ಮೈಸೂರಿನ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೋರ್ಟ್ ನಿಂದ ತಾತ್ಕಾಲಿಕ ತಡೆಯಾಜ್ಞೆ
ಮೈಸೂರಿನ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 3ನೇ ಜೆಎಂಎಫ್ ಸಿ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕಾಂಪೌಂಡ್, ಕಾರ್ಯಾಲಯ ನಿರ್ಮಾಣ ಹಾಗೂ ಬೋರ್ ವೆಲ್ ಕೊರೆಸಿ ಆಗಿತ್ತು. ಅಷ್ಟರಲ್ಲಿ ಜಮೀನು ವಿವಾದ ಕೋರ್ಟ್ ಮೆಟ್ಟಿಲೇರಿತ್ತು
ಮೈಸೂರು, ಫೆಬ್ರವರಿ 18: ಹಿರಿಯ ನಟ ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿರುವ ಭೂಮಿ ಹಂಚಿಕೆ ವಿಚಾರವಾಗಿ ನಗರದ 3ನೇ ಜೆಎಂಎಫ್ ಸಿ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರು ಆ ಜಮೀನು ಹಂಚಿಕೆ ಪ್ರಕ್ರಿಯೆ ವಿರುದ್ಧ ನಗರದ ನ್ಯಾಯಾಲಯದ ಮೊರೆ ಹೋಗಿದ್ದರು.
ಆ ಅರ್ಜಿಯ ವಿಚಾರಣೆ ನಡೆಸಿದ 3ನೇ ಜೆಎಂಎಫ್ ಸಿ ನ್ಯಾಯಾಲಯವು ಉದ್ದೇಶಿತ ಕಾಮಗಾರಿಗೆ ತೊಂದರೆ ಆಗದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ನಟ ವಿಷ್ಣುವರ್ಧನ್ ಸ್ಮರಣಾರ್ಥ ಮೈಸೂರು ಸಮೀಪ ನಿರ್ಮಾಣಗೊಳ್ಳಲಿರುವ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಕಳೆದ ವರ್ಷ ಡಿಸೆಂಬರ್ 6ರಂದು ನಟಿ ಭಾರತಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದ್ದರು.[ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮತ್ತೆ ವಿಘ್ನ]
ಆದರೆ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದಿಂದ ಒಂದು ದಿನದ ಮಟ್ಟಿಗೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿದ್ದವು. ಈ ಹಿನ್ನೆಲೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣದ ಶಂಕುಸ್ಥಾಪನೆ ಸಭಾ ಕಾರ್ಯಕ್ರಮವನ್ನು ಸಹ ಕಡೆ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.
ಪೂರ್ವನಿಗದಿಯಂತೆ ಭೂಮಿ ಪೂಜೆ, ಹೋಮ ಕಾರ್ಯಗಳನ್ನು ವಿಷ್ಣುವರ್ಧನ್ ಕುಟುಂಬದ ಸದಸ್ಯರು ನೆರವೇರಿಸಿದ್ದರು. ನಟಿ ಭಾರತಿ ಸಮ್ಮುಖದಲ್ಲಿ ಸ್ಮಾರಕ ನಿರ್ಮಾಣಗೊಳ್ಳಲಿರುವ ಸ್ಥಳದಲ್ಲಿ ಭೂಮಿ ಪೂಜೆ ನಡೆಸಲಾಗಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಸಹ ಜತೆಗಿದ್ದರು.[ವಿಷ್ಣು ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ಹಸ್ತಾಂತರ]
ಇದಾದ ಬಳಿಕ ಜಮೀನಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಜತೆಗೆ ಕಾರ್ಯಾಲಯ ನಿರ್ಮಾಣ, ಬೋರ್ ವೆಲ್ ಸಹ ಕೊರೆಸಲಾಗಿದ್ದು, ಈ ಕಾರ್ಯಕ್ಕಾಗಿ ಈಗಾಗಲೇ ಅಂದಾಜು 50 ಲಕ್ಷ ರುಪಾಯಿಗಳನ್ನು ಸಹ ವೆಚ್ಚ ಮಾಡಲಾಗಿದೆ. ಅಷ್ಟರಲ್ಲಿ ಜಮೀನಿಗೆ ಸಂಬಂಧಿಸಿದಂತೆ ವಿವಾದ ನ್ಯಾಯಾಲಯ ಮೆಟ್ಟಿಲೇರಿತು.