ಮೈಸೂರು ಕೈ ಪಾಳಯದ ತಿಕ್ಕಾಟ: ತನ್ವೀರ್ ಸೇಠ್ ಬೆಂಬಲಿಗರ ಸಾಮೂಹಿಕ ರಾಜೀನಾಮೆ
ಮೈಸೂರು, ಮಾರ್ಚ್ 20: ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಬಳಿಕ ಮೈಸೂರು ಕಾಂಗ್ರೆಸ್ನಲ್ಲಿ ಉಂಟಾಗಿರುವ ಭಿನ್ನಮತ ಸದ್ಯಕ್ಕೆ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಮೈತ್ರಿ ವಿಚಾರದಲ್ಲಿ ಉಂಟಾಗಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಮೈಸೂರು ಕೈ ಪಾಳಯದಲ್ಲಿ ನಡೆಯುತ್ತಿರುವ ತಿಕ್ಕಾಟ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಮೇಯರ್ ಮೈತ್ರಿ ತಿಕ್ಕಾಟಕ್ಕೆ ಪ್ರಮುಖವಾಗಿ ಶಾಸಕ ತನ್ವೀರ್ ಸೇಠ್ ಬೆಂಬಲಿಗರ ನಡುವೆ ದೊಡ್ಡಮಟ್ಟದ ಅಸಮಾಧಾನ ಸೃಷ್ಟಿಸಿದೆ. ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ವೀರ್ ಸೇಠ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮನಸ್ತಾಪ ಉಂಟಾಗಿತ್ತು.
ಸಿದ್ದು-ತನ್ವೀರ್ ಅಸಮಾಧಾನದ ಬೆಂಕಿಗೆ ಮೂವರು 'ಕೈ' ಕಾರ್ಯಕರ್ತರಿಗೆ ಅಮಾನತು ಶಿಕ್ಷೆ
ಈ ಕಾರಣಕ್ಕಾಗಿ ನಡೆದ ಪ್ರತಿಭಟನೆ ವೇಳೆ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪಕ್ಕೆ ಶಾಸಕ ತನ್ವೀರ್ ಸೇಠ್ ಕಟ್ಟಾ ಬೆಂಬಲಿಗರಾಗಿದ್ದ ಮೂವರನ್ನು ಇತ್ತೀಚಿಗೆ ಅಮಾನತು ಮಾಡಲಾಗಿತ್ತು. ಕಾಂಗ್ರೆಸ್ ಮೈಸೂರು ಘಟಕದ ಈ ತೀರ್ಮಾನ ಇದೀಗ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕ ತನ್ವೀರ್ ಸೇಠ್ ಅವರ ಮೂವರು ಬೆಂಬಲಿಗರನ್ನು ಅಮಾನತು ಮಾಡಿದ್ದರಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರು ಹಾಗೂ ತನ್ವೀರ್ ಸೇಠ್ ಅವರ ಬೆಂಬಲಿಗರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
150 ಮಂದಿ ಕಾರ್ಯಕರ್ತರು ರಾಜೀನಾಮೆಗೆ ನಿರ್ಧಾರ ಕೈಗೊಂಡಿದ್ದು, ಮೈಸೂರು ಕಾಂಗ್ರೆಸ್ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಸಲ್ಲಿಸಲು 9 ಮಂದಿ ಎನ್.ಆರ್ ಕ್ಷೇತ್ರದ ವಾರ್ಡ್ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರಿಂದ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದು, ಖುದ್ದು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.