ಮೈಸೂರಿನ ತಾಯೂರು ಕೊರೊನಾ ಮುಕ್ತ ಗ್ರಾ.ಪಂ
ಮೈಸೂರು, ಮೇ 25: ಕೊರೊನಾ 2ನೇ ಅಲೆಯು ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣವಾಗಿರುವುದು ಪಟ್ಟಣದಲ್ಲಿದ್ದ ಜನ ಮತ್ತೆ ಹಳ್ಳಿ ಸೇರಿರುವುದು ಎಂದರೆ ತಪ್ಪಾಗಲಾರದು.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಂಡರೂ ನಿರ್ಲಕ್ಷ್ಯವಹಿಸಿ ತಪಾಸಣೆ ಮಾಡಿಸದೆ, ಎಲ್ಲೆಂದರಲ್ಲಿ ಓಡಾಡುವುದು, ಹೋಂ ಐಸೋಲೇಷನ್ಗೆ ಸೂಕ್ತ ಸೌಲಭ್ಯಗಳಿಲ್ಲದಿರುವುದು ಹೀಗೆ ಹತ್ತಾರು ಕಾರಣಗಳಿಂದ ಇಂದು ಹಳ್ಳಿ ಪ್ರದೇಶದ ಜನರ ಮೇಲೆ ಕೊರೊನಾ ಸೋಂಕು ದಾಳಿ ಮಾಡುತ್ತಿದೆ.
ಕ್ವಾರಂಟೈನ್ ಆಗದೆ ಜನರ ಸುತ್ತಾಟ
ಇನ್ನು ಲಾಕ್ಡೌನ್ ಕೂಡ ಪಟ್ಟಣ ಪ್ರದೇಶಕ್ಕಷ್ಟೆ ಸೀಮಿತ ಎಂಬಂತಾಗಿದೆ. ಬಹಳಷ್ಟು ಹಳ್ಳಿಗಳಲ್ಲಿ ಕೊರೊನಾ ಮಹಾಮಾರಿಯ ಭಯವಿಲ್ಲದೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸ್ ಯಾವುದನ್ನೂ ಮಾಡದೆ ಇರುವುದು ಕಾಣಿಸುತ್ತಿದೆ. ಇನ್ನು ಪಟ್ಟಣದಿಂದ ಬಂದವರು ಹೋಂ ಕ್ವಾರಂಟೈನ್ ಆಗದೆ ಎಲ್ಲೆಂದರಲ್ಲಿ ಸುತ್ತಾಡಿದ್ದಾರೆ. ಅದರ ಪರಿಣಾಮಗಳನ್ನು ಈಗ ಹಳ್ಳಿಗಳ ಜನ ಎದುರಿಸುವಂತಾಗಿದೆ.
ಇದೆಲ್ಲದರ ನಡುವೆ ಕೆಲವು ಗ್ರಾಮ ಪಂಚಾಯಿತಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ತಮ್ಮ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಕೊರೊನಾ ಸೋಂಕು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದನ್ನು ನಾವು ಶ್ಲಾಘಿಸಲೇಬೇಕಾಗಿದೆ.
ಖುಷಿ ತಂದ ತಾಯೂರು ಗ್ರಾ.ಪಂ ಕಾರ್ಯ
ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರಕ್ಕೆ ಸೇರುವ ತಾಯೂರು ಗ್ರಾಮ ಪಂಚಾಯಿತಿಯು ಸದ್ಯ ಕೊರೊನಾ ಮಹಾಮಾರಿಯಿಂದ ಮುಕ್ತವಾಗಿರುವುದು ಖುಷಿ ತಂದಿದೆ. ಇದಕ್ಕೆ ಗ್ರಾ.ಪಂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ಮತ್ತು ಕೊರೊನಾ ಕುರಿತಂತೆ ಅರಿವು ಮೂಡಿಸಿರುವುದೇ ಸಾಕ್ಷಿಯಾಗಿದೆ.
ಕೋವಿಡ್ ನಿಯಮ ಕಡ್ಡಾಯ ಪಾಲನೆ
ಇತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ತಾಯೂರು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ತನ್ನ ವ್ಯಾಪ್ತಿಗೆ ಒಳಪಡುವ ಹಾರೋಪುರ, ಸಾಲುಂಡಿ, ಕೊಟ್ಟೂರಯ್ಯನ ಹುಂಡಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಜೊತೆಗೂಡಿ ಗ್ರಾಮ ಪಂಚಾಯಿತಿಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಗ್ರಾಮಗಳಲ್ಲಿ ಸ್ಯಾನಿಟೈಸ್ ಮಾಡಿಸುವ ಮೂಲಕ ಗ್ರಾಮಗಳಲ್ಲಿ ಸೋಂಕು ಹರಡದಂತೆ ನೋಡಿಕೊಂಡಿದ್ದಲ್ಲದೆ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅರಿವು ಮೂಡಿಸಲಾಯಿತು.
ಹಳ್ಳಿಗಳನ್ನು ಕಾಪಾಡಿದ ಮುಂಜಾಗ್ರತಾ ಕ್ರಮ
ಜನ ಕೈಗೊಂಡ ಮುಂಜಾಗ್ರತಾ ಕ್ರಮಗಳಿಂದ ಕೊರೊನಾ ಮಹಾಮಾರಿ ಸರಪಳಿ ತುಂಡಾಗುವುದರೊಂದಿಗೆ ಸೋಂಕು ಹರಡಲು ಸಾಧ್ಯವಾಗಲಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಗ್ರಾಮಗಳ ಜನರೇ ಜಾಗೃತರಾಗಿ ಸೋಂಕು ತಡೆಗೆ ಸ್ವಯಂ ರಕ್ಷಣೆಗಳನ್ನು ಮಾಡಿಕೊಂಡಿದ್ದಲ್ಲದೆ, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ಮೈಸೂರು ಜಿಲ್ಲೆಯಲ್ಲಿ ಕೊರೊನಾ ಮುಕ್ತ ಗ್ರಾ.ಪಂ ಎಂಬ ಹೆಗ್ಗಳಿಕೆ ಪಡೆಯಲು ಸಾಧ್ಯವಾಗಿದೆ.
ಜನರ ಸಹಕಾರದಿಂದ ಕೊರೊನಾಕ್ಕೆ ಕಡಿವಾಣ
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗ್ರಾ.ಪಂ ಅಧ್ಯಕ್ಷ ತಾಯೂರು ಬಸವರಾಜು, ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೊನಾ ಮಹಾಮಾರಿಗೆ ಕಡಿವಾಣ ಹಾಕಲಾಗಿದ್ದು, ಜನರ ಸಹಕಾರದಿಂದ ಕೊರೊನಾ ಮುಕ್ತ ಗ್ರಾಮಗಳಾಗಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಅದು ಏನೇ ಇರಲಿ, ಜನರು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಖಂಡಿತಾ ತಮ್ಮ ಹಳ್ಳಿಗಳನ್ನು ಕೊರೊನಾ ಮುಕ್ತವಾಗಿಸುವುದು ಕಷ್ಟವೇನಲ್ಲ ಎಂಬುದಕ್ಕೆ ತಾಯೂರು ಗ್ರಾ.ಪಂಗಿಂತ ಮತ್ತೊಂದು ಉದಾಹರಣೆ ಬೇಕಾಗಿಲ್ಲ.