ತಿ. ನರಸೀಪುರದಲ್ಲಿ ಸಚಿವರು ಉದ್ಘಾಟಿಸಿದ ಕಟ್ಟಡ ಮತ್ತೊಮ್ಮೆ ಉದ್ಘಾಟನೆ!
ತಿ.ನರಸೀಪುರ, ಅಕ್ಟೋಬರ್ 12: ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಮಾದಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ಹಿಂದೆ ಉದ್ಘಾಟಿಸಿದ್ದರು. ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾಂಪ್ರದಾಯವಾಗಿ ಹೋಮ ಹವನ ನಡೆಸಿ ಮತ್ತೊಮ್ಮೆ ಉದ್ಘಾಟನೆ ಮಾಡಲಾಗಿದೆ.
ತಾಲೂಕಿನ ಮಾದಾಪುರ ಗ್ರಾಮದಲ್ಲಿ 6 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಸಚಿವರು ಕಳೆದ 4 ವರ್ಷಗಳ ಹಿಂದೆ ಭೂಮಿ ಪೂಜೆ ನೇರವೇರಿಸಿದ್ದರು. ಇದಾದ ನಂತರ ಕಳೆದ ನಾಲ್ಕು ವರ್ಷಗಳ ಕಾಲ ಕಟ್ಟಡ ಕಾಮಗಾರಿ ನಡೆದು ಕಟ್ಟಡ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಭಾನುವಾರ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟನೆ ನೆರವೇರಿಸಿದ್ದರು.
ಇದೀಗ ಸಚಿವರು ಉದ್ಘಾಟನೆ ಮಾಡಿದ್ದ ಸರ್ಕಾರಿ ಕಟ್ಟಡವನ್ನು ಆಸ್ಪತ್ರೆ ಸಿಬ್ಬಂದಿ ಹಾಗೂ ಮಾದಾಪುರ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತೊಮ್ಮೆ ಉದ್ಘಾಟನೆ ಮಾಡಿದ್ದಾರೆ. ಅರ್ಚಕರನ್ನು ಕರೆಯಿಸಿ, ಹೋಮ ಹವನ ಮಾಡಿಸಿ, ಗೋವನ್ನು ಅಸ್ಫತ್ರೆ ಒಳಗಡೆ ಪ್ರವೇಶಿಸಿ, ಕುಂಬಳಕಾಯಿ ಒಡೆಯುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟನೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಅವರು ಈ ಕುರಿತು ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.