ವಿಜೃಂಭಣೆಯಿಂದ ಸಂಪನ್ನಗೊಂಡ ಮೈಸೂರು ಸುತ್ತೂರು ಜಾತ್ರೆ
ಮೈಸೂರು,ಫೆಬ್ರವರಿ,11: ಕಳೆದ 6 ದಿನಗಳ ಕಾಲ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೋತ್ಸವವು ಉತ್ಸವಮೂರ್ತಿಯನ್ನು ಕತೃ ಗದ್ದಿಗೆಯಿಂದ ಶ್ರೀ ಮಠಕ್ಕೆ ವಿಜೈಂಗೈಯಿಸುವ ಮೂಲಕ ಸಂಪನ್ನಗೊಂಡಿದೆ.
ಫೆ.5ರಿಂದ 10ರವರೆಗೆ ನಡೆದ ಜಾತ್ರೆಯಲ್ಲಿ ನಾಡಿನ ಮೂಲೆ ಮೂಲೆ ಹಾಗೂ ಹೊರ ರಾಜ್ಯಗಳಿಂದ ಜನ ಆಗಮಿಸಿದ್ದು, ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು, ಜನಸಾಮಾನ್ಯರು ಸೇರಿದಂತೆ ಸುಮಾರು 40ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.[ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ]
ವಸ್ತು ಪ್ರದರ್ಶನ, ಕೃಷಿ ಮೇಳ, ದೇಸಿ ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಗೆ ಮೆರಗು ತಂದಿದ್ದು, ವಿಜ್ಞಾನ ವಸ್ತು ಪ್ರದರ್ಶನ, ರಾಜ್ಯಮಟ್ಟದ ಭಜನಾಮೇಳ, ದೋಣಿವಿಹಾರ ಎಲ್ಲವೂ ಜಾತ್ರೆಯ ಸಾಂಸ್ಕೃತಿಕ ವೈಭವವನ್ನು ಸಾರಿ ಸಾರಿ ಹೇಳಿತು.[ಜನಸಾಗರದಿಂದ ತುಂಬಿ ತುಳುಕುತ್ತಿತ್ತು ಮೈಸೂರಿನ ಸುತ್ತೂರು ಕ್ಷೇತ್ರ]
ಜಾತ್ರೆಯಲ್ಲಿ ಕುಸ್ತಿಪೈಲ್ವಾನರ ಪಟ್ಟುಗಳನ್ನು ಪ್ರೋತ್ಸಾಹಿಸಲಾಯಿತು. ಜಾತ್ರೆಗೆ ಆಗಮಿಸಿದ ಕಲಾವಿದರಿಗೆಲ್ಲಾ ಉಚಿತ ಊಟವಸತಿ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆಯನ್ನೂ ನೀಡಲಾಯಿತು. ಗ್ರಾಮೀಣ ಪ್ರದೇಶಗಳ ಕಲಾವಿದರಿಗೆ ಜಾತ್ರೆಯಲ್ಲಿ ಉತ್ತಮ ವೇದಿಕೆ ದೊರೆಯುವಂತಾಯಿತು. ಒಟ್ಟಾರೆ ಜಾತ್ರೆ ಕಳೆದರೂ ಜಾತ್ರಾವೈಭವದ ಗುಂಗು ಹಾಗೆಯೇ ಉಳಿಯುವಂತಾಗಿದೆ.