ಡಿ.14ರಿಂದ ತಲಕಾಡಿನ ಪಂಚಲಿಂಗ ದರ್ಶನ ಮಹೋತ್ಸವ; ಈ ಬಾರಿ ಹೇಗೆ ನಡೆಯಲಿದೆ?
ಮೈಸೂರು, ನವೆಂಬರ್ 5: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದಸರಾ ಉತ್ಸವವನ್ನು ಹೇಗೆ ಆಚರಿಸಲಾಯಿತೋ ಅದೇ ರೀತಿ ತಲಕಾಡಿನ ಪಂಚಲಿಂಗ ದರ್ಶನ ಮಹೋತ್ಸವವನ್ನೂ ನೆರವೇರಿಸೋಣ. ಈ ಮಹೋತ್ಸವಕ್ಕೂ ವರ್ಚುವಲ್ ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮಹೋತ್ಸವಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ, ಜನಪ್ರತಿನಿಧಿಗಳ ಸಲಹೆಯನ್ನು ಪಡೆದರು. ಉತ್ಸವವನ್ನು ಆಚರಿಸುವ ಬಗೆ, ಆಗಬೇಕಾದ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದರು.
ತಲಕಾಡು ದೇಗುಲ ಐತಿಹಾಸಿಕ, ಪುರಾಣ ಕಥೆ
"ತಲಕಾಡಿನಲ್ಲಿ ಅಭಿವೃದ್ಧಿ ಕೆಲಸಗಳು ಇನ್ನಷ್ಟು ಆಗಬೇಕಿದೆ. ಡಿ.14ರಿಂದ ಪಂಚಲಿಂಗ ದರ್ಶನ ಮಹೋತ್ಸವ ಆರಂಭವಾಗುತ್ತಿರುವುದರಿಂದ ಎಲ್ಲ ಕೆಲಸವನ್ನು ಒಮ್ಮೆಲೇ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ. ತಲಕಾಡು ಕ್ಷೇತ್ರದ ವೈದ್ಯೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಮತ್ತು ಮುಡುಕುತೊರೆ ಮಲ್ಲುಕಾರ್ಜುನೇಶ್ವರನ ಐದು ದೇವಸ್ಥಾನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ಮಹೋತ್ಸವಕ್ಕೆ ಸಮಿತಿ ರಚನೆ: ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಐದಾರು ಮಂದಿಯನ್ನೊಳಗೊಂಡ ತಂಡವನ್ನು ರಚಿಸಲಾಗುವುದು. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಆ ವರದಿಯ ನಂತರ ಮಹೋತ್ಸವದಲ್ಲಿ ಎಷ್ಟು ಜನ ಇರಬೇಕು ಎಂಬ ಕುರಿತು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.