ಹಿಂದೂ ದೇವಾಲಯಗಳ ಧ್ವಂಸದ ಹಿಂದೆ ಬಿಜೆಪಿಯ ಹಿಡನ್ ಅಜೆಂಡಾ?
ರಾಜ್ಯಾದ್ಯಂತ ಭಾರೀ ಗದ್ದಲ ಎಬ್ಬಿಸುತ್ತಿರುವ ನಂಜನಗೂಡಿನ ಪುರಾಣ ಪ್ರಸಿದ್ದ ದೇವಾಲಯ ನೆಲೆಸಮ ಮಾಡಿರುವುದಕ್ಕೆ ಎಲ್ಲಾ ಆಯಾಮಗಳಿಂದ ಟೀಕೆಗಳು ಎದುರಾಗುತ್ತಿವೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವಾಲಯ ನೆಲೆಸಮ ಮಾಡಲಾಗುತ್ತಿದೆ ಎನ್ನುವುದು ರಾಜ್ಯ ಸರಕಾರದ ಸ್ಪಷ್ಟನೆ ಆಗಿದ್ದರೂ, ಜನಾಕ್ರೋಶಕ್ಕೆ ಮಣಿದು, ಇದಕ್ಕೆ ಬೊಮ್ಮಾಯಿ ಸರಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ.
ಸ್ವಪಕ್ಷೀಯರಿಂದಲೇ ಭಾರೀ ಒತ್ತಡ ಬರುತ್ತಿದ್ದಂತೆ, ಮುಂದಿನ ಆದೇಶದ ವರೆಗೆ ಈ ವಿಚಾರವನ್ನು ಮುಟ್ಟಬೇಡಿ ಎನ್ನುವ ಸ್ಪಷ್ಟ ಆದೇಶವನ್ನು ಸರಕಾರ, ಮೈಸೂರು ಜಿಲ್ಲಾಡಳಿತಕ್ಕೆ ನೀಡಿದೆ. ಆದರೂ, ಜನರ ಮತ್ತು ಜನಪ್ರತಿನಿಧಿಗಳು ಸಿಟ್ಟು ಕಮ್ಮಿಯಾಗುತ್ತಿಲ್ಲ.
ಮೈಸೂರಿನ 93 ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್
ರಾಜ್ಯ ಹೆದ್ದಾರಿ-57ರಲ್ಲಿದ್ದ ಹರದನಹಳ್ಳಿ ಉಚ್ಚಗಣಿಯ ಮಹದೇವಮ್ಮ ದೇಗುಲವನ್ನು ಮೈಸೂರು ಜಿಲ್ಲಾಡಳಿತ ಧ್ವಂಸ ಮಾಡಿತು. ಶತಮಾನಗಳ ಇತಿಹಾಸವಿರುವ ಈ ದೇವಾಲಯ ನೆಲಸಮ ಮಾಡಿದ್ದಕ್ಕೆ, ಗ್ರಾಮಸ್ಥರು ಅಂದೇ ಪ್ರತಿರೋಧ ವ್ಯಕ್ತ ಪಡಿಸಿದ್ದರು. ಸುಪ್ರೀಂ ಆದೇಶ ಇದ್ದರೆ ದೇಗುಲವನ್ನು ಹಗಲಲ್ಲೇ ನೆಲಸಮ ಮಾಡಬೇಕಿತ್ತು. ರಾತ್ರಿ ವೇಳೆ ಕಳ್ಳರಂತೆ ದೇಗುಲ ಕೆಡವಿದ್ದೇಕೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಂಜನಗೂಡಿನಲ್ಲಿ ಹಿಂದೂ ದೇವಾಲಯ ನೆಲಸಮ: ಬಿಜೆಪಿ ನಾಯಕರ ವಾಗ್ಯುದ್ಧ
ಈ ವಿಚಾರವೀಗ ಆಡಳಿತ ಮತ್ತು ವಿರೋಧ ಪಕ್ಷಗಳ ವಾಕ್ಸಮರಕ್ಕೆ ಕಾರಣವಾಗಿದೆ. ಗಮನಿಸಬೇಕಾದ ವಿಚಾರವೇನಂದರೆ ಪಕ್ಷಾತೀತಾವಾಗಿ ಸರಕಾರದ ನಿರ್ಧಾರಕ್ಕೆ ಆಕ್ರೋಶ ಹೆಚ್ಚಾಗುತ್ತಿದೆ. ರಾಜ್ಯ ಸರಕಾರಕ್ಕಿಂತ ಮೈಸೂರು ಜಿಲ್ಲಾಡಳಿತ ದೊಡ್ಡದೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೊತೆಗೆ, ಸಂದೇಹವನ್ನೂ ವ್ಯಕ್ತ ಪಡಿಸಿದ್ದಾರೆ.
ನೋಟಿಸ್ ಜಾರಿ ಮಾಡಿದ್ದು, ನಾವು ಉತ್ತರ ಕೊಡುತ್ತೇವೆ, ಮೈಸೂರು ಜಿಲ್ಲಾಧಿಕಾರಿ ಗೌತಂ ಬಗಾದಿ
ಮೈಸೂರಿನ ದೇವಾಲಯಗಳ ತೆರವು ಕಾರ್ಯಚರಣೆ ಸ್ಥಗಿತಗೊಳಿಸಬೇಕೆಂಬ ವಿವಿಧ ಸಂಘಟನೆಗಳ ಒತ್ತಾಯಕ್ಕೆ ಕಡೆಗೂ ಸರ್ಕಾರ ಮಣಿದಿದೆ. ಮೈಸೂರಿನ 93 ದೇವಾಲಯಗಳನ್ನು ತೆರವು ಮಾಡಬೇಕೆಂಬ ಜಿಲ್ಲಾಡಳಿತದ ಕ್ರಮಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. "ಈಗಾಗಲೇ ದೇವಾಲಯ ನೆಲಸಮಗೊಳಿಸಿದ ಜಿಲ್ಲಾಡಳಿತದ ಕ್ರಮದ ಬಗ್ಗೆ ವಿವರಣೆ ಕೇಳಿ ಸರ್ಕಾರ ನೋಟಿಸ್ ಜಾರಿ ಮಾಡಿದೆ. ನನಗೆ ಮತ್ತು ತಹಶೀಲ್ದಾರರಿಗೆ ಈ ನೋಟಿಸ್ ಜಾರಿ ಮಾಡಿದ್ದು, ನಾವು ಉತ್ತರ ಕೊಡುತ್ತೇವೆ" ಎಂದು ಮೈಸೂರು ಜಿಲ್ಲಾಧಿಕಾರಿ ಗೌತಂ ಬಗಾದಿ ಹೇಳಿದ್ದಾರೆ.
|
ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ - 1
ಸುಪ್ರೀಂ ಕೋರ್ಟ್ ಆದೇಶದ ನೆಪದಲ್ಲಿ ಮೈಸೂರು ಜಿಲ್ಲೆಯ 93 ದೇವಾಲಯಗಳ ಧ್ವಂಸಕ್ಕೆ ರಾಜ್ಯ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯೇ ಕಾರಣ. ಒಂದು ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದೇ? ಒಂದೆಡೆ ದೇಗುಲಗಳ ಧ್ವಂಸ ನಡೆಯುತ್ತಿದೆ. ಇನ್ನೊಂದೆಡೆ ಆಡಳಿತ ಪಕ್ಷದ ಮಿತ್ರಸಂಘಟನೆ ಹಿಂದೂ ಜಾಗರಣ ವೇದಿಕೆ ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದೆ!" - ಎಚ್.ಡಿ.ಕುಮಾರಸ್ವಾಮಿ ಟ್ವೀಟ್.
ಸರಕಾರ ಮನಸ್ಸು ಮಾಡಿದರೆ ತಕ್ಷಣವೇ ದೇಗುಲಗಳ ನೆಲಸಮ ನಿಲ್ಲಿಸಬಹುದು
"ಇದರ ಅರ್ಥವೇನು? ದೇಗುಲಗಳ ಧ್ವಂಸ ಮತ್ತು ಪ್ರತಿಭಟನೆ ಹಿಂದೆ ಬಿಜೆಪಿ ಇದೆ ಎಂಬ ಅನುಮಾನ ಕಾಡುತ್ತಿದೆ. ಸರಕಾರ ಮನಸ್ಸು ಮಾಡಿದರೆ ತಕ್ಷಣವೇ ದೇಗುಲಗಳ ನೆಲಸಮ ನಿಲ್ಲಿಸಬಹುದು. ಸರಕಾರ ಅದನ್ನು ಮಾಡುತ್ತಿಲ್ಲ. ಹಿಂದುಗಳ ರಕ್ಷಣೆಯ ಪೇಟೆಂಟ್ ಪಡೆದು ರಾಜಕಾರಣ ಮಾಡುವ ಭಾರತೀಯ ಜನತಾ ಪಕ್ಷದ ಸರಕಾರವೇ ರಾಜ್ಯದಲ್ಲಿದೆ. ಹಾಗಾದರೆ, ದೇವಾಲಯಗಳನ್ನೇಕೆ ನೆಲಸಮ ಮಾಡಲಾಗುತ್ತಿದೆ? ಸರಕಾರವೇ ಇದಕ್ಕೆ ಉತ್ತರ ನೀಡಬೇಕು.ಸರಕಾರಕ್ಕೆ ನಿಜಕ್ಕೂ ದೇಗುಲ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸುಪ್ರೀಂ ಕೊರ್ಟ್ʼಗೆ ಮೇಲ್ಮನವಿ ಸಲ್ಲಿಸಲಿ. ಎಲ್ಲ ಪಕ್ಷಗಳನ್ನು ಕರೆದು ಚರ್ಚೆ ನಡೆಸಲಿ" - ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್.
ಹಿಂದೂ ದೇವಾಲಯಗಳ ಧ್ವಂಸ, ಬಿಜೆಪಿಯ ಸ್ಪಷ್ಟ ಮಾರ್ಗಸೂಚಿ?
"ಅದನ್ನು ಬಿಟ್ಟು ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸ ಮಾಡುವುದು ಬೇಡ. ದೇವಾಲಯಗಳಿಗೆ ರಕ್ಷಣೆ ನೀಡಲು ಸರಕಾರ ಸಂಪೂರ್ಣ ವಿಫಲವಾಗಿದೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದೆ. ಜನರ ಗಮನ ಬೇರೆಡೆಗೆ ಸೆಳೆಯಲು ಸರಕಾರವೇ ಈ ನಾಟಕ ಆಡುತ್ತಿದೆಯಾ ಎಂಬ ಸಂಶಯ ಉಂಟಾಗುತ್ತಿದೆ. ಇದೂ ಬಿಜೆಪಿಯ ಕಾರ್ಯಸೂಚಿಯೇ" ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಪ್ರಶ್ನೆ.