರಿನಿಂದ ಶುಕ್ರವಾರ ತೆರಳಲಿದ್ದಾರೆ. ರೋಟರಿ ವೆಸ್ಟ್ ಅಂಡ್ ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯರು ಈಗಾಗಲೇ ಸಂತ್ರಸ್ತರ ಸಹಾಯಕ್ಕೆ ನಿಂತಿದ್ದು, ಸಂಘದ ವತಿಯಿಂದ ಹಣವನ್ನು ಸಂಗ್ರಹಿಸಿ ಸಹಾಯ ನೀಡುವುದಾಗಿ ತಿಳಿಸಿದೆ.
ಸಹಾಯಹಸ್ತದ ಮಾಹಿತಿ
ಮಳೆ ಅನಾಹುತ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಮೈಸೂರು ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ನಾಲ್ವರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪ್ರೊಬೇಷನರಿ ತಹಸೀಲ್ದಾರ್ ಕೆ.ಆರ್.ರಕ್ಷಿತ್ (9906844669), ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆಯವರೆಗೆ ತಹಶೀಲ್ದಾರ್ ಕೆ.ಎಂ. ಮಹೇಶ್ ಕುಮಾರ್(9739721530), ರಾತ್ರಿ 10 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಪಿ.ಎನ್. ನಾಗ ಪ್ರಶಾಂತ್ (9916090800), ಎನ್.ಎ. ಕುಂಜಿ ಅಹಮ್ಮದ್ (9740125662) ಕಾರ್ಯ ನಿರ್ವಹಿಸಲಿದ್ದಾರೆ.