ಎಚ್ಎ1ನ್1 ಮಹಾಮಾರಿಗೆ ಮೈಸೂರಿನಲ್ಲಿ ಮೊದಲ ಬಲಿ
ಎರಡು ವರ್ಷದ ಹಿಂದೆ ಮಹಾಮಾರಿಯಾಗಿ ನಾಡಿನ ಜನರನ್ನು ಕಾಡಿದ್ದ ಎಚ್೧ಎನ್೧ ಇದೀಗ ಮತ್ತೆ ಕರ್ನಾಟಕದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಮೈಸೂರಿನಲ್ಲಿ ಈ ರೋಗದಿಂದಾಗಿ ಇಬ್ಬರು ಬಲಿಯಾಗಿದ್ದು, ರೋಗದ ತೀವ್ರತೆಯನ್ನು ತಿಳಿಸುತ್ತದೆ.
ಮೈಸೂರು, ಮಾರ್ಚ್ 1: ಎರಡು ವರ್ಷದ ಹಿಂದೆ ನಾಡಿನ ಜನರ ನಿದ್ದೆ ಕೆಡಿಸಿದ್ದ ಹಂದಿ ಜ್ವರ(ಎಚ್1ಎನ್1)ವೆಂಬ ಮಹಾಮಾರಿ ಇದೀಗ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ ಮೈಸೂರಿನಲ್ಲಿ 23 ವರ್ಷದ ಗರ್ಭಿಣಿಯೂ, 70 ವರ್ಷದ ಒಬ್ಬ ವೃದ್ದರೂ ಬಲಿಯಾಗುವ ಮೂಲಕ ಎಚ್1ಎನ್1 ಆತಂಕ ಮತ್ತಷ್ಟು ಹೆಚ್ಚಿದೆ.
2016ನೇ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಚ್1ಎನ್1 ಪ್ರಕರಣಗಳು ಮೂರರಷ್ಟು ಹೆಚ್ಚಲಿವೆ. ಈಗಾಗಲೇ ಮೈಸೂರಿನಲ್ಲಿ 27 ಎಚ್1ಎನ್1 ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಒಟ್ಟು 344 ಪ್ರಕರಣಗಳು ದಾಖಲಾಗಿವೆ.2015ರಲ್ಲಿ ಹಂದಿಜ್ವರದ 3565 ಪ್ರಕರಣಗಳು ದಾಖಲಾಗಿದ್ದರೆ, 2014ರಲ್ಲಿ ಕೇವಲ 303 ಪ್ರಕರಣಗಳು ದಾಖಲಾಗಿದ್ದವು.
[ಎಚ್ 1 ಎನ್1: ಮೈಸೂರಿನಲ್ಲಿ 27 ಶಂಕಿತ ಪ್ರಕರಣಗಳು ಪತ್ತೆ]
ಇದು ಕರ್ನಾಟಕದ ಕತೆಯಾದರೆ ನೆರೆಯ ತಮಿಳುನಾಡಿನಲ್ಲಿ ಕೇವಲ ಎರಡು ತಿಂಗಳಲ್ಲಿ 9 ಜನ ಹಂದಿಜ್ವರದಿಂದ ಸಾವಿಗೀಡಾಗಿದ್ದು ಅಪಾಯದ ಕರೆಗಂಟೆಯ ಸೂಚನೆ ನೀಡಿದಂತಿದೆ. ಇಲ್ಲಿ 1000ಕ್ಕೂ ಹೆಚ್ಚು ಹಂದಿಜ್ವರದ ಪ್ರಕರಣಗಳು ಪತ್ತೆಯಾಗಿವೆ. ಎಚ್1ಎನ್1 ವೈರಸ್ ಕಡಿಮೆ ಆರ್ದ್ರ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕಾರಣ ತೆಲಂಗಾಣದಲ್ಲಿ 13ಕ್ಕೂ ಹೆಚ್ಚು ಜನ ಇದೇ ರೋಗದಿಂದ ಅಸುನೀಗಿದ್ದಾರೆ.
ಸಾಮಾನ್ಯ ಜ್ವರದ ಲಕ್ಷಣಗಳನ್ನೇ ಹೊಂದಿದ್ದರೂ ಹಂದಿ ಜ್ವರವನ್ನು ಕಡೆಗಣಿಸುವಂತಿಲ್ಲ. ಕೆಮ್ಮು, ಜ್ವರ, ಮೈಕೈ ನೋವು, ತಲೆನೋವು, ವಾಂತಿ ಇತ್ಯಾದಿ ಸಮಸ್ಯೆಗಳೇನಾದರೂ ಕಂಡುಬಂದರೆ ನಿರ್ಲಕ್ಷ್ಯಿಸದೆ ವೈದ್ಯರನ್ನು ಕಾಣಲೇಬೇಕು.
[ಎಚ್1ಎನ್ 1 ಲಕ್ಷಣಗಳೇನು? ಮುನ್ನೆಚ್ಚರಿಕೆ ವಿಧಾನಗಳೆನು?]
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಎಚ್೧ಎನ್೧ ತ್ವರಿತ ನಿಯಂತ್ರಣಕ್ಕೆ ಆಯಾ ರಾಜ್ಯಗಳು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಪಣತೊಡಬೇಕಿದೆ.