ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಬಂದ್
ಮೈಸೂರು, ಮೇ 19: ಕೊರೊನಾ ವೈರಸ್ ಸೋಂಕಿನಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಇದರಿಂದಾಗಿ ಮೈಸೂರಿನ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಕೂಡ ಬಾಗಿಲು ಮುಚ್ಚಿದೆ.
ಕೊರೊನಾ ಸೋಂಕಿನ ಕಾರಣದಿಂದಾಗಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ಯಾರೂ ಹೋಟೆಲ್ ಗೆ ಬರುವುದಿಲ್ಲ. ಹೀಗಾಗಿ ಹೋಟೆಲ್ ಬ್ಯುಸಿನೆಸ್ ಮೇಲೆ ದೊಡ್ಡ ಹೊಡೆತ ಬಿದ್ದ ಕಾರಣ ಅನಿವಾರ್ಯವಾಗಿ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಮುಚ್ಚಲಾಗುತ್ತಿದೆ ಎಂದು ಹೋಟೆಲ್ ಆಡಳಿತ ಮಂಡಳಿ ಘೋಷಣೆ ಮಾಡಿದೆ.
"ಜುಬಿಲಿಯಂಟ್ ಆಮಿಷಕ್ಕೆ ರಾಜ್ಯ ಸರ್ಕಾರ ಮಣಿದಿದೆ'
ಹೋಟೆಲ್ ನ ಜನರಲ್ ಮ್ಯಾನೇಜರ್ ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೂ ಮನೆ ವಿಳಾಸಕ್ಕೆ ಟರ್ಮಿನೇಷನ್ ಪತ್ರ ಕಳಿಸಿಕೊಡುತ್ತಿದ್ದಾರೆ. ಹೋಟೆಲ್ ಗೆ ಯಾರೂ ಗ್ರಾಹಕರು ಬರುತ್ತಿಲ್ಲ, ಬಂದರೂ ಕೂಡ ಹೋಟೆಲ್ ನಲ್ಲಿ ಉಳಿಸಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ನೌಕರರಿಗೂ ವಜಾ ಪತ್ರ ಕಳಿಸಲಾಗುತ್ತಿದ್ದು, ನೂರಕ್ಕೂ ಹೆಚ್ಚು ನೌಕರರ ಬದುಕು ಬೀದಿಗೆ ಬೀಳಲಿದೆ.
ಒಂದೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಲು ಆರಂಭಿಸುತ್ತಿದ್ದಂತೆಯೇ ವಹಿವಾಟಿನ ಕೊರತೆಯಿಂದಾಗಿ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಇಂದು ನಂಜನಗೂಡಿನ ತಾಂಡ್ಯಾದಲ್ಲಿರುವ ರೀಡ್ ಅಂಡ್ ಟೇಲರ್ ಸಿದ್ದ ಉಡುಪುಗಳ ಕಾರ್ಖಾನೆ ಬಾಗಿಲು ಮುಚ್ಚಿದೆ.
ಈ ಕಾರ್ಖಾನೆ ಕಳೆದ 5 ವರ್ಷಗಳಿಂದಲೂ ನಷ್ಟದಲ್ಲೇ ನಡೆಯುತ್ತಿದ್ದು, ಇದರ ಮಾಲೀಕರು 4,500 ಕೋಟಿ ರುಪಾಯಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದರು.
ಆದರೆ ಖರೀದಿದಾರರು ಬಾರದ ಹಿನ್ನೆಲೆಯಲ್ಲಿ ನ್ಯಾಯಾಲಯವು ನೇಮಿಸಿದ ಲಿಕ್ವಿಡೇಟರ್ ಅವರ ಅಧೀನದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿತ್ತು. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿರುವುದರಿಂದ 850 ಖಾಯಂ ನೌಕರರೂ, 550 ಹಂಗಾಮಿ ನೌಕರರೂ ಸೇರಿ 1,400 ಕಾರ್ಮಿಕರ ಬದುಕು ಅತಂತ್ರವಾಗಿದೆ.