ತನ್ವೀರ್ ಸೇಠ್ ಕೊಲೆಯತ್ನ ಪ್ರಕರಣ: ಆರೋಪಿ ಪತ್ನಿ ಆತ್ಮಹತ್ಯೆ ಬೆದರಿಕೆ
ಮೈಸೂರು, ಡಿಸೆಂಬರ್ 2: "ನನ್ನ ಗಂಡ ಯಾವ ತಪ್ಪನ್ನು ಮಾಡಿಲ್ಲ. ಹೀಗಿದ್ದರೂ ಪೊಲೀಸರು ನನ್ನ ಪತಿಯನ್ನು ಹಾಗೂ ಇನ್ನಷ್ಟು ಅಮಾಯಕರನ್ನು ಬಂಧಿಸಿದ್ದಾರೆ. ಇವರನ್ನು ಈ ಕೂಡಲೇ ಬಿಡದಿದ್ದರೆ ನಾನು ಪೊಲೀಸ್ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಶಾಸಕ ತನ್ವೀರ್ ಸೇಠ್ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಫರ್ಹಾನ್ ಪತ್ನಿ ಹೀನಾ ಕೌಸರ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅಮಾಯಕರನ್ನು ಬಂಧಿಸಲಾಗಿದೆ. ನಮಗೆ ನ್ಯಾಯ ಸಿಗಬೇಕು" ಎಂದು ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ, ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
"ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ. ಎಸ್ ಡಿಪಿಐ ಹೆಸರು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ. ನಾವು ಈ ಪ್ರಕರಣದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ" ಎಂದರು.
ತನ್ವೀರ್ ಕತ್ತಿಗೆ ಮಚ್ಚು ಹಾಕುವ ಮುನ್ನ ನಾಯಿ ಕತ್ತು ಸೀಳುತ್ತಿದ್ದುದೇಕೆ?
"ಆರೋಪಿ ಫರ್ಹಾನ್ ನನ್ನು ನಿನ್ನೆ ಎಸ್ ಡಿಪಿಐ ಕಚೇರಿ ಮುಂದೆ ನಿಲ್ಲಿಸಿ ಪೊಲೀಸರು ಫೋಟೋ ತೆಗೆದಿದ್ದಾರೆ. ಕಚೇರಿ ಮುಂದೆ ನಿಲ್ಲಿಸಿ ಫೋಟೋ ತೆಗೆಸುವುದು ಯಾವ ಕಾನೂನು ಎಂದು ನಮಗೆ ತಿಳಿಯುತ್ತಿಲ್ಲ. ಈ ರೀತಿ ವರ್ತಿಸುವ ಮೂಲಕ ಪೊಲೀಸ್ ಇಲಾಖೆ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ನಡೆಯುತ್ತಿದೆ" ಎಂದು ಅಬ್ದುಲ್ ಮಜೀದ್ ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.