ಜಂಬೂಸವಾರಿಗೆ ಕ್ಷಣಗಣನೆ... ಜನರಿಲ್ಲದ ಮೈಸೂರು ದಸರಾ
ಮೈಸೂರು, ಅಕ್ಟೋಬರ್ 26: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಗೆ ಗಜಪಡೆಗಳನ್ನು ತಯಾರು ಮಾಡುವ ಕೆಲಸ ಸಮಾರೋಪಾದಿಯಲ್ಲಿ ಸಾಗುತ್ತಿದೆ. ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಜನರಿಲ್ಲದ ಜಂಬೂ ಸವಾರಿ ನಡೆಯುತ್ತಿದೆ.
ಕೋವಿಡ್-19 ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ವತಿಯಿಂದ ಈ ಬಾರಿ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿ ಅದ್ಧೂರಿ ಜಂಬೂಸವಾರಿ ನಡೆಯದೆ ಅರಮನೆ ಆವರಣದಲ್ಲಿಯೇ ಮೆರವಣಿಗೆ ನಡೆಯಲಿದೆ.
ಶಿವಮೊಗ್ಗ ದಸರಾ ಮೆರವಣಿಗೆ ಇಲ್ಲ, ಸೀಮಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ
ಮಧ್ಯಾಹ್ನ 2.59 ರಿಂದ 3.20ರವರೆಗೆ ನಂದಿ ಧ್ವಜ ಪೂಜೆ
ಪ್ರತಿ ವರ್ಷದಂತೆ ಈ ಬಾರಿಯೂ ಮಧ್ಯಾಹ್ನ 2.59 ರಿಂದ 3.20ರವರೆಗಿನ ಶುಭಮುಹೂರ್ತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂದಿ ಧ್ವಜ ಪೂಜೆ ನೆರವೇರಿಸಲಿದ್ದಾರೆ. ಇದೇ ವೇಳೆ ಕುಶಾಲತೋಪು ಸಿಡಿಸಲಾಗುತ್ತದೆ. ಅಭಿಮನ್ಯು ಅಂಬಾರಿ ಹೊತ್ತು ಸಾಗಿದರೆ ಈತನಿಗೆ ಕುಮ್ಕಿ ಆನೆಗಳಾಗಿ ವಿಜಯ ಮತ್ತು ಕಾವೇರಿ ಜತೆಗೆ ಹೆಜ್ಜೆ ಹಾಕಿದರೆ, ನಿಶಾನೆ ಆನೆಯಾಗಿ ಗೋಪಿ ಮುನ್ನಡೆಯಲಿದ್ದಾನೆ.
ಕೆಲವೇ ಕಾರ್ಯಕ್ರಮಗಳೊಂದಿಗೆ ಜಂಬೂಸವಾರಿ
ಜಂಬೂಸವಾರಿಯಲ್ಲಿ ಹಿಂದಿನಂತೆ ಮೂವತ್ತಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳಾಗಲೀ, ಕಲಾತಂಡಗಳಾಗಲೀ ಇರದೆ, ಕೆ.ಎನ್.ಮಹೇಶ್ ಮತ್ತು ತಂಡದಿಂದ ವೀರಗಾಸೆ ಇರಲಿದೆ. ಕೃಷ್ಣಮೂರ್ತಿ ವಿ ಮತ್ತು ತಂಡ ಹಾಗೂ ಪುಟ್ಟಸ್ವಾಮಿ ಎ ಮತ್ತು ತಂಡದಿಂದ ನಾದಸ್ವರ, ರಾಜಪ್ಪ ಮತ್ತು ತಂಡದಿಂದ ವೀರಗಾಸೆ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಸೂರು ವತಿಯಿಂದ ಸ್ತಬ್ಧಚಿತ್ರ, ಶ್ರೀನಿವಾಸ್ ರಾವ್ ಮತ್ತು ತಂಡದಿಂದ ಚೆಂಡೆ ಮೇಳ, ಸಿದ್ದರಾಜು ಮತ್ತು ತಂಡದಿಂದ ಮರಗಾಲು ವೇಷ, ಟಿ.ಕೆ.ರಾಜಶೇಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ ಇರಲಿದೆ.
ಮೈಸೂರು ದಸರಾ: ವಿಜಯದಶಮಿ ದಿನದಂದು ಅರಮನೆ ಆವರಣದಲ್ಲಿ ಸರಳ ಜಂಬೂಸವಾರಿ
3.40ರಿಂದ ಸಿಎಂ ಯಡಿಯೂರಪ್ಪ ಅವರಿಂದ ಚಾಲನೆ
ಮಧ್ಯಾಹ್ನ 3.40 ರಿಂದ 4.15 ಗಂಟೆಯವರೆಗೆ ಕರ್ನಾಟಕ ಪೊಲೀಸ್ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಬಳಿಕ ಪೊಲೀಸ್ ಅಶ್ವದಳ ಪ್ರಧಾನ ದಳಪತಿ, ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು, ನಟರಾಜು ವಿ ಮತ್ತು ತಂಡದಿಂದ ಪಟ್ಟದ ನಾದಸ್ವರ ನಡೆಯಲಿದೆ. ಮಧ್ಯಾಹ್ನ 3.40 ರಿಂದ 4.15 ಗಂಟೆಯವರೆಗೆ ಚಿನ್ನದ ಅಂಬಾರಿಯಲ್ಲಿರುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ಆ ನಂತರ ಜಂಬೂಸವಾರಿ ಮುನ್ನಡೆಯಲಿದ್ದು, ಪೊಲೀಸ್ ಅಶ್ವದಳ-ಕೆ.ಎ.ಆರ್.ಪಿ ಮೌಂಟೆಡ್ ಕಂಪನಿ, ಮೈಸೂರು. ಬಳಿಕ ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಜತೆಗೆ ಇರಲಿವೆ. ಈ ಬಾರಿ ಅರಮನೆ ಆವರಣದಲ್ಲಿ ನಡೆಯದಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳದೆ ಬಹುಬೇಗ ಜಂಬೂಸವಾರಿ ಮುಗಿದು ಹೋಗಲಿದೆ.ಅರಮನೆಯಲ್ಲಿ ಜನರಿಲ್ಲದ ಜಂಬೂಸವಾರಿ
ಅರಮನೆಯಲ್ಲಿ ಮೊದಲಿಗೆ ಜನರಿಲ್ಲದ ಜಂಬೂಸವಾರಿ ನಡೆಯುತ್ತಿದ್ದು, ಕೇವಲ 300 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ಅರಮನೆ ಸುತ್ತಮುತ್ತ 144 ಸೆಕ್ಷನ್ ವಿಧಿಸಲಾಗಿದ್ದು ಬಂದೋಬಸ್ತ್ ಗೆ ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯಲಿರುವ ಮೆರವಣಿಗೆಯ ನೇರಪ್ರಸಾರವನ್ನು ನೋಡಲು ಅವಕಾಶ ಮಾಡಿಕೊಡಲಾಗಿದೆ.