ಮೈಸೂರಿನಲ್ಲಿ ಚಾಲಕನನ್ನು ಬೆದರಿಸಿ ಕಾರು ಕದ್ದು ಪರಾರಿ
ಮೈಸೂರು, ಜುಲೈ 23: ಚಾಲಕನನ್ನು ಬೆದರಿಸಿ ಕಾರನ್ನು ಕದ್ದೊಯ್ದ ಘಟನೆ ಮತ್ತೊಮ್ಮೆ ಮೈಸೂರಿನಲ್ಲಿ ನಡೆದಿದೆ. ಈ ಬಾರಿ ಓಲಾ ಕಂಪನಿಗೆ ಸೇರಿದ ಕಾರನ್ನು ಕಳವು ಮಾಡಲಾಗಿದೆ.
ಕಾರಿಗಾಗಿ ಚಾಲಕನನ್ನು ಜೀವಂತವಾಗಿ ಸುಟ್ಟಿದ್ದ ಆರೋಪಿ ಮೇಲೆ ಫೈರಿಂಗ್
ಮೈಸೂರಿನ ಇಲವಾಲದ ಹರೀಶ್ ಎಂಬುವವರು ತಮ್ಮ ಸ್ವಿಫ್ಟ್ ಕಾರನ್ನು ಓಲಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಚಾಲನೆ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ ಹರ್ಷ ರಸ್ತೆಯ ವೈಸರಾಯ್ ಹೋಟೆಲ್ ಮುಂಭಾಗ ವ್ಯಕ್ತಿಯೊಬ್ಬ ಕಾರನ್ನು ಬುಕ್ ಮಾಡಿದ್ದಾನೆ. ಇನ್ಫೋಸಿಸ್ ಕಡೆಗೆ ಹೊರಡಲು ಹೇಳಿದ್ದಾನೆ. ಕಾರು ಇನ್ಫೋಸಿಸ್ನ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಹೋದಾಗ ಕಾರಿನಿಂದ ಇಳಿದ ವ್ಯಕ್ತಿ ಬೇರೊಬ್ಬರು ಬರುತ್ತಾರೆ ಎಂದು ಅರ್ಧ ಗಂಟೆ ಮೊಬೈಲ್ನಲ್ಲಿ ಮಾತನಾಡಿದ್ದಾನೆ. ಮೊಬೈಲ್ನಲ್ಲಿ ಚಾರ್ಜ್ ಮಾಡುವ ನೆಪದಲ್ಲಿ ಚಾಲಕನನ್ನು ಇಳಿಸಿ ಕಾರಿನಲ್ಲಿ ಕುಳಿತ ವ್ಯಕ್ತಿ ಕಾರನ್ನು ತಾನೇ ಚಾಲನೆ ಮಾಡಲು ಮುಂದಾಗಿದ್ದಾನೆ. ತಡೆಯಲು ಹೋದ ಚಾಲಕನನ್ನು ಗದರಿಸಿ ಕಾರು ಓಡಿಸಿಕೊಂಡು ಪರಾರಿಯಾಗಿದ್ದಾನೆ.
ಆನ್ ಲೈನ್ ನಲ್ಲಿ ಕಾರು ಬುಕ್ ಮಾಡಿದ ಮೊಬೈಲ್ ಸಂಖ್ಯೆಯು ಮಂಡ್ಯದಲ್ಲಿ ಸೊಪ್ಪು ಮಾರುವ ವೃದ್ಧೆಯದು ಎಂಬುದು ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಫೋನ್ ಮಾಡಬೇಕೆಂದು ಒಂದೆರಡು ನಿಮಿಷ ಮೊಬೈಲ್ ತೆಗೆದುಕೊಂಡಿದ್ದರು ಎಂದು ವೃದ್ಧೆ ಪೊಲೀಸರಿಗೆ ತಿಳಿಸಿದ್ದಾರೆ. ಮಂಡ್ಯದ ಶಿವಳ್ಳಿ ಸಮೀಪ ಕಾರಿನ ಜಿಪಿಎಸ್ ಸಂಪರ್ಕವನ್ನು ಕಳ್ಳ ತೆಗೆದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ರೀತಿ ಮೇ 25ರಂದು ಇನ್ಫೋಸಿಸ್ ಬಳಿ ಜಿಗ್ನೊ ಕಂಪನಿಗೆ ಸೇರಿದ ಕಾರೊಂದನ್ನು ವ್ಯಕ್ತಿಯೊಬ್ಬ ಅಪಹರಿಸಿದ್ದನು.