ಮೈಸೂರು: ಅಶೋಕಪುರಂ ರೈಲ್ವೆ ನಿಲ್ದಾಣ ಬಳಿ ಹಳಿ ತಪ್ಪಿದ ರೈಲು!; ಅಣಕು ಕಾರ್ಯಾಚರಣೆ
ಮೈಸೂರು, ಸೆಪ್ಟೆಂಬರ್ 21; ನೋಡ ನೋಡುತ್ತಿರುವಂತೆ ಹಳ್ಳಿ ತಪ್ಪಿದ ರೈಲು ಬೋಗಿ, ರೈಲಿನೊಳಗೆ ಸಿಲುಕಿದ ಪ್ರಯಾಣಿಕರು, ಆಘಾತಗೊಂಡ ಹಾಗೂ ಗಾಯಗೊಂಡ ಪ್ರಯಾಣಿಕರ ರಕ್ಷಣೆಗೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರೈಲ್ವೆ ಪೊಲೀಸರು ಇವೆಲ್ಲ ಕಂಡು ಬಂದಿದ್ದು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ.
ರೈಲು ಸಂಖ್ಯೆ 06220 ಅಶೋಕಪುರಂನಲ್ಲಿ ಹಳಿ ತಪ್ಪಿದ್ದು, ಕೋಚ್ಗಳಾದ ಎಸ್ಡಬ್ಲ್ಯೂಆರ್ 91604 ಮತ್ತು ಎಸ್ಡಬ್ಲ್ಯೂಆರ್ 92605 ತಲೆಕೆಳಗಾಗಿದೆ. 15 ಪ್ರಯಾಣಿಕರು ಸಿಲುಕಿಕೊಂಡಿದ್ದಾರೆಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಮಾಹಿತಿ ಬಂದಿತ್ತು.
ತಕ್ಷಣ ಹಿರಿಯ ವಿಭಾಗೀಯ ಸುರಕ್ಷಾ ಅಧಿಕಾರಿಯವರ ನೇರ ಮೇಲ್ವಿಚಾರಣೆಯಲ್ಲಿ ರೈಲ್ವೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ಭಾಗವಹಿಸಿದ್ದರು.
ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡದೊಂದಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿ ಸಹಯೋಗದೊಂದಿಗೆ, ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ರೈಲು ಅಪಘಾತದ ಜಂಟಿ ಅಣಕು ಕವಾಯತು ನಡೆಸಿತು.
ಈ ವೇಳೆ ರೈಲು ಹಳಿ ತಪ್ಪಿದ ಘಟನೆಯ ನಂತರದಲ್ಲಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವಿಕೆ ಮತ್ತು ಪರಿಹಾರ ಪ್ರೇರಿತ ಕಾರ್ಯಾಚರಣೆಗಳನ್ನು ಹೇಗೆ ಮಾಡಬೇಕು ಮತ್ತು ಹೇಗಿರಲಿದೆ ಎಂದು ಅಣಕು ಕಾರ್ಯಾಚರಣೆ ಮೂಲಕ ತಿಳಿಸಿಕೊಡಲಾಯಿತು.
ಈ ಬಗ್ಗೆ ಅಧಿಕಾರಿಯೋರ್ವರು ಮಾತನಾಡಿ, ಅಣಕು ಕಾರ್ಯಾಚರಣೆಯು ಒಂದು ನೈಜ ಘಟನೆಯ ಸಿದ್ಧತೆಯ ಸ್ಥಿತಿಯನ್ನು ಅಳೆಯುವ ಮತ್ತು ತುರ್ತು ಪ್ರಕ್ರಿಯೆಯ ಯೋಜನೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವ ಏಕೈಕ ಸಾಧನವಾಗಿದೆ. ವಿಶೇಷ ವಿಪತ್ತು ಕ್ಷೇತ್ರದಲ್ಲಿ ಪ್ರಮುಖ ಏಜೆನ್ಸಿಯ ಸಾಮರ್ಥ್ಯದಲ್ಲಿ ಎನ್ಡಿಆರ್ಎಫ್ ಕೂಡ ಭಾರತವನ್ನು ವಿಪತ್ತುಗಳ ಕಡೆಗೆ ಸ್ಥಿತಿಸ್ಥಾಪಕವಾಗಿಸಲು ಬದ್ಧವಾಗಿದೆ ಎಂದರು.
ರೈಲ್ವೆ ಸಿಬ್ಬಂದಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಮಗೆ ನಿರ್ದಿಷ್ಟಪಡಿಸಿದ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಪ್ರಾಯೋಗಿಕವಾಗಿ ತರಬೇತಿಗಳನ್ನು ನಡೆಸುವ ಮೂಲಕ ಆಗಿಂದ್ದಾಗ್ಗೆ ಸಂಭವಿಸುವ ನಿಜವಾದ ಅಥವಾ ತುರ್ತು ಸಂದರ್ಭಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸನ್ನದ್ಧರಾಗುವಂತೆ ಮಾಡುವ ಉದ್ದೇಶವನ್ನು ಹೊಂದಿರುತ್ತದೆ. ಈ ತರಬೇತಿಯಿಂದ ರೈಲ್ವೆ ಸಿಬ್ಬಂದಿಗಳು ಪೂರ್ವಭಾವಿ ತಯಾರಿ ನಡೆಸಿರುವ ಕುರಿತು ಸಂಪೂರ್ಣ ಖಾತ್ರಿಯಾಗುತ್ತದೆ ಎಂದು ಹೇಳಿದರು.