ರೈತರಲ್ಲಿ ಭಯ ಹುಟ್ಟಿಸಿದ್ದ ಹುಲಿ ಬೋನಿಗೆ ಬಿತ್ತು
ಮೈಸೂರು, ಜೂನ್ 17: ಗ್ರಾಮೀಣ ಪ್ರದೇಶಗಳಲ್ಲಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ಭಯ ಹುಟ್ಟಿಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಎನ್.ಬೇಗೂರು ಅರಣ್ಯ ವಲಯದಲ್ಲಿ ಭಾನುವಾರ ಹುಲಿ ಸೆರೆಯಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಎನ್. ಬೇಗೂರು ಅರಣ್ಯ ವಲಯದ ಬಸಾಪುರ ಮತ್ತು ಕಳಸೂರು ಸಮೀಪದ ಜಮೀನೊಂದರಲ್ಲಿ ಹುಲಿ ಸೆರೆಗೆ ಬೋನನ್ನು ಇಡಲಾಗಿತ್ತು. ಅದರಲ್ಲಿ ಹುಲಿ ಸಿಕ್ಕಿಬಿದ್ದಿದ್ದರಿಂದ ಇದರ ಉಪಟಳಕ್ಕೆ ಒಳಗಾಗಿದ್ದ ತಾಲ್ಲೂಕಿನ ಬಸಾಪುರ, ಕಳಸೂರು, ಅಂತರಸಂತೆ, ಮೊತ್ತ, ಶಿರಮಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ನೆಮ್ಮದಿಯುಸಿರು ಬಿಡುವಂತಾಗಿದೆ.
ಚಾಮರಾಜನಗರದ ಒಂಟಿಗುಡ್ಡದಲ್ಲಿ ಹುಲಿ- ಚಿರತೆಯ ಕಳೇಬರಗಳು ಪತ್ತೆ
ಸೆರೆ ಸಿಕ್ಕ ಹುಲಿಯು ಸುಮಾರು ಎಂಟು ವರ್ಷ ಪ್ರಾಯದಾಗಿದ್ದು, ಇದನ್ನು ಸೆರೆ ಹಿಡಿಯುವ ಸಲುವಾಗಿ ಅರಣ್ಯ ಇಲಾಖೆಯು ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಎನ್.ಬೇಗೂರು ಅರಣ್ಯ ವಲಯದ ಬಸಾಪುರ ಮತ್ತು ಕಳಸೂರು ಸಮೀಪದ ಜಮೀನಿನಲ್ಲಿ ಬೋನಿಟ್ಟು ಕಾಯುತ್ತಿತ್ತು. ಹುಲಿಯು ಆಹಾರ ಅರಸಿ ಬಂದ ವೇಳೆ ಬೋನಿಗೆ ಬಿದ್ದಿದೆ.
ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದನ್ನು ಕೊಂದು, ತಿಂದ ಮತ್ತೊಂದು ಹುಲಿ
ಭಾನುವಾರ ಬೆಳಿಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಹುಲಿ ಬೋನಿಗೆ ಬಿದ್ದಿರುವುದು ಗೊತ್ತಾಗಿ ಕೂಡಲೇ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹುಲಿಗೆ ವಯಸ್ಸಾದ ಕಾರಣ ಬೇಟೆಯಾಡುವ ಶಕ್ತಿ ಕಳೆದುಕೊಂಡಿದ್ದು, ಆಗಿಂದಾಗ್ಗೆ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿತ್ತು. ಕಳೆದ ತಿಂಗಳು ಹಗಲು ಹೊತ್ತಿನಲ್ಲಿಯೇ ಬಸಾಪುರ ಮುಖ್ಯರಸ್ತೆಯಲ್ಲಿ ಹಸುವಿನ ಮೇಲೆ ದಾಳಿ ನಡೆಸಿತ್ತು. ಹುಲಿಯು ಜನರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದಿದ್ದರಿಂದ ಅದನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿ ಬೋನನ್ನು ಇಟ್ಟಿದ್ದರು.
ರಣಥಂಬೋರ್ ಕಾಡಿನ ರಾಣಿ 'ಆರೋ ಹೆಡ್'ಳ ರೋಚಕ ಕಥೆ...
ವಿಷಯ ತಿಳಿದು ಸ್ಥಳಕ್ಕೆ ಎಸಿಎಫ್ ಪರಮೇಶ್ ಮತ್ತು ಆರ್ಎಫ್ಒ ಹನುಮಂತರಾಜು ಹಾಗೂ ಡಾ.ನಾಗರಾಜು ಭೇಟಿ ನೀಡಿದ್ದಾರೆ. ವಯಸ್ಸಾಗಿರುವ ಕಾರಣ ಹುಲಿಯನ್ನು ಮೈಸೂರಿನ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿದೆ.