ಮೈಸೂರಿನಲ್ಲಿ ಅತಂತ್ರರಾಗಿರುವ ರೋಗಿಗಳ ಸಂಬಂಧಿಕರು
ಮೈಸೂರು, ಮಾರ್ಚ್ 24: ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ಒಂದೆಡೆಯಾದರೆ, ನಗರದ ಕೆ.ಆರ್.ಆಸ್ಪತ್ರೆ ಸೇರಿದಂತೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ತಮ್ಮ ಸ್ವಂತ ಊರುಗಳಿಗೆ ತೆರಳಲು ಬಸ್ಸುಗಳಿಲ್ಲದೇ ಜನತೆ ಪರಿತಪಿಸುತ್ತಿರುವ ದೃಶ್ಯ ಮತ್ತೊಂದೆಡೆ ಕಂಡು ಬಂದಿತು.
ನಗರದ ಕೆ.ಆರ್. ಆಸ್ಪತ್ರೆಯ ಸುತ್ತಮುತ್ತಲಿನ ಬಸ್ ನಿಲ್ದಾಣದಲ್ಲಿ ಹಲವಾರು ಮಂದಿ ಬಡ ರೋಗಿಗಳ ಸಂಬಂಧಿಕರು ಕಳೆದೆರಡು ದಿನಗಳಿಂದ ಊಟ, ಕುಡಿಯಲು ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ.
ಮೈಸೂರು ಲಾಕ್ ಡೌನ್; ಬಡವರ ಸಹಾಯಕ್ಕೆ ಬಂದ ಪೊಲೀಸರು
4 ದಿನಗಳ ಹಿಂದೆ ನಮ್ಮ ಸಂಬಂಧಿಯೊಬ್ಬರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲು ಬಂದಿದ್ದೆವು. ಈಗ ಏಕಾಏಕಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ನಮ್ಮ ಸ್ವಂತ ಊರಿಗೆ ಹೋಗಲು ಆಗುತ್ತಿಲ್ಲ. ಇದ್ದ ಅಲ್ಪಸ್ವಲ್ಪ ಹಣದಿಂದ ಹೇಗೋ ಎರಡು ದಿನ ಕಳೆದೆವು. ಈಗ ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಉಪವಾಸ ಬೀಳಬೇಕಾಗಿದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಜಿಲ್ಲಾಡಳಿತದವರು ಸರ್ಕಾರದ ಸೂಚನೆಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೂ ನಮಗೆ ಸಹಾಯ ಮಾಡುತ್ತಿಲ್ಲ ಎಂದು ಅಲ್ಲಿದ್ದವರು ತಮ್ಮ ಅಳಲನ್ನು ತೋಡಿಕೊಂಡರು.
ಕೊರೊನ ಭೀತಿ ಹಿನ್ನೆಲೆಯಲ್ಲಿ ತುರ್ತು ಅಗತ್ಯತೆ ಹೊರತುಪಡಿಸಿ ಉಳಿದಂತೆ ಎಲ್ಲಾ ವಾಹನಗಳು ರಸ್ತೆಗಿಳಿಯದಂತೆ ಆದೇಶ ನೀಡಲಾಗಿದೆ. ಆದರೆ ಕೆ.ಆರ್.ವೃತ್ತದ ಬಳಿ ಲಾಕ್ಡೌನ್ ಆದೇಶವಿದ್ದರೂ ಉದ್ಧಟತನ ಪ್ರದರ್ಶಿಸಿ ರಸ್ತೆಗಿಳಿದಿದ್ದ ಸವಾರನ ಬೈಕ್ ಅನ್ನು ಸೀಜ್ ಮಾಡಲಾಗಿದೆ.