ಮೈಸೂರು: ಸರಕಾರದ ಸುರ್ಪದಿಗೆ ಸುತ್ತೂರು ಮಠದ ಆನೆಗಳು
ಮೈಸೂರು, ಡಿಸೆಂಬರ್ 27 : ಸುತ್ತೂರು ಮಠದಲ್ಲಿದ್ದ ದ್ರೋಣ ಮತ್ತು ಚಂಪಾ ಆನೆಗಳನ್ನು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸರ್ಕಾರದ ಸುಪರ್ದಿಗೆ ಸೋಮವಾರ ವಹಿಸಿದರು.
ಮೈಸೂರಿನ ಶ್ರೀಕ್ಷೇತ್ರ ಸುತ್ತೂರು ಮಠದಲ್ಲಿದ್ದ ಮಾಸ್ತಿ ಮತ್ತು ಲಕ್ಷ್ಮಿ ಎರಡು ಆನೆಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿ, ದ್ರೋಣ ಮತ್ತು ಚಂಪಾ ಆನೆಗಳನ್ನು ಸರ್ಕಾರದಿಂದ ಪಡೆಯಲಾಗಿತ್ತು. ಅವುಗಳನ್ನು ಮಠದಲ್ಲಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಕೇಂದ್ರ ಮೃಗಾಲಯ ಪ್ರಾಧಿಕಾರವು ಈ ಆನೆಗಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸುತ್ತಿದ್ದ ಹಿನ್ನೆಲೆ ಈ ಆನೆಗಳನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಗೆ ಹಿಂದಿರುಗಿಸಲಾಗಿದೆ.[ಮೈಸೂರು : ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವ]
ಸೋಮವಾರ ಬೆಳಿಗ್ಗೆ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆನೆಗಳನ್ನು ಮೃಗಾಲಯದ ನಿರ್ದೇಶಕಿ ಕಮಲಾ ಕರಿಕಾಳನ್ ಅವರ ಸುಪರ್ದಿಗೆ ವಹಿಸಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆನೆಗಳಿಗೆ ಹೂಹಾರ ಹಾಕಿ, ಹಣ್ಣು-ಹಂಪಲುಗಳನ್ನು ನೀಡಿ ಬೀಳ್ಕೊಟ್ಟರು. ಈ ಸಂದರ್ಭ ಅರಣ್ಯ ಅಧಿಕಾರಿಗಳು ಮತ್ತು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು