ಸ್ವರಾಜ್ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧಿಸಲಿದೆ:ಯೋಗೇಂದ್ರ ಯಾದವ್
ಮೈಸೂರು,ಡಿಸೆಂಬರ್ 24 :ಪ್ರಜಾಪ್ರಭುತ್ವ ವ್ಯವಸ್ಥೆಯ ಶತ್ರುವಾಗಿರುವ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಮಹಾಘಟ ಬಂಧನ್ ಹೊಸ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಸ್ವರಾಜ್ ಇಂಡಿಯಾ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಎಡ ಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿವೆ. ಆದರೆ, ಅದು ಜನರ ವಿಶ್ವಾಸ ಗಳಿಸುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿಲ್ಲ. ಈ ಹಿಂದೆ ದೇಶದಲ್ಲಿ ರಾಜಕೀಯ ಸಂಸ್ಕೃತಿ ಎಂಬುದು ನಾಶವಾಗಿದೆ. ರಾಜಕಾರಣಿಗಳು ನಕಲಿ ಪ್ರಜಾ ಪ್ರಭುತ್ವವವನ್ನು ಅನುಸರಿಸುತ್ತಿದ್ದು, ಇದರಿಂದ ಉತ್ತಮವಾಗಿರುವ ದೇಶದ ಪ್ರಜಾಪ್ರಭುತ್ವ ಬುಡಮೇಲಾಗಿದೆ ಎಂದರು.
ಕರ್ನಾಟಕ ಚುನಾವಣೆ : ಸ್ವರಾಜ್ ಇಂಡಿಯಾ ಅಭ್ಯರ್ಥಿಗಳ ಪಟ್ಟಿ
ಬೊಫೋರ್ಸ್, ಅಯೋಧ್ಯೆ ಮಂದಿರ, 2ಜಿ ಮೊದಲಾದ ಪ್ರಕರಣಗಳನ್ನು ಆಧರಿಸಿ ಚುನಾವಣೆ ನಡೆಯುತ್ತಿತ್ತು. ಆದರೆ, ರೈತರು, ಯುವ ಜನರ ನಿರುದ್ಯೋಗ ಸಮಸ್ಯೆಗಳ ಬಗ್ಗೆ ಯಾರೂ ಗಮನಹರಿಸಿಲ್ಲ. ಆದ್ದರಿಂದ ಸ್ವರಾಜ್ ಇಂಡಿಯಾ ಇವೆರಡು ವಿಷಯಗಳನ್ನು ಇಟ್ಟುಕೊಂಡು ಚುನಾವಣಾ ಕಣಕ್ಕಿಳಿಯಲಿದೆ ಎಂದು ವಿವರಿಸಿದರು.
ಚುನಾವಣಾ ಪೂರ್ವದಲ್ಲಿ ಬಿಜೆಪಿ ರೈತರಿಗೆ ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ. ರಾಜ್ಯ ಸರ್ಕಾರ ಕೂಡ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ವಿಫಲವಾಗಿದ್ದು, ಇದರ ವಿರುದ್ಧ ಪಕ್ಷ ನಿರಂತರ ಹೋರಾಟ ನಡೆಸಲಿದೆ. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಪ್ರಧಾನಿ ಮೋದಿ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಅಜೆಂಡಾ ವಿರೋಧಿಸಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜಾ.ದಳ ಸಮ್ಮಿಶ್ರ ಸರ್ಕಾರವು, ರೈತರಿಗೆ ನೀಡಿರುವ ಸಂಪೂರ್ಣ ಭರವಸೆಯನ್ನು ಈಡೇರಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು
ಸ್ವರಾಜ್ ಇಂಡಿಯಾ ಪರ ಪುಟ್ಟಣ್ಣಯ್ಯ ಕುಟುಂಬದ ಒಲವು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಐ ಕ್ಯಾನ್ ಅಭಿಯಾನ ಪ್ರಾರಂಭಿಸಲಾಗಿದೆ. ವಾರದ ಹಿಂದೆ ಪ್ರಾರಂಭವಾದ ಈ ಅಭಿಯಾನದಲ್ಲಿ ಇದುವರೆಗೆ 10 ಸಾವಿರ ಜನರು ಅಭ್ಯರ್ಥಿಗಳಾಗಲು ಪಕ್ಷದಿಂದ ಮಾಹಿತಿ ಪಡೆದಿದ್ದಾರೆ. 1,500 ಜನರು ಹೆಸರು ನೋಂದಾಯಿಸಿಕೊಂಡಿದ್ದು, ಈ ಪೈಕಿ ಶೇ.70ರಷ್ಟು ಯುವಜನರು ಎಂಬುದು ವಿಶೇಷ. ಅಭಿಯಾನದ ಬಳಿಕ ಪ್ರತಿ ಕ್ಷೇತ್ರಕ್ಕೂ ಅರ್ಹರನ್ನು ಆಯ್ಕೆ ಮಾಡಿ, ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಅವರಿಗೆ ಸ್ವರಾಜ್ ಇಂಡಿಯಾ ಸಂಪೂರ್ಣ ಬೆಂಬಲ ನೀಡಲಿದೆ. ಒಂದು ವೇಳೆ ಸ್ವರಾಜ್ ಇಂಡಿಯಾ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಐ ಕ್ಯಾನ್ ಅಭಿಯಾನದ ಮೂಲಕ ಆಯ್ಕೆಯಾಗಬೇಕು ಎಂದರು.