ಕೋವಿಡ್ ಮಾರ್ಗಸೂಚಿಗೆ ಜಿಮ್ ಅಸೋಸಿಯೇಷನ್ ತೀವ್ರ ಆಕ್ಷೇಪ
ಮೈಸೂರು, ಏಪ್ರಿಲ್ 3: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಜೋರಾಗಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪರಿಣಾಮ ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚಿಗಳಿಗೆ ರಾಜ್ಯ ಜಿಮ್ ಅಸೋಸಿಯೇಷನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿರುವ ಸಂಬಂಧ ಶನಿವಾರ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಜಿಮ್ ಅಸೋಸಿಯೇಷನ್ ಅಧ್ಯಕ್ಷ ರವಿ, "ಕೊರೊನಾ ಹೆಚ್ಚಳದ ಕಾರಣ ನೀಡಿ ಸರ್ಕಾರ ಜಿಮ್ ಗಳನ್ನು ಬಂದ್ ಮಾಡುವಂತೆ ಆದೇಶ ಮಾಡಿದೆ. ಆದರೆ, ಏಕಾಏಕಿ ಜಿಮ್ ಬಂದ್ ಮಾಡಿದರೆ ನಾವು ಏನು ಮಾಡೋದು? ಕಟ್ಟಡದ ಬಾಡಿಗೆ ಕಟ್ಟೋಕೆ ಹಣ ಎಲ್ಲಿಂದ ತರೋದು? ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಆರೋಗ್ಯ ಸಚಿವ ಕೆ.ಸುಧಾಕರ್
ಈ ಹಿಂದೆ ಸರ್ಕಾರ ಮಾಡಿದ ಆದೇಶವನ್ನು ನಾವೆಲ್ಲರೂ ತಪ್ಪದೇ ಪಾಲನೆ ಮಾಡಿದ್ದೇವೆ. ಆದರೆ ಇದೀಗ ಏಕಾಏಕಿ ಹೊಸ ಆದೇಶ ಮಾಡಿರುವುದು ಜಿಮ್ ನಡೆಸುವವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ನಮಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ. ಏಕೆಂದರೆ ನಾವು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ, ನಮ್ಮನ್ನು ಒಂದು ಉದ್ಯಮವೆಂದು ಪರಿಗಣಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಅಲ್ಲದೇ ಜಿಮ್ ಮಾಡಿದವರಿಗೆ ಯಾರಿಗೂ ಕೊರೊನಾ ಬಂದಿಲ್ಲ. ಫಿಟ್ನೆಸ್ ಇದ್ದರೆ ರೋಗಗಳಿಂದ ದೂರ ಇರಬಹುದು. ಸಾಕಷ್ಟು ಜನರು ಜಿಮ್ ಮಾಡಿದರೆ ಮಾತ್ರ ಊಟ ಮಾಡಲು ಸಾಧ್ಯ. ಜಿಮ್ ಮಾಡಿದವರಿಂದ ಕೊರೊನಾ ಬಂದಿದೆ ಅಂತ ಒಂದೇ ಒಂದು ವರದಿಯಾಗಿಲ್ಲ. ಹೀಗಾಗಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಸರಿಯಲ್ಲ ಎಂದರು.
ಇನ್ನೂ ಸರ್ಕಾರದ ಈ ಹೊಸ ನಿಯಮದ ವಿರುದ್ಧ ಹೋರಾಟ ಮಾಡುವ ಸಲುವಾಗಿ ಅನೇಕ ಜಿಮ್ ಕ್ರೀಡಾಪಟುಗಳು ಸಿಎಂ ಮನೆಯ ಮುಂದೆ ಪ್ರತಿಭಟನೆ ಮಾಡೋಣ ಎನ್ನುತ್ತಿದ್ದಾರೆ. ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂಬ ಮನಸ್ಥಿತಿಯಲ್ಲಿದ್ದೇವೆ. ಈ ಹೀಗಾಗಿ ನಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯ ಏಕೆ? ಜಿಮ್ ಗಳನ್ನು ಬಂದ್ ಮಾಡುವ ಬದಲು ನಮಗೂ ಸಹ 50% ಅನುಮತಿ ಕೊಡಿ ಎಂದು ಒತ್ತಾಯಿಸಿದರು.
ಸರ್ಕಾರದ ಗೈಡ್ ಲೈನ್ಸ್ ಪಾಲನೆ ಮಾಡುತ್ತೇವೆ ಎಂದ ಅವರು, ಈ ಹಿಂದೆ ರಾಜ್ಯದಲ್ಲಿ 10 ಸಾವಿರ ಜಿಮ್ ಗಳಿತ್ತು. ಆದರೆ ಲಾಕ್ ಡೌನ್ ಪರಿಣಾಮ 2 ಸಾವಿರ ಜಿಮ್ ಗಳು ಕ್ಲೋಸ್ ಆಗಿದೆ. ಹೀಗಾಗಿ ಸಾಕಷ್ಟು ಜನರು ನಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.