ಪ್ರತಿವರ್ಷ ದಸರಾ ವೇಳೆ ತಲಕಾಡು ಗಂಗರ ಉತ್ಸವ ಆಯೋಜನೆ
ಮೈಸೂರು, ಜುಲೈ 20: "ಇನ್ನು ಮುಂದೆ ಪ್ರತಿ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ತಲಕಾಡು ಗಂಗರ ಉತ್ಸವ ಆಯೋಜಿಸುತ್ತೇವೆ. ಇದರಿಂದ ತಲಕಾಡಿನ ಇತಿಹಾಸ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ," ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ಮಾತನಾಡಿದ ಸಚಿವ ಯೋಗೇಶ್ವರ್, "ವಿವಿಧ ಇಲಾಖೆಗಳ ಜೊತೆ ಚರ್ಚೆ ಮಾಡಿ ಈ ಬಗ್ಗೆ ರೂಪುರೇಷೆ ಮಾಡುತ್ತೇನೆ. ತಲಕಾಡು ಗಂಗರ ಉತ್ಸವ ನಡೆಸಲು ತಲಕಾಡು ಅಭಿವೃದ್ಧಿ ಸಮಿತಿ ರಚಿಸುತ್ತೇವೆ. ತಲಕಾಡು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಇನ್ನೂ ಹೆಚ್ಚಿನ ಜನರಿಗೆ ಪರಿಚಯವಾಗಬೇಕಿದೆ,' ಎಂದರು.
"ತಲಕಾಡಿನಂತಹ ಸ್ಥಳದ ಅಭಿವೃದ್ಧಿ ಅವಶ್ಯಕತೆ ಇದ್ದು, ಆದರೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಈ ಕೊರತೆಯನ್ನು ಸರಿಪಡಿಸಲು ಉತ್ಸವಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು,'' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.
"ಮೈಸೂರಿನಲ್ಲಿ ಹೆಲಿ ಟೂರಿಸಂ ಆದಷ್ಟು ಬೇಗ ಪ್ರಾರಂಭವಾಗಲಿದ್ದು, ಸದ್ಯದ ವಿರೋಧಗಳನ್ನು ಗಮನಿಸಿ ರೂಪುರೇಷೆಗಳನ್ನು ಬದಲಾವಣೆ ಮಾಡಿಕೊಂಡು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಮೈಸೂರಿನ ವಿಮಾನ ನಿಲ್ದಾಣ ಬಳಕೆ ಮಾಡಿಕೊಂಡು ಹೆಲಿ ಟೂರಿಸಂ ಅರಂಭಿಸಲಾಗುವುದು,'' ಎಂದು ಸಚಿವ ಸಿ.ಪಿ. ಯೋಗೇಶ್ವರ್ ಮಾಹಿತಿ ಹಂಚಿಕೊಂಡರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಸಿ.ಪಿ. ಯೋಗೇಶ್ವರ್, "ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಏನೇ ಮಾತನಾಡಿದರೂ ತಪ್ಪಿಗೆ ಸಿಲುಕಿಕೊಳ್ಳುತ್ತೇನೆ. ಕಳೆದ 3 ದಿನಗಳಿಂದ ನಾನು ಕೊಡಗು ಜಿಲ್ಲೆಯಲ್ಲಿದ್ದೆ. ಯಾವುದೇ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿಯಿಲ್ಲ. ರಾಜಕೀಯದ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ,'' ಎಂದು ಹೇಳಿದರು.