ತಿ.ನರಸೀಪುರ: ಸೋಮನಾಥಪುರ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಬೇಕಿದೆ
ತಿ.ನರಸೀಪುರ, ಅಕ್ಟೋಬರ್ 15: ಬಿರುಕು ಬಿಟ್ಟ ಗೋಡೆಗಳು.. ಮಳೆ ಬಂದರೆ ಸೋರುವ ಛಾವಣಿ.. ಭಯದಲ್ಲೇ ಕಾಲ ಕಳೆಯುವ ಸಿಬ್ಬಂದಿ.. ಇದು ಸೋಮನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ದೃಶ್ಯಗಳು.
ಜನಸಾಮಾನ್ಯರಿಗೆ ಆರೋಗ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿದೆ. ಈ ಕಾರಣದಿಂದ ಕಾರ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ಭಯದಿಂದಲೇ ದಿನ ಕಳೆಯುವಂತಾಗಿದೆ.
ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲವಾಗಿದ್ದು ಈ ಬಗ್ಗೆ ಗ್ರಾಮದ ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದ ಕಾರಣ ಛಾವಣಿ ಸೋರುತ್ತಿರಲಿಲ್ಲ. ಆದರೆ ಈ ಬಾರಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಕಾರಣದಿಂದಾಗಿ ಛಾವಣಿ ತೇವಗೊಂಡು ನೀರು ಸೋರುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ
ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ ಹೋಗಿರುವುದನ್ನು ಕಂಡ ಜಿಪಂ ಸದಸ್ಯ ಎಂ.ಅಶ್ವಿನ್ ಕುಮಾರ್ ಅವರು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜುರವರನ್ನು ಕರೆಯಿಸಿ ತುರ್ತು ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.
ಸೋರುತಿಹುದು ಆಸ್ಪತ್ರೆಯ ಮಾಳಿಗೆ
ಈ ಕುರಿತಂತೆ ಮಾತನಾಡಿದ ಜಿಪಂ ಸದಸ್ಯ ಅಶ್ವಿನ್ ಕುಮಾರ್ ಅವರು, ಸೋಮನಾಥಪುರ ಗ್ರಾಮವನ್ನೊಳಗೊಂಡ ಜಿಪಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಹೆಚ್ಚಿನ ನಿಗಾ ವಹಿಸಲೇಬೇಕಾಗಿದೆ. ಆಸ್ಪತ್ರೆ ಕಟ್ಟಡ ಸ್ವಾತಂತ್ರ್ಯ ಪೂರ್ವದಾಗಿದ್ದು ನಿರ್ವಹಣೆಯಿಲ್ಲದೆ ಶಿಥಿಲಗೊಂಡಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಬಿಳುತ್ತಿರುವ ಪರಿಣಾಮ ಕಟ್ಟಡದ ಸುತ್ತಲೂ ನೀರು ಶೇಖರಣೆಗೊಂಡಿದೆ. ಇದರಿಂದ ಗೋಡೆ ತೇವಾಂಶದಿಂದ ಬಿರುಕು ಬಿಟ್ಟಿದೆ ಎಂದು ಹೇಳಿದ್ದಾರೆ.
ಈ ಕಟ್ಟಡದ ಮೇಲ್ಛಾವಣಿ ಮದ್ರಾಸ್ ಆರ್ಸಿಸಿಯಾಗಿದ್ದು ನೀರು ನಿಂತ ಕಾರಣ ಸೋರಿಕೆಯಾಗಿ ಔಷಧಿ, ಪೀಠೋಪಕರಣ, ಪ್ರಿಂಟರ್ ಸೇರಿದಂತೆ ಹಲವು ಪರಿಕರಗಳು ನೀರಿನಿಂದ ಒದ್ದೆಯಾಗಿ ಹಾಳಾಗಿದೆ ಎಂದರು.
ಆಸ್ಪತ್ರೆ ಜಾಗ ಯಾರಿಗೆ ಸೇರಿದ್ದು ಎಂಬುದೇ ಗೊತ್ತಿಲ್ಲ!
ಇನ್ನು ಆಸ್ಪತ್ರೆ ಕಟ್ಟಡವಿರುವ ಸ್ಥಳ ಯಾವ ಇಲಾಖೆಗೆ ಸೇರಿದೆ ಎಂಬುವುದಕ್ಕೂ ದಾಖಲೆ ಇಲ್ಲದಾಗಿದೆ. ಜಿಪಂ, ತಾಪಂ, ಗ್ರಾಪಂಗಳಲ್ಲೂ ಸಹ ಸ್ಥಳದ ಬಗ್ಗೆ ಮಾಹಿತಿಯಿಲ್ಲದಾಗಿದೆ. ಹೀಗಾಗಿ ಯಾವ ಇಲಾಖೆಯೂ ಕಟ್ಟಡದ ನಿರ್ವಹಣೆಯತ್ತ ಗಮನಹರಿಸುತ್ತಿಲ್ಲ ಎಂದು ಅಶ್ವಿನಿ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಜಿಪಂ ಸಭೆಯಲ್ಲಿ ಸಂಬಂಧಿಸಿದವರ ಗಮನಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಕಟ್ಟಡಕ್ಕೆ 50-60 ವರ್ಷ
ಈ ಆಸ್ಪತ್ರೆ ಆರಂಭಗೊಂಡು 50 ರಿಂದ 60 ವರ್ಷಗಳಾಗಿದ್ದು, ಅಧಿಕಾರಿಗಳು ಹಾಗೂ ಗಣ್ಯರು ಭೇಟಿ ನೀಡಿದ ಬಗ್ಗೆ 1968 ರಿಂದಲೂ ದಾಖಲೆ ಇದೆ. ಈ ಗ್ರಾಮ ಅಕ್ಕ ಪಕ್ಕದ ಹಳ್ಳಿಗಳಿಗೆ ಕೇಂದ್ರ ಸ್ಥಾನದಲ್ಲಿದೆ. ಸುಮಾರು 3,000 ಜನ ಸುತ್ತಮುತ್ತ ವಾಸಿಸುತ್ತಿದ್ದು ಎಲ್ಲರಿಗೂ ಆಸ್ಪತ್ರೆಯ ಅಗತ್ಯತೆಯಿದೆ. ಆದ್ದರಿಂದ ಇದರ ಉಳಿವಿನತ್ತ ಗಮನಹರಿಸುವುದು ಅಗತ್ಯವಾಗಿದೆ.
ಇನ್ನು ಈ ಕುರಿತು ಡಿಎಚ್ಓ ಬಸವರಾಜು ಮಾತನಾಡಿ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿರುವುದನ್ನು ಪರಿಶೀಲಿಸಿದ್ದು, ಈ ಕಟ್ಟಡ ಪುರಾತತ್ವ ಇಲಾಖೆಗೆ ಒಳಪಟ್ಟ ಶ್ರೀ ಚನ್ನಕೇಶವ ದೇವಾಲಯದ ಪಕ್ಕದಲ್ಲಿದೆ. ಇದರ ಸಾಧಕ ಬಾಧಕಗಳನ್ನು ಕಲೆ ಹಾಕಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನೂತನ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲು ಕ್ರಮವಹಿಸುವುದಾಗಿ ಹೇಳಿದ್ದಾರೆ.