ಹೆಚ್ಚುತ್ತಿರುವ ಸೋಂಕಿನ ಪ್ರಮಾಣ; ಎನ್.ಆರ್. ಕ್ಷೇತ್ರದ ಜವಾಬ್ದಾರಿ ಹೊತ್ತ ಶಾಸಕ ತನ್ವೀರ್ ಸೇಠ್
ಮೈಸೂರು, ಜುಲೈ 25: ಇಂದಿನಿಂದ ಎನ್.ಆರ್. ಕ್ಷೇತ್ರದಲ್ಲಿ ನಾನು ಸಕ್ರಿಯನಾಗಿರಲಿದ್ದು, ಕೊರೊನಾ ಟಾಸ್ಕ್ ಫೋರ್ಸ್ ಅಧ್ಯಕ್ಷನಾಗಿ ನಾನೇ ಮುಂದುವರಿಯುತ್ತೇನೆ ಎಂದು ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
Recommended Video
ಅನಾರೋಗ್ಯದ ಕಾರಣದಿಂದ ಕಳೆದ ಹಲವು ದಿನಗಳಿಂದ ವಿಶ್ರಾಂತಿಯಲ್ಲಿದ್ದ ಶಾಸಕ ತನ್ವೀರ್ ಸೇಠ್, ಶನಿವಾರದಿಂದ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉಂಟಾಗಿರುವ ಕೊರೊನಾ ಸಮಸ್ಯೆ ಹಾಗೂ ಅದರ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.
ಕೃಷ್ಣರಾಜ ಕ್ಷೇತ್ರವನ್ನು ಕೊರೊನಾಮುಕ್ತವಾಗಿಸಲು ರಾಮದಾಸ್ ಯತ್ನ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, "ಇಂದಿನಿಂದ ಎನ್.ಆರ್. ಕ್ಷೇತ್ರದಲ್ಲಿ ಸಕ್ರಿಯವಾಗಿರಲಿದ್ದೇನೆ. ಕೊರೊನಾ ಟಾಸ್ಕ್ ಫೋರ್ಸ್ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಈ ಬಗ್ಗೆ ಸದಸ್ಯ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿರುವ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿಗೆ ತಿಳಿಸುತ್ತೇನೆ. ಅನಾರೋಗ್ಯದ ಕಾರಣ ಜನರಿಂದ ದೂರ ಇದ್ದು ಜನರ ಕೆಲಸ ಮಾಡುತ್ತಿದ್ದೆ. ಆದರೆ ಇಂದಿನಿಂದ ಜನರ ಬಳಿಯೇ ಇದ್ದು ಕೆಲಸ ಮಾಡುತ್ತೇನೆ. ಎನ್.ಆರ್. ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ, ಸಾವಿನ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಭಯವಿದೆ. ಅಲ್ಲದೇ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದರಿಂದ ಜನ ಭಯಗೊಂಡಿದ್ದಾರೆ. ಆದ್ದರಿಂದ ಧಾರ್ಮಿಕ ಗುರುಗಳ ಮೂಲಕ ಕ್ಷೇತ್ರದ ಜನರ ಭಯವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ" ಎಂದರು.
ಹೆರಿಗೆಗೆ 15 ದಿನ ಇರುವ ಗರ್ಭಿಣಿಯರಿಗೆ ಕೊರೊನಾ ಪರೀಕ್ಷೆ ಕಡ್ಡಾಯ: ಹೆರಿಗೆಗೆ 15 ದಿನ ಇರುವ ಗರ್ಭಿಣಿಯರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಒಟ್ಟು 28 ಗರ್ಭಿಣಿಯರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಗರ್ಭೀಣಿಯರಿಗಾಗಿ ಮೈಸೂರಿನಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಅವರ ಸುರಕ್ಷತೆ ದೃಷ್ಟಿಯಿಂದ 100 ಬೆಡ್ ಗಳ ಪ್ರತ್ಯೇಕ ಆಸ್ಪತ್ರೆ ಆರಂಭಿಸಲು ಸಿದ್ಧತೆ ನಡೆದಿದೆ. ಹೀಗಾಗಿ ಹೆರಿಗೆಗೆ 15 ದಿನ ಇರುವ ಗರ್ಭೀಣಿಯರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕಿದೆ ಎಂದರು.