ಶ್ರೀರಾಮ ಸಕ್ಕರೆ ಕಾರ್ಖಾನೆ ಕಾರ್ಯಾರಂಭಕ್ಕಾಗಿ ಸತ್ಯಾಗ್ರಹ
ಮೈಸೂರು, ಜನವರಿ 19: ಕಳೆದ ನಾಲ್ಕು ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮತ್ತೆ ಕಬ್ಬು ಅರೆಯುವ ಕಾರ್ಯ ಪುನರಾಂಭಿಸಿ ರೈತರಿಗೆ ಮತ್ತು ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕೆ.ಆರ್.ನಗರ ತಾಲೂಕು ಕಚೇರಿ ಎದುರು ಗುರುವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ತಾಲೂಕು ಕಬ್ಬು ಬೆಳೆಗಾರರ ಸಂಘದ ಸಂಘದ ಅಧ್ಯಕ್ಷ ಹಳೇಮಿರ್ಲೆ ಸುನಯ್ ಗೌಡ ಅವರ ನೇತೃತ್ವದಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ರೈತರು ಬೆಂಬಲ ನೀಡಿದ್ದು, ಸರ್ಕಾರ ಕಾರ್ಖಾನೆ ಆರಂಭಿಸುವ ನಿರ್ಧಾರ ಪ್ರಕಟಿಸುವವರೆಗೂ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಸತ್ಯಾಗ್ರಹ ನಿರತರು ತಿಳಿಸಿದ್ದಾರೆ.[ಐದು ಸಕ್ಕರೆ ಕಾರ್ಖಾನೆಗಳಿಗೆ ಮಂಡ್ಯ ಡಿಸಿ ನೋಟಿಸ್]
ಕಾರ್ಖಾನೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ರೈತ ಕುಟುಂಬಗಳು ಮತ್ತು ನೂರಾರು ಕಾರ್ಮಿಕರಿಗೆ ತೊಂದರೆಯಾಗಿದ್ದು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸರ್ಕಾರ ಗಮನಹರಿಸದಿರುವುದು ವಿಷಾದನೀಯ ಸಂಗತಿ. ಸರ್ಕಾರ ರಾಜಕೀಯ ಕಾರಣಗಳನ್ನು ಬದಿಗೊತ್ತಿ ರೈತರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಚುಂಚನಕಟ್ಟೆ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪುನರಾರಂಭಿಸಿ ಕಾರ್ಮಿಕರಿಗೆ ನೀಡಬೇಕಿರುವ ಬಾಕಿ ವೇತನ ಪಾವತಿಸಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ.