ಕಿತ್ತಾಡಿಕೊಂಡಿದ್ದಕ್ಕೆ ಮೂರನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ
ಮೈಸೂರು, ಡಿಸೆಂಬರ್ 16: ರಾಜ್ಯ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಥಳಿಸುವಂತಿಲ್ಲ ಎಂಬ ಕಡ್ಡಾಯ ನಿಯಮ ಜಾರಿ ಮಾಡಿದ್ದರೂ ನಂಜನಗೂಡು ತಾಲೂಕಿನ ಹುರ ಗ್ರಾಮದ ಗಾಯತ್ರಿ ವಿದ್ಯಾಮಂದಿರದ ಖಾಸಗಿ ಶಾಲೆಯಲ್ಲಿ ಶಿಕ್ಷಕರೊಬ್ಬರು ಮೂರನೆಯ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಪುಟ್ಟ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸವೀಡು ಗ್ರಾಮದ ಮಹೇಶ ಎಂಬುವರ ಪುತ್ರ ಜೀವನ್ ಎಂಬ ವಿದ್ಯಾರ್ಥಿ ಥಳಿತಕ್ಕೊಳಗಾದ ವಿದ್ಯಾರ್ಥಿ. ಈತ ಗಾಯತ್ರಿ ವಿದ್ಯಾಮಂದಿರದಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ. ಪಾಠ ನಡೆಯುತ್ತಿದ್ದ ವೇಳೆ ತರಗತಿಯಲ್ಲಿ ಜೀವನ್ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಹೊಡೆದಾಡಿಕೊಂಡಿದ್ದರು. ಇದನ್ನು ಗಮನಿಸಿದ ಶಿಕ್ಷಕ, ವಿದ್ಯಾರ್ಥಿ ಜೀವನ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಶಾಲೆ ಬಿಟ್ಟ ಬಳಿಕ ಮನೆಗೆ ತೆರಳಿದ ವೇಳೆ ಆತನ ಮೈಮೇಲಿದ್ದ ಬಾಸುಂಡೆಗಳನ್ನು ಪೋಷಕರು ನೋಡಿದ್ದು, ಶಾಲೆಗೆ ಬಂದು ವ್ಯವಸ್ಥಾಪಕ ನಟರಾಜ್ ಅವರ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ವಿಡಿಯೋ: ಬೆಂಗಳೂರಿನ ಪುಟ್ಟ ಬಾಲಕಿಯನ್ನು ಬೆಲ್ಟಿನಿಂದ ಬಾರಿಸಿದ ರಾಕ್ಷಸಿ
ಪುಟ್ಟ ಬಾಲಕನಿಗೆ ರಕ್ತ ಹೆಪ್ಪುಗಟ್ಟುವ ರೀತಿ ಬಡಿಯುವುದು ಕಾನೂನಿನಲ್ಲಿ ಅಪರಾಧ. ಆದರೂ ಶಿಕ್ಷಕ ಮಾಡಿದ ತಪ್ಪನ್ನೇ ಸಮರ್ಥನೆ ಮಾಡಿಕೊಂಡು ಶಾಲಾ ಮುಖ್ಯಸ್ಥ ನಟರಾಜನ ವಿರುದ್ಧ ಪೋಷಕರು ಮತ್ತು ಗ್ರಾಮದ ಇತರೆ ಮುಖಂಡರು ವಾಗ್ದಾಳಿ ನಡೆಸಿದರು. ಜೀವನ್ ಪೋಷಕರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ, "ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಂಪಿಸಿದ್ದು ಎಂಬ ಶಿಕ್ಷಕ ಹಲ್ಲೆ ಮಾಡಿರುವುದು ನಿಜ. ಈ ರೀತಿ ಹಲ್ಲೆ ಮಾಡಿರುವುದು ಅಕ್ಷಮ್ಯ ಅಪರಾಧ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಾಲಾ ವ್ಯವಸ್ಥಾಪಕ ಮತ್ತು ಶಿಕ್ಷಕನ ಮೇಲಿನ ಶಿಸ್ತು ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.