ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಬಂದ 'ಕಾಮನ್ ಮ್ಯಾನ್'
ಮೈಸೂರು, ಅಕ್ಟೋಬರ್ 1: ಅಲ್ಲೊಬ್ಬ ಕೇಶವಿಲ್ಲದ ಗಾಂಧಿ ಗ್ಲಾಸ್ ಹಾಕಿಕೊಂಡ ವ್ಯಕ್ತಿ ರಂಗುರಂಗಿನ ಚೌಕಾಳಿ ಜಾಕೆಟ್-ದೋತಿ ತೊಟ್ಟು, ಗಾಂಭಿರ್ಯವಾಗಿ ಏನನ್ನೊ ವಿರೋಧಿಸುವವನಂತೆ, ಗೊಂದಲದ ಮುಖಭಾವದಲ್ಲಿ ಕಣ್ಣಗಳನ್ನು ಅಗಲಿಸಿ ಬೆಂಚ್ ಕಲ್ಲು ಪಕ್ಕದಲ್ಲಿ ಕೃಷ್ಣನ ಭಂಗಿಯಲ್ಲಿ ನಿಂತು ಪುಸ್ತಕ ಓದುತ್ತಿದ್ದಾನೆ. ಆತನ ಹೆಸರು ಸಾಮಾನ್ಯ ಮನುಷ್ಯ (ಕಾಮನ್ ಮ್ಯಾನ್).
ಇದು ಕಂಡುಬಂದಿದ್ದು ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ನಿಂತು ವೀಕ್ಷಕರ ಸೆಳೆಯಲು ಮುಂದಾಗಿದ್ದಾನೆ. ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ ದಿ.ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಥವಾ ಆರ್.ಕೆ ಲಕ್ಷ್ಮಣ್ ಅವರು ಸೃಷ್ಟಿಸಿದ ಪ್ರಸಿದ್ಧ ವಿಡಂಬನ ಚಿತ್ರ, ಪಾತ್ರ "ಸಾಮಾನ್ಯ ಮನುಷ್ಯ'ನ ಶಿಲ್ಪವನ್ನು ಮೈಸೂರು ರೈಲು ಸಂಗ್ರಹಾಲಯದ ಆವರಣದಲ್ಲಿ ಸ್ಥಾಪಿಸಲಾಗಿದೆ.
ಮೈಸೂರಿಗೆ ಬಂದರೆ ಈ ಸ್ಥಳಗಳಿಗೂ ಹೋಗುವುದನ್ನು ಮರೆಯಬೇಡಿ
ಇಡೀ ರಾಷ್ಟ್ರವೇ ಮೂಕ ಪ್ರೇಕ್ಷಕನಾಗಿ ನೋಡುವಂತೆ ಮಾಡಿದರು
"ನನ್ನ ಸ್ಕೆಚ್ ಪೆನ್ ಕತ್ತಿಯಲ್ಲ. ಅದು ನನ್ನ ಸ್ನೇಹಿತ' ಎಂಬ ನಂಬಿಕೆಯನ್ನು ಗಾಢವಾಗಿ ಹೊಂದಿದ್ದವರು ಆರ್.ಕೆ ಲಕ್ಷ್ಮಣ್. ಇಡೀ ರಾಷ್ಟ್ರವೇ ಮೂಕ ಪ್ರೇಕ್ಷಕನಾಗಿ ನೋಡುವಂತೆ ತಮ್ಮ ವಿಲಕ್ಷಣವಾದ ಗ್ರಹಿಕೆ ಮತ್ತು ವಿಡಂಬನೆಯಿಂದ ಭಾರತೀಯ ಜೀವನ ಮತ್ತು ರಾಜಕಾರಣವನ್ನು "ಸಾಮಾನ್ಯ ಮನುಷ್ಯನ' ದೃಷ್ಟಿಯಲ್ಲಿ ಚಿಂತಿಸುವ ಮತ್ತು ವಿವರಿಸುವ ವ್ಯಂಗ್ಯಚಿತ್ರವನ್ನು ಬರೆದರು.
ಅವರು ಹೀಗೆ ಕಾಮನ್ ಮ್ಯಾನ್ ಅನ್ನು ಆಧಾರವಾಗಿ ಇಟ್ಟುಕೊಂಡು ನಂತರದಲ್ಲಿ ಅವರು ಬರೆದ ಸಾಕಷ್ಟು ವ್ಯಂಗ್ಯಚಿತ್ರಗಳನ್ನು ನೋಡಲು ಅವರ ಅಭಿಮಾನಿಗಳು ಸುಮಾರು ಐದು ದಶಕಗಳ ಕಾಲ ಪ್ರತಿನಿತ್ಯ ಬೆಳಗ್ಗೆ ಕಾತುರದಿಂದ ಕಾಯುತ್ತಿದ್ದರು.
ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಕಾಮನ್ ಮ್ಯಾನ್
ಹೀಗೆ 1951 ರಲ್ಲಿ ಕಾಣಿಸಿಕೊಂಡ ಮೊದಲ ಕಾಮನ್ ಮ್ಯಾನ್ ಈಗ ನಮ್ಮ ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ನಿಂತು ಆರ್.ಕೆ ಲಕ್ಷ್ಮಣ್ ಅವರನ್ನು ಪ್ರತಿನಿತ್ಯ ಸ್ಮರಿಸುವಂತಾಗಿದೆ. ಇಂತಹದೊಂದು ಪಾತ್ರದ ಶಿಲ್ಪವನ್ನು ಸಂಗ್ರಹಾಲಯದಲ್ಲಿ ಸ್ಥಾಪಿಸುವ ಮೂಲಕ ಲಕ್ಷ್ಮಣ್ ಅವರಿಗೆ ಗೌರವ ಸೂಚಿಸಿದಂತೂ ಆಗಿದೆ.
ಸಾಮಾನ್ಯ ಜನರೊಂದಿಗೆ ರೈಲ್ವೆಯ ಸಂಪರ್ಕ ಹೆಚ್ಚಳ
ಈ ಸಂಬಂಧ ಮಾತನಾಡಿರುವ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್, ಇದು ಮೈಸೂರು ವಿಭಾಗದ ಮತ್ತೊಂದು ನವೀನ ಉಪಕ್ರಮವಾಗಿದೆ. ಭಾರತದಲ್ಲಿ ರೈಲ್ವೆಯೆಂದರೆ ಸಾಮಾನ್ಯ ಮನುಷ್ಯನ ಆಶಯ ಮತ್ತು ಆಕಾಂಕ್ಷೆಗಳಿಗಾಗಿಯೇ ಇದೆ. ಈ ಅಪ್ರತಿಮ ಪಾತ್ರವನ್ನು ಸಂಗ್ರಹಾಲಯದಲ್ಲಿ ಸ್ಥಾಪಿಸುವುದು ಸಾಮಾನ್ಯ ಜನರೊಂದಿಗೆ ರೈಲ್ವೆಯ ಸಂಪರ್ಕವನ್ನು ಆಚರಿಸುವ ಒಂದು ಮಾರ್ಗವಾಗಿದೆ ಎಂದಿದ್ದಾರೆ.
ವಸ್ತುಸಂಗ್ರಹಾಲಯಕ್ಕೆ ಅನನ್ಯ ಆಕರ್ಷಣೆ
"ಕಾಮನ್ ಮ್ಯಾನ್' ಪಾತ್ರವು ಸ್ವತಂತ್ರ ಭಾರತದಲ್ಲಿ ರೈಲ್ವೆಯ ಪ್ರಯಾಣದೊಂದಿಗೆ ಹೊಂದಿಕೆಯಾಗುತ್ತದೆ. ನಗರದಿಂದ ಬಂದ ಸೃಷ್ಟಿಕರ್ತನ ಸೃಜನಶೀಲ ಪ್ರತಿಭೆಗೆ ಇದು ಒಂದು ಸಣ್ಣ ಗೌರವ. ಹಾಗೂ ರೂಪಾಂತರಗೊಂಡ ರೈಲು ವಸ್ತುಸಂಗ್ರಹಾಲಯಕ್ಕೆ ಮತ್ತೊಂದು ಅನನ್ಯ ಆಕರ್ಷಣೆಯನ್ನು ಸೇರಿಸಿದಂತಾಗಿದೆ ಎಂದು ತಿಳಿಸಿದ್ದಾರೆ. ಮೈಸೂರು ಮೂಲದ ಅರುಣ್ ಯೋಗಿರಾಜ್ ಎಂಬ ಶಿಲ್ಪಕಲಾ ಕಲಾವಿದನ ಕೈಚಳಕದಿಂದ ಈ ಶಿಲ್ಪ ಮೂಡಿ ಬಂದಿದೆ.