ಸಿಬ್ಬಂದಿ ಸೋಗಿನಲ್ಲಿ ರೋಗಿಯ ಚಿನ್ನದ ಸರ ಕಸಿದು ಪರಾರಿ
ಮೈಸೂರು, ಜೂನ್ 11 : ವೈದ್ಯನ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಮಾಡುತ್ತಿದ್ದ ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದವು. ಈಗ ಅದು ಖಾಸಗಿ ಆಸ್ಪತ್ರೆಗೂ ವ್ಯಾಪಿಸಿದೆ. ಆಸ್ಪತ್ರೆ ಸಿಬ್ಬಂದಿಯಂತೆ ವರ್ತಿಸಿದ ಕಳ್ಳನೊಬ್ಬ ರೋಗಿಯೊಬ್ಬರಿಂದ 32 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಮೈಸೂರಿನ ಕುವೆಂಪು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಎಚ್ ಡಿ ಕೋಟೆ ನಿವಾಸಿ ಶೋಭಾರಾಣಿ ಎಂಬುವವರ ಪುತ್ರಿ ಸುಜಾತಾ ಎಂಬುವರೇ ವಂಚನೆಗೆ ಒಳಗಾದವರು. ಸುಜಾತ ಅವರು ಜ್ವರ, ವಾಂತಿಯಿಂದ ಅಸ್ವಸ್ಥರಾಗಿದ್ದು, ಅವರನ್ನು ತಪಾಸಣೆಗಾಗಿ ಕುವೆಂಪು ನಗರದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು, ರಕ್ತ ಪರೀಕ್ಷೆ ಹಾಗೂ ಇನ್ನಿತರ ತಪಾಸಣೆಗೆ ಸಲಹೆ ನೀಡಿದ್ದರು. ಅದರಂತೆ ತುರ್ತು ಚಿಕಿತ್ಸಾ ಘಟಕದಲ್ಲಿ ಆಕೆಯ ಪೋಷಕರನ್ನು ಕೂರಿಸಿದ್ದರು. ಈ ವೇಳೆ ಸಿಬ್ಬಂದಿ ರೀತಿ ಅಲ್ಲಿಗೆ ಬಂದ ಕಳ್ಳನೊಬ್ಬ, ಸುಜಾತಾ ಅವರನ್ನು ಕೊಠಡಿಯಲ್ಲಿ ಮಲಗಿಸಲು ಸೂಚನೆ ನೀಡಿದ್ದಾನೆ. ಮೊದಲಿಗೆ ಆತನೊಂದಿಗೆ ಮಾತನಾಡಿದ ಪೋಷಕರು, ವೈದ್ಯರು ಹೇಳಿದಲ್ಲಿ ಮಲಗಿಸುತ್ತೇವೆ ಎಂದಿದ್ದಾರೆ. ಆತ ಪದೇ ಪದೇ ಒತ್ತಾಯಿಸಿದ ಕಾರಣ ಸುಜಾತಾ ಅವರನ್ನು ಕೊಠಡಿಯಲ್ಲಿ ಮಲಗಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ದಾದಿಯರು, ಪೋಷಕರಿಗೆ ಹೊರಗೆ ಕೂರುವಂತೆ ಸೂಚನೆ ನೀಡಿದ್ದಾರೆ.
BMW ಕಾರಿಗೆ ಪೆಟ್ರೋಲ್ ಕೊಳ್ಳಲು ಕೋಳಿ ಕದಿಯುತ್ತಿದ್ದ!
ಇದಾದ ಬಳಿಕ ಕೊಠಡಿ ಸೇರಿದ ಕಳ್ಳ, ಸ್ಕ್ಯಾನ್ ಮಾಡಿಸಬೇಕೆಂಬ ನೆಪವೊಡ್ಡಿ ಚಿನ್ನದ ಸರವನ್ನು ಬಿಚ್ಚಿ ಕೊಡುವಂತೆ ಸುಜಾತಾ ಅವರಿಗೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪದೇ ಪೋಷಕರನ್ನು ಕರೆಯುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ. ಬಲವಂತವಾಗಿ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಅಸ್ವಸ್ಥಗೊಂಡಿದ್ದ ಅವರಿಗೆ ಕೂಗಲೂ ಸಾಧ್ಯವಾಗಲಿಲ್ಲ. ಕೆಲ ಹೊತ್ತಿನ ಬಳಿಕ ಕೀರಲು ಧ್ವನಿ ಕೇಳಿ ಒಳಬಂದ ಸುಜಾತಾ ಅವರ ತಾಯಿಗೆ, ಸರ ಕದ್ದ ವಿಚಾರ ಗೊತ್ತಾಗಿದೆ. ನಂತರ ಆಸ್ಪತ್ರೆ ಸಿಬ್ಬಂದಿ ಹಾಗೂ ಮುಖ್ಯಸ್ಥರಿಗೆ ವಿಚಾರ ತಿಳಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ಕಳ್ಳನಿಗಾಗಿ ಹುಡುಕಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಸ್ಪತ್ರೆಗೆ ಬಂದ ಪೊಲೀಸರು ಅಲ್ಲಿನ ಸಿಸಿಟಿವಿ ಫುಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಆದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.