ಹಳ್ಳಿ ಹಳ್ಳಿಗೂ ಟೆಲಿ ಮೆಡಿಸನ್ ಸೇವೆ: ಡಿಸಿಎಂ ಅಶ್ವಥ್ ನಾರಾಯಣ
ಮೈಸೂರು, ಅಕ್ಟೋಬರ್ 19: ಕೋವಿಡ್ ಸಂಕಷ್ಟದ ಕಾಲದಲ್ಲಿ ಹಳ್ಳಿಗಳಿಗೂ ಟೆಲಿಮೆಡಿಸನ್ ವ್ಯವಸ್ಥೆ ಒದಗಿಸುವ ತಂತ್ರಜ್ಞಾನ ಆಧಾರಿತ ತಜ್ಞ ವೈದ್ಯ ಸೇವೆಗೆ ಅನುಕೂಲ ಒದಗಿಸುವಂತೆ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆಯು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದು, ಅದಕ್ಕೆ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.
ಈ ಸಂಸ್ಥೆಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಅಲ್ಲಿನ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರಲ್ಲದೆ, ತಂತ್ರಜ್ಞಾನ ಆಧಾರಿತ ಟೆಲಿ ಮೆಡಿಸನ್ ಸೇವೆಯನ್ನು ಜನಸಾಮಾನ್ಯರಿಗೂ ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಉತ್ಸುಕವಾಗಿದೆ. ಐಟಿ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜಾರಿ ಮಾಡಲಾಗುವುದು ಎಂದರು.
ತಾಯಿ ಚಾಮುಂಡೇಶ್ವರಿ ದಯೆಯಿಂದ ಆರೋಗ್ಯವಾಗಿದ್ದೇನೆ: ಶಾಸಕ ರಾಮದಾಸ್ ಟ್ವೀಟ್
ಸರಕಾರದಿಂದ ಎಲ್ಲ ರೀತಿಯ ಸಹಕಾರ
ಕೋವಿಡ್ ಈಗ ಎಲ್ಲ ವ್ಯವಸ್ಥೆಗಳನ್ನೂ ಅಸ್ತವ್ಯಸ್ತವಾಗಿಸಿದೆ. ಅದು ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚು ಪ್ರಮಾಣದಲ್ಲೇ ಆಗಿದೆ. ಕಿಯೋನಿಕ್ಸ್ ಸಹಭಾಗಿತ್ವದಲ್ಲಿ ತಂತ್ರಜ್ಞಾನಯುಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಟೆಲಿ ಕಮಾಂಡ್ ಕೇಂದ್ರವನ್ನು ತೆರೆಯುವ ಯೋಜನೆಗೆ ಸಂಸ್ಥೆಯು ಸರಕಾರದ ಬೆಂಬಲವನ್ನು ಕೇಳಿದೆ. ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೇನೆ. ರಾಜ್ಯದ ಪ್ರತಿಹಳ್ಳಿಗೂ ಟೆಲಿ ಮೆಡಿಸನ್ ವ್ಯವಸ್ಥೆಯನ್ನು ತಲುಪಿಸಲು ಈ ಸಂಸ್ಥೆ ಮುಂದೆ ಬಂದಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.
ಟೆಲಿ ಮೆಡಿಸನ್ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ
ಪ್ರಸಕ್ತ ದಿನಗಳಲ್ಲಿ ವೈದ್ಯಕೀಯ ನಿಪುಣತೆಯ ಜತೆಗೆ, ಅದಕ್ಕೆ ಪೂರಕವಾಗಿ ತಂತ್ರಜ್ಞಾನವನ್ನೂ ಬಳಕೆ ಮಾಡಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಸ್ಕ್ಯಾನ್ ರೇ ಕೆಲಸ ಮಾಡುತ್ತಿದೆ. ನೆರೆ ಸೇರಿದಂತೆ ಯಾವುದೇ ರೀತಿಯ ಪ್ರಕೃತಿ ವಿಕೋಪ, ಕೋವಿಡ್ ನಂತಹ ಸೋಂಕು ಬಂದಾಗಲೂ ಇಂತಹ ಟೆಲಿ ಮೆಡಿಸನ್ ವ್ಯವಸ್ಥೆ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ ಎಂದು ಹೇಳಿದರು.
ಇದಕ್ಕೂ ಮೊದಲು ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್ ಯಡಿಯೂರಪ್ಪ ಬಳಿ ರಾಜೀನಾಮೆ ನೀಡಿ ಎನ್ನುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ತುರ್ತು ಪರಿಹಾರ ನೀಡಲಾಗುತ್ತಿದೆ
ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗೆ ಎನ್.ಡಿ.ಆರ್.ಎಫ್ ಗೈಡ್ ಲೈನ್ಸ್ ಪ್ರಕಾರ ಹಣ ಬಿಡುಗಡೆ ಆಗುತ್ತದೆ. ಎಲ್ಲಾ ರಾಜ್ಯಗಳು ಒಪ್ಪಿ ಮಾಡಿರುವ ಗೈಡ್ ಲೈನ್ಸ್. ಅದು ಈಗಾಗಲೇ ತುರ್ತು ಪರಿಹಾರ ನೀಡಲಾಗುತ್ತಿದೆ. ಹತ್ತು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಪರಿಹಾರದ ಮೊತ್ತವನ್ನು, ನಮ್ಮ ಕೇಂದ್ರ ಸರ್ಕಾರ ಒಂದೇ ಅವಧಿಯಲ್ಲಿ ರಿಲೀಸ್ ಮಾಡಿದೆ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ನೆರೆ ಸಂತ್ರಸ್ಥರಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದು ಗೊತ್ತು ಎಂದು ಟೀಕಿಸಿದರು.
ಕಾಲೇಜು ಆರಂಭಿಸಲು ಯುಜಿಸಿ ಗೈಡ್ ಲೈನ್ಸ್ ನಲ್ಲಿ ಅವಕಾಶ
ಉಪ ಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ. ಸ್ಥಿರವಾದ ಸರ್ಕಾರ ಬೇಕು ಅಂತ ಜನರ ಅಪೇಕ್ಷೆ ಇದೆ. ಕಳೆದ ಮೈತ್ರಿ ಸರ್ಕಾರದ ಕಚ್ಚಾಟದಿಂದ ಜನ ಬೇಸತ್ತಿದ್ದರು. ಈಗ ಕಾಂಗ್ರೆಸ್ ಜೆಡಿಎಸ್ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಶಿರಾದಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ನೀಡುವುದರಿಂದ ಏನು ಉಪಯೋಗವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರ ಆಡಿಯೋ ರಿಲೀಸ್ ಆಗಿದೆ. ಜೆಡಿಎಸ್ ಭಾವನಾತ್ಮಕವಾಗಿ ಮತ ಸೆಳೆಯಲು ಸಾಧ್ಯವಿಲ್ಲ. ಪಕ್ಷಗಳು ತಮ್ಮ ಕಾರ್ಯದ ಮೂಲಕ ಜನರ ವಿಶ್ವಾಸಗಳಿಸಬೇಕೇ ಹೊರತು ಪ್ರತಿಷ್ಠೆಯಿಂದಲ್ಲ ಎಂದರು. ನವೆಂಬರ್ 1 ರಂದು ಕಾಲೇಜು ಆರಂಭಿಸುವ ಕುರಿತು ಮಾತನಾಡಿದ ಅಶ್ವಥ್ ನಾರಾಯಣ್, ನವೆಂಬರ್ನಲ್ಲಿ ಕಾಲೇಜು ಪ್ರಾರಂಭಿಸಲು ಯುಜಿಸಿ ಗೈಡ್ ಲೈನ್ಸ್ ನಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಭೆಗಳು, ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಕಾಲೇಜು ಆರಂಭದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದರು.