ಪುರೋಹಿತ ಶ್ಯಾಮಾಚಾರ್ಯರ ರಾಯಲ್ ಎನ್ಫೀಲ್ಡ್ ಬದರೀಯಾತ್ರೆ
ಮೈಸೂರು, ಜುಲೈ 06: ಪೂಜೆ ಪುನಸ್ಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಸಾತ್ವಿಕ ಪುರೋಹಿತ ಮೈಸೂರಿನ ಹೆಚ್.ಎಸ್.ಶ್ಯಾಮಾಚಾರ್ ಅವರು ಸಾಹಸ ಕಾರ್ಯವೊಂದಕ್ಕೆ ಕೈ ಹಾಕಿದ್ದಾರೆ.
ಶ್ರೀಪಾದರಾಯರ ಮಠದ ಬಲ ಸೇವೆಯಲ್ಲಿರುವ ಇವರು ದಿನನಿತ್ಯದ ಕೆಲಸ ಕೇವಲ ದೇವ ಪೂಜೆಯೊಂದೇ. ಇದರ ಮಧ್ಯೆ ತಾನು ಕೂಡ ಹೊಸದಾಗಿ ಏನಾದರೂ ಮಾಡಬೇಕೆಂಬ ಉಮೇದಿನಿಂದ ತಮ್ಮ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಬದರಿ, ಕೇದರಾ, ದ್ವಾರಕಾನಾಥ, ಮಥುರಾ ಪ್ರವಾಸವನ್ನು ಹೊರಟ್ಟಿದ್ದಾರೆ.
ಸಾಕಷ್ಟು ಮಂದಿ ಹೀಗೆ ಬೈಕಿನಲ್ಲಿ ಉತ್ತರ ಭಾರತ ಪ್ರವಾಸ ಮಾಡಿದ್ದಾರೆ ಇದರಲ್ಲಿ ಹೊಸತೇನು ಎಂಬ ಪ್ರಶ್ನೆಗೆ ಉತ್ತರವೂ ಇದೆ. ಇವರು ಬುಲೆಟ್ ಪ್ರವಾಸ ಮಾಡುತ್ತಿರುವುದು ತಮ್ಮ ಟ್ರೇಡ್ ಮಾರ್ಕ್ ಪಂಚೆ ಮತ್ತು ಶಲ್ಯದಲ್ಲೇ.
ಹೌದು, ವಾಹನ ಓಡಿಸುವಾಗ ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಬರಿಗಾಲಿನಲ್ಲೇ ಪ್ರಯಾಣಿಸುತ್ತಾರೆ. ಪ್ರವಾಸದುದ್ದಕ್ಕೂ ಇವರ ಉಡುಗೆ ಪಂಚೆ ಮತ್ತು ಶಲ್ಯವೇ ಆಗಿರುತ್ತದೆ.
ಗಾಡಿ ಓಡಿಸುವಾಗ ಧಾರ್ಮಿಕ ಉಡುಪು
ನನಗೆ ಗಾಡಿ ಓಡಿಸುವಾಗಲೂ ಸಂಪೂರ್ಣ ಧಾರ್ಮಿಕ ಉಡುಪನ್ನು ಧರಿಸಿಯೇ ಮಾಡಬೇಕೆಂಬ ಹಂಬಲವಿದೆ. ಆದರೆ ಎಲ್ಲರ ಒತ್ತಾಯದ ಹಾಗೂ ನನ್ನ ರಕ್ಷೆಗೋಸ್ಕರ ಲೈಫ್ ಜಾಕೆಟ್ ಅನಿವಾರ್ಯ ಎಂದೆನಿಸಿದ ಕಾರಣ ಇಷ್ಟವಿಲ್ಲದಿದ್ದರೂ ಧರಿಸುತ್ತಿದ್ದೇನೆ ಎನ್ನುತ್ತಾರೆ ಶ್ಯಾಮಾಚಾರ್.
ಹೊರಗಿನ ಆಹಾರ ಸೇವನೆ ಇಲ್ಲ
ಇನ್ನೊಂದು ವಿಷಯವೆಂದರೇ ಇವರು ಎಲ್ಲಿಯೂ ಕೂಡ ಹೊರಗಿನ ಆಹಾರವನ್ನು ಸಹ ಸ್ವೀಕರಿಸದೇ ಕೇವಲ ದೇವಸ್ಥಾನಗಳಲ್ಲಿ ನೀಡುವ ನೈವೇದ್ಯವನ್ನು ಮಾತ್ರ ಸ್ವೀಕರಿಸುತ್ತಾರೆ. ಇಲ್ಲವಾದರೇ ಉಪವಾಸವೇ ಸರಿ. ಇನ್ನು ಏಕಾದಶಿಯ ದಿನವಂತೂ ನೀರು ಕುಡಿಯದೇ ಪ್ರವಾಸ ಮಾಡಿ ಸಾಧನೆ ಮಾಡಲು ಮುಂದಾಗುತ್ತಿದ್ದಾರೆ ಶ್ಯಾಮಾಚಾರ್ಯರು.
ದಿನಕ್ಕೆ 500 ಕಿ.ಮೀ ಪೂರೈಸುವ ಗುರಿ
ದಿನಕ್ಕೆ 500 ಕಿ.ಮೀ ಪೂರೈಸಬೇಕೆಂಬ ಗುರಿಯಿರುವ ಇವರು, ಈವರೆಗೂ ಸುಮಾರು 9 ಬಾರಿ ಬದರಿ ಯಾತ್ರೆಯನ್ನು ಮುಗಿಸಿ ಇದು 10 ನೇ ಬಾರಿ ಹೊರಟ್ಟಿದ್ದಾರೆ. ಪುರೋಹಿತರೆಂದರೇ ಮೂಗು ಮುರಿದು, ಅವರೆಂದರೇ ಹುಳಿ ಗೊಜ್ಜಿನವರು ಎಂದು ರಾಗವೆಳೆಯುವ ಅನೇಕರನ್ನು ನೋಡಿದ್ದೇನೆ. ಆದರೆ ನಾನು ಅವರಂತಾಗದೇ ಏನಾದರೂ ವಿಶೇಷ ಸಾಧನೆ ಮಾಡಲು ಮುಂದಾಗಿದ್ದೇನೆ ಎನ್ನುತ್ತಾರೆ ಶ್ಯಾಮಾಚಾರ್ಯರು.
ವರ್ಷದ ಹಿಂದಿನ ಯೋಜನೆ
ಇದು ನನ್ನ ಒಂದು ವರುಷದ ಹಿಂದಿನ ಯೋಜನೆ. ಅದಕ್ಕೆ ನನ್ನ ಸ್ನೇಹಿತರು ಹಾಗೂ ಶ್ರೀಪಾದ ರಾಯರ ಮಠದ ಯತಿಗಳು ಯಾತ್ರೆ ನಡೆಸುವಂತೆ ಪ್ರೇರೆಪಿಸಿದರು. ಆ ಹಿನ್ನೆಲೆ ಹೊರಟೆ. ಇದುವರೆಗೂ 6 ದಿನಗಳನ್ನು ಪೂರೈಸಿದ್ದೇನೆ ಯಾವುದೇ ತೊಂದರೆಯಾಗಿಲ್ಲ ಎಂದು ಸಂತಸದಿಂದಲೇ ನುಡಿಯುತ್ತಾರೆ.
ಸರ್ವರಿಗೂ ಒಳಿತಾಗಲಿ ಎಂದು ಯಾತ್ರೆ
ಕರ್ನಾಟಕದಲ್ಲಿಯುವ ಸರ್ವರಿಗೂ ಒಳಿತಗಲಿ ಎಂಬ ನಿಟ್ಟಿನಲ್ಲಿಯೇ ತೀರ್ಥಯಾತ್ರೆ ನಡೆಸುತ್ತಿರು ಇವರು ನಮ್ಮೆಲ್ಲರಿಗೂ ಮಾದರಿ. ಒಟ್ಟಾರೆ ನಮ್ಮಲ್ಲಿ ಪುರೋಹಿತರೆಂದರೇ ಏನು ಸಾಧ್ಯ, ಅವರೇನು ದೇವರ ಪೂಜೆಗಷ್ಟೇ ಸೀಮಿತ ಎನ್ನುವ ಯುವಕರೇ ಹೆಚ್ಚಿರುವಾಗ ಶ್ಯಾಮಾಚಾರ್ ರವರಂತಹ ಪುರೋಹಿತ ಸಾಧಕರು ಇದ್ದಾರೆ ಎಂಬುದನ್ನು ಗಮನಿಸಿ.