ಎಚ್.ಸಿ.ಮಹದೇವಪ್ಪಗೆ ಸೋಲುಣಿಸಲು ಸಜ್ಜಾದರೆ ಟಿ.ನರಸೀಪುರದ ಜನತೆ?
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಕರ್ನಾಟಕದಲ್ಲೇ ಅತೀ ಕುತೂಹಲ ಕೇರಳಸಿರುವ ಪ್ರಮುಖ ಕ್ಷೇತ್ರಗಳಲ್ಲೊಂದು. ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಸ್ಪರ್ಧಿಸುತ್ತಿರುವ ಕ್ಷೇತ್ರ. 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಎಂ.ಸಿ. ಸುಂದರೇಶನ್ ಅತ್ಯಂತ ಕಠಿಣ ಸವಾಲೊಡ್ಡಿದ್ದರು. ಮಹದೇವಪ್ಪ ಅವರು ಸುಂದರೇಶನ್ ವಿರುದ್ಧ ಕಡೆಯ ಸುತ್ತಿನ ಮತ ಎಣಿಕೆಯಲ್ಲಿ ಕೇವಲ 323 ಮತಗಳ ಅಂತರದಲ್ಲಿ ಗೆಲುವಿನ ದಡ ಸೇರಿದರು.
2008 ಹಾಗು 2013ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಿಂದ ಪರಾಜಿತಗೊಂಡಿದ್ದ ಸುಂದರೇಶನ್ 2017ರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು. ಇದರಿಂದ ತೆರವಾದ ಜಾಗದಲ್ಲಿ ಸೋಮನಾಥಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಹಾಲಿ ಸದಸ್ಯ ಅಶ್ವಿನ್ ಕುಮಾರ್ ರನ್ನು ಜೆಡಿಎಸ್ ತನ್ನ ಹುರಿಯಾಳನ್ನಾಗಿಸಿದೆ. ಡಾ. ಎಚ್.ಸಿ. ಮಹದೇವಪ್ಪಗೆ ಇದು 8ನೇ ಬಾರಿಯ ಅದೃಷ್ಟ ಪರೀಕ್ಷೆ. ಈ ಮೊದಲು 7 ಬಾರಿ ಸ್ಪರ್ಧಿಸಿ (ಜನತಾ ಪಕ್ಷ, ಜನತಾದಳ, ಜೆಡಿಎಸ್, ಕಾಂಗ್ರೆಸ್), 5 ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯ ಸರ್ಕಾರದಲ್ಲಿ ಕಳೆದ 5 ವರ್ಷಗಳಿಂದ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರೌಂಡ್ ರಿಪೋರ್ಟ್: ಪಿರಿಯಾಪಟ್ಟಣದಲ್ಲಿ ಮಹದೇವು ಒಂದು ಹೆಜ್ಜೆ ಮುಂದೆ
ಮಹದೇವಪ್ಪಗೆ ತಾನು ರಾಜಕಾರಣದ ಉತ್ತುಂಗದಲ್ಲಿರುವಾಗಲೇ ತಮ್ಮ ಮಗನನ್ನು ಸಕ್ರಿಯ ರಾಜಕಾರಣಕ್ಕೆ ತಂದು ಕೂರಿಸಬೇಕೆಂಬ ಮಹದಾಸೆಯಿಂದ, ಮಗ ಸುನಿಲ್ ಬೋಸ್ ಗೇ ಟಿ. ನರಸೀಪುರ ಕ್ಷೇತ್ರದ ಟಿಕೆಟ್ ಎಂದು ಕಳೆದೆರಡು ವರ್ಷಗಳಿಂದ ತಾವೇ ಉಚ್ಛರಿಸುತ್ತಿದರು. ತಾವು ಬೆಂಗಳೂರಿನ ಸಿ.ವಿ.ರಾಮನ್ ನಗರ ಅಥವಾ ಇನ್ನಾವುದಾದರೂ ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷದ ಕಡೆಯ ಸಮಯದಲ್ಲಿ ನಡೆದ ಟಿಕೆಟ್ ವಿಚಾರದ ಗೊಂದಲದಲ್ಲಿ ಸುನಿಲ್ ಬೋಸ್ ಗೆ ಟಿಕೆಟ್ ಸಿಗದೆ ಡಾ. ಎಚ್.ಸಿ.ಮಹದೇವಪ್ಪ ಅವರೇ ಟಿ.ನರಸೀಪುರದಲ್ಲಿ ಸ್ಪರ್ಧಿಸುವಂತಾಯಿತು.
ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಮನೆ ಮೇಲೆ ಐಟಿ ದಾಳಿ
ಕಳೆದ ಬಾರಿಯಂತೆ ಈ ಬಾರಿಯೂ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ. ವಾಸ್ತವದಲ್ಲಿ ಬಿಜೆಪಿಯ ಹೋರಾಟ ಕ್ಷೇತ್ರದಲ್ಲಿ ಗಣನೀಯವಾಗಿ ಕುಸಿದಿದೆ. ಭಾರತೀಯ ಜನತಾ ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿದೆ.
ಬಹುತೇಕ ಕಡೆಗಳಲ್ಲಿ ಅಶ್ವಿನ್ ಕುಮಾರ್ ಪರ ಒಲವು
ನರಸೀಪುರ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಅಶ್ವಿನ್ ಕುಮಾರ್ ಪರ ಒಲವು ವ್ಯಕ್ತವಾದಂತಿದೆ. ಕ್ಷೇತ್ರದ ವಿವಿಧ ಹೋಬಳಿಗಳ ಹೆಚ್ಚಿನ ಭಾಗಗಳಲ್ಲಿ ಜೆಡಿಎಸ್ ಪರವಾದ ಅಲೆ ಮೇಲ್ನೋಟಕ್ಕೆ ಕಾಣತೊಡಗಿದೆ. ಬನ್ನೂರು ಹೋಬಳಿ - ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಅಶ್ವಿನ್ ಕುಮಾರ್ ಗೆ ಲಾಭವಾಗಬಹುದಾದ ವಾತಾವರಣ ಎದ್ದು ಕಾಣುತ್ತಿದೆ.
ತಲಕಾಡು ಹೋಬಳಿಯಲ್ಲಿ ಜೆಡಿಎಸ್ ಕಾಂಗ್ರೆಸ್ ಗಿಂತ ಮುಂದಿರುವಂತೆ ಹಾಗು ಹೆಚ್ಚಿನ ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಇರುವಂತೆ ಗೋಚರಿಸುತ್ತಿವೆ. ಮಹದೇವಪ್ಪರ ಪುತ್ರ ಬೋಸ್ ಮರಳು ವ್ಯವಹಾರದಲ್ಲಿ ತೊಡಗಿಕೊಂಡಿದ್ದು, ಮರಳು ವ್ಯಾಪಾರಿಗಳಿಗೆ, ಜನಸಾಮಾನ್ಯರಿಗೆ, ಅಧಿಕಾರಿಗಳಿಗೆ ಅನೇಕ ಹಂತಗಳಲ್ಲಿ ತೊಂದರೆ ಕೊಟ್ಟಿದ್ದು ಜನರ ಕಣ್ಣಿಗೆ ಕಟ್ಟಿದಂತಿದೆ.
ಸೋಸಲೆ ಹೋಬಳಿಯಲ್ಲಿ ಕುರುಬ ಸಮುದಾಯದ ಪ್ರಾಬಲ್ಯ ಹೆಚ್ಚಿರುವುದರಿಂದ ಮಹದೇವಪ್ಪರಿಗೆ ಹೆಚ್ಚಿನ ಬಲ ಸಿಗುವ ಸಾಧ್ಯತೆ ಹೆಚ್ಚು. ಮೂಗೂರು ಹೋಬಳಿಯಲ್ಲಿ ಜೆಡಿಎಸ್ ಗೆ ಹೆಚ್ಚಿನ ಒಲವಿದ್ದಂತೆ ಕಾಣುತ್ತಿದೆ. ನರಸೀಪುರ ಪುರಸಭೆ ಹಾಗು ಪಟ್ಟಣದ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ ಕಾಣಿಸುತ್ತಿದೆ.
ತಿ.ನರಸಿಪುರದಲ್ಲಿ ಮಹದೇವಪ್ಪ ಪುತ್ರ ಸ್ಪರ್ಧಿಸುವುದು ನಿಜವೇ..?
ಜೆಡಿಎಸ್ ಪರವಾಗಿರುವುದಕ್ಕೆ ಕಾರಣಗಳು
ಇಡೀ ಕ್ಷೇತ್ರದಲ್ಲಿ ಜೆಡಿಎಸ್ ನ ಪರವಾಗುತ್ತಿರುವುದಕ್ಕೆ ಮತದಾರರು ನೀಡುತ್ತಿರುವ ಕಾರಣಗಳ ಪಟ್ಟಿ ಹೀಗಿದೆ:
1. ಡಾ.ಹೆಚ್.ಸಿ.ಮಹದೇವಪ್ಪ ವಿರುದ್ಧ ಆಡಳಿತ ವಿರೋಧಿ ಅಲೆ.
2. ಡಾ.ಎಚ್.ಸಿ.ಮಹದೇವಪ್ಪ ಪ್ರಮುಖ ಸಚಿವರಾಗಿ ಕ್ಷೇತ್ರವನ್ನು ಮಗ ಸುನಿಲ್ ಬೋಸ್ ಗೆ ಬಿಟ್ಟುಕೊಟ್ಟ ನಂತರ, ಬೋಸ್ ರ ದುರ್ವರ್ತನೆಯಿಂದ ಬೇಸತ್ತಿರುವ ಜನ.
3. ವ್ಯಾಪಕವಾಗಿ ನಡೆದ ಮರಳು ದಂಧೆ.
4. ಸುನಿಲ್ ಬೋಸ್ ರಿಂದ ಅಧಿಕಾರಿಗಳ ವಲಯದಲ್ಲಿ ಅತಿಯಾದ ಹಸ್ತಕ್ಷೇಪ.
ಮಂಡ್ಯ ಮೂಲದ ತಹಸೀಲ್ದಾರ್ ಶಂಕರಯ್ಯ ಆತ್ಮಹತ್ಯೆ ವಿಚಾರವಾಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಸುನಿಲ್ ಬೋಸ್ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಅಶ್ವಿನ್ - ವಿದ್ಯಾವಂತ, ಎಂಟೆಕ್ ಇನ್ ಅಗ್ರಿಕಲ್ಚರ್
5. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪರವಾದ ಅಲೆ.
6. ಲಿಂಗಾಯತ ಮತದಾರರೂ ಟಿ.ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿಸುವ ಮುನ್ಸೂಚನೆ.
7. ಜೆಡಿಎಸ್ ಅಭ್ಯರ್ಥಿ ಅಶ್ವಿನ್ - ವಿದ್ಯಾವಂತ, ಎಂಟೆಕ್ ಇನ್ ಅಗ್ರಿಕಲ್ಚರ್ ನಲ್ಲಿ ಪದವೀಧರ, 36 ವಯಸ್ಸಿನ ಯುವ ರಾಜಕಾರಣಿ.
8. ಅಶ್ವಿನ್ ಕುಮಾರ್, ಮಾಜಿ ಎ.ಡಿ.ಜಿ.ಪಿ. ಹಾಗು ಐ.ಪಿ.ಎಸ್. ಅಧಿಕಾರಿ ಸುಭಾಷ್ ಭರಣಿಯವರ ಹತ್ತಿರದ ಸಂಬಂಧಿ.
ಏನು ಬೇಕಾದರೂ ನಡೆಯಬಹುದು
ಇವೆಲ್ಲಾ ಲೆಕ್ಕಾಚಾರಗಳ ಆಚೆಗೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾನಕ್ಕೆ ಇನ್ನುಳಿದ 4 ದಿನಗಳಲ್ಲಿ ಏನು ಬೇಕಾದರೂ ನಡೆಯಬಹುದು. ಅದರಲ್ಲೂ ನರಸೀಪುರದಂತಹ ಪ್ರಭಾವಿ ಸಚಿವರ ಕ್ಷೇತ್ರದಲ್ಲಿ ಅನೇಕ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಫಲಿತಾಂಶ ಏನು ಬೇಕಾದರೂ ಆಗಬಹುದು. ಮೇ 12ರಂದು ನಡೆಯಲಿರುವ ಮತದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರು ಬಂದು ಮತ ಚಲಾಯಿಸಬೇಕಿದೆ. ಮೇ 15ರಂದು ಮಹಾದೇವಪ್ಪನವರ ಹಣೆಬರಹ ಬಯಲಾಗಲಿದೆ.