ಲಿಂಗಾಂಬುಧಿ ಕೆರೆ ದಂಡೆಯಲ್ಲಿ ತಲೆ ಎತ್ತಲಿದೆ ಮೈಸೂರಿನ ಮೊದಲ ಬಟಾನಿಕಲ್ ಗಾರ್ಡನ್
ಮೈಸೂರು, ನವೆಂಬರ್ 19: ರಾಜ್ಯದ ಇತರ ನಗರಿಗಳಿಗೆ ಹೋಲಿಸಿದರೆ ಮೈಸೂರಿಗರು ಹೆಚ್ಚು ಅದೃಷ್ಟವಂತರು. ಏಕೆಂದರೆ ಈ ನಗರದಲ್ಲಿ ನೈಸರ್ಗಿಕ ಜಲ ಮೂಲಗಳಿವೆ, ಪಾರ್ಕ್ ಗಳಿವೆ. ಹಸಿರಿನ ಹೊದಿಕೆಯೇ ಇದೆ. ಮೈಸೂರನ್ನು ಆಳಿದ ರಾಜ ಮಹಾರಾಜರ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ. ಈ ಸಾಸ್ಕೃತಿಕ ನಗರಿ ಸದ್ಯದಲ್ಲೇ ತನ್ನ ಮೊದಲ ಬಟಾನಿಕಲ್ ಗಾರ್ಡನ್ ಪಡೆಯಲಿದೆ. ಮೈಸೂರಿನ ರಾಮಕೃಷ್ಣನಗರದ ಶ್ರೀರಾಂಪುರ ಎರಡನೇ ಸ್ಟೇಜ್ನಲ್ಲಿರುವ ಸುಂದರವಾದ ಲಿಂಗಾಂಬುಧಿ ಕೆರೆದಂಡೆಯಲ್ಲಿ ಬಟಾನಿಕಲ್ ಗಾರ್ಡನ್ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.
ಇತಿಹಾಸದ ಪ್ರಕಾರ, ಈ ಕೆರೆಯನ್ನು ಮಹಾರಾಣಿ ಕೃಷ್ಣ ವಿಲಾಸ ಲಿಂಗಜಮ್ಮಣ್ಣಿಯ ಸವಿನೆನಪಿಗಾಗಿ 1828 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದರು. ಇದು 250 ಎಕರೆ ವಿಸ್ತೀರ್ಣವನ್ನು ಹೊಂದಿದೆ, ಇದರಲ್ಲಿ ಲಿಂಗಾಂಬುಧಿ ಸರ್ವೇ ಸಂಖ್ಯೆ 23ರ ಅಡಿಯಲ್ಲಿ ಬರುವ 51.3 ಎಕರೆ, ದಟ್ಟಗಳ್ಳಿ ಸರ್ವೆ ಸಂಖ್ಯೆ 82 ರ ಅಡಿಯಲ್ಲಿ ಬರುವ 136.11 ಎಕರೆ ಮತ್ತು ಅಯ್ಯಜ್ಜಯನಹುಂಡಿ ಸರ್ವೇ ಸಂಖ್ಯೆ 11ರ ಅಡಿಯಲ್ಲಿ ಬರುವ 28.23 ಎಕರೆ ಸೇರಿವೆ. ಸರೋವರದ 150 ಎಕರೆ ಪ್ರದೇಶವು ನೀರಿನಿಂದ ಆವೃತವಾಗಿದ್ದರೆ, ಉಳಿದ 100 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ.
ನ.20ರಿಂದ ಡಿ.6ರವರೆಗೆ ಮೈಸೂರಿನಲ್ಲಿ ವಿಶೇಷ ಕೈಮಗ್ಗ ಉತ್ಪನ್ನಗಳ ಮೇಳ
ಸುಂದರವಾದ ಬಟಾನಿಕಲ್ ಗಾರ್ಡನ್
ಈ ನೈಸರ್ಗಿಕ ಜಲಮೂಲಕ್ಕೆ ಹೊಸ ನೋಟವನ್ನು ನೀಡುವ ಉದ್ದೇಶದಿಂದ, ತೋಟಗಾರಿಕೆ ಇಲಾಖೆಯು ಅರಣ್ಯ ಇಲಾಖೆಯಿಂದ ಹಸ್ತಾಂತರಿಸಲ್ಪಟ್ಟ 30 ಎಕರೆ ಪ್ರದೇಶದಲ್ಲಿ 20 ಎಕರೆ ಪ್ರದೇಶದಲ್ಲಿ ಸುಂದರವಾದ ಬಟಾನಿಕಲ್ ಗಾರ್ಡನ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಉದ್ಯಾನವು 450ಕ್ಕೂ ಹೆಚ್ಚು ಬಗೆಯ ಸಸ್ಯಗಳನ್ನು ಹೊಂದಿದೆ .
ನೈಸರ್ಗಿಕ ಅಧ್ಯಯನ ಕೇಂದ್ರ
ಇಲ್ಲಿ ಅಳಿವಿನಂಚಿನಲ್ಲಿರುವ ನೈಸರ್ಗಿಕ ಪ್ರಭೇದಗಳು ಮತ್ತು ಔಷಧೀಯ ಸಸ್ಯಗಳನ್ನು ಹೊಂದಿದೆ. ಉದ್ಘಾಟನೆಯ ನಂತರ, ಇದು ಸಸ್ಯವಿಜ್ಞಾನಿಗಳು, ಪ್ರಾಣಿಶಾಸ್ತ್ರ ವಿದ್ಯಾರ್ಥಿಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಇತರರಿಗೆ ನೈಸರ್ಗಿಕ ಅಧ್ಯಯನ ಕೇಂದ್ರವಾಗಿ ಹೊರ ಹೊಮ್ಮಲಿದೆ. ಅರಣ್ಯ ಇಲಾಖೆ ಪಕ್ಷಿಗಳಿಗೆ ಆಹಾರವನ್ನು ನೀಡುವ ನೈಸರ್ಗಿಕವಾಗಿ ಬೆಳೆದ ಮರಗಳನ್ನು ಸಂರಕ್ಷಿಸಿದೆ. ಇದಲ್ಲದೆ, ಹಲವಾರು ಹೊಸ ಸಸಿಗಳನ್ನು ನೆಡಲಾಗುತ್ತದೆ, ಇದು ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ, ಜೊತೆಗೆ ಅಸಂಖ್ಯಾತ ಪಕ್ಷಿಗಳಿಗೆ ಆಹಾರ ಮತ್ತು ಆಶ್ರಯವನ್ನು ನೀಡುತ್ತದೆ.
ಹೂವುಗಳು ಮತ್ತು ಸಸ್ಯ ಪ್ರಬೇಧಗಳು
ಬಟಾನಿಕಲ್ ಗಾರ್ಡನ್ ಅನ್ನು ಹೂವುಗಳು ಮತ್ತು ಸಸ್ಯ ಪ್ರಬೇಧಗಳಿಗೆ ಅನುಗುಣವಾಗಿ ಹಲವಾರು ಬ್ಲಾಕ್ ಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಅರ್ಬೊರೇಟಂ ಬ್ಲಾಕ್, ರೋಸ್ ಬ್ಲಾಕ್, ಅರ್ಜೆಂಟೀನಾ ಬ್ಲಾಕ್, ಪ್ಲುಮೆರಿಯಾ ಬ್ಲಾಕ್, ಟೋಪಿಯರಿ ಬ್ಲಾಕ್, ಫ್ರೂಟ್ಸ್ ಬ್ಲಾಕ್, ಬಟರ್ಫ್ಲೈ ಪಾರ್ಕ್, ಮೈನರ್ ಫ್ರೂಟ್ ಬ್ಲಾಕ್, ಸ್ಥಳೀಯ ಪ್ರಭೇದಗಳ ಬ್ಲಾಕ್, ಪಾಮ್ಸ್ ಬ್ಲಾಕ್, ಔಷಧೀಯ ಮತ್ತು ಆರೊಮ್ಯಾಟಿಕ್ ಬ್ಲಾಕ್, ರಾಕರೀಸ್ ಬ್ಲಾಕ್, ತಾವರೆ ಕೊಳ , ಬಿದಿರಿನ ಬ್ಲಾಕ್, ಫಿಕಸ್ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಬ್ಲಾಕ್ ಗಳಾಗಿ ಮಾಡಲಾಗಿದೆ.
ಚಿಟ್ಟೆ ಸಂತಾನೋತ್ಪತ್ತಿ ಕೇಂದ್ರ
ಉದ್ಯಾನದ ಒಳಗೆ ನೈಸರ್ಗಿಕ ನೋಟವನ್ನು ನೀಡಲು ವಾಕಿಂಗ್ ಪಥ, ಜಾಗಿಂಗ್ ಪ್ರದೇಶ, ವಿಶ್ರಾಂತಿ ಸ್ಥಳ ಮತ್ತು ಕಲ್ಲಿನ ಮಂಟಪ ಇದೆ. ಮೈಸೂರು ನಗರದ ಕಾರಂಜಿ ಸರೋವರದಂತೆ ಚಿಟ್ಟೆ ಉದ್ಯಾನವನಕ್ಕೆ ಚಿಟ್ಟೆಗಳನ್ನು ಆಕರ್ಷಿಸಲು ಹೆಚ್ಚಿನ ಸಂಖ್ಯೆಯ ಚೆರ್ರಿ ಹಣ್ಣಿನ ಮರಗಳನ್ನು ನೆಡಲಾಗುತ್ತದೆ. ಈ ಉದ್ಯಾನವನ್ನು ಚಿಟ್ಟೆ ಸಂತಾನೋತ್ಪತ್ತಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎನ್ನಲಾಗಿದೆ.
‘ಪ್ಲಾಸ್ಟಿಕ್ ಮುಕ್ತ’ ವಲಯ
ಬಟಾನಿಕಲ್ ಗಾರ್ಡನ್ಗೆ ಪ್ರವೇಶ ಶುಲ್ಕ ತಲಾ ರೂ.10 ಅಥವಾ ರೂ.20 ಆಗಿರಬಹುದು, ಮತ್ತು ಇದು ಸಾರ್ವಜನಿಕರಿಗೆ ಬೆಳಿಗ್ಗೆ 8.30 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಇಡೀ ಉದ್ಯಾನವನ್ನು 'ಪ್ಲಾಸ್ಟಿಕ್ ಮುಕ್ತ' ವಲಯವೆಂದು ಘೋಷಿಸಲಾಗಿದೆ. ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಂತರ, ಇದು ಅನೇಕ ಜನರಿಗೆ 'ಜ್ಞಾನ ಕೇಂದ್ರ'ವಾಗಿ ಹೊರಹೊಮ್ಮುಲಿದೆ. ಅಕ್ರಮ ಚಟುವಟಿಕೆಗಳನ್ನು ತಡೆಯಲು 24X7 ಕಾವಲುಗಾರರನ್ನು ನೇಮಿಸಲಾಗುತ್ತದೆ.
ಮುಂದಿನ ತಿಂಗಳು ಬಟಾನಿಕಲ್ ಗಾರ್ಡನ್ ಉದ್ಘಾಟನೆ
ಆದರೆ ಸುತ್ತಮುತ್ತಲಿನ ಪ್ರದೇಶಗಳಾದ ಅರವಿಂದನಗರ, ದಟ್ಟಗಳ್ಳಿ, ರಾಮಕೃಷ್ಣನಗರದಿಂದ ಸಂಸ್ಕರಿಸದ ಕೊಳಚೆ ನೀರನ್ನು ರಾಜಕಾಲುವೆಯ ಮೂಲಕ ಈ ಕೆರೆಗೆ ಹರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಈ ಜಲಮೂಲದ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡಿದೆ.
ಕೆಲವು ವರ್ಷಗಳ ಹಿಂದೆ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಬಳಿ 33 ಎಕರೆ ಬಟಾನಿಕಲ್ ಗಾರ್ಡನ್ ರಚಿಸುವ ಯೋಜನೆ ಇತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಕಳೆದ ಅಕ್ಟೋಬರ್ 17 ರಂದು ಬಟಾನಿಕಲ್ ಗಾರ್ಡನ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ನೂತನ ಬಟಾನಿಕಲ್ ಗಾರ್ಡನ್ ಉದ್ಘಾಟನೆ ಮುಂದಿನ ತಿಂಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.