ಫೆ.1 ರಿಂದ ವೈಭವದ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ
ಮೈಸೂರು, ಜನವರಿ 30: ರಾಜ್ಯದ ವಿಶಿಷ್ಟ ಸಾಂಸ್ಕೃತಿಕ ಜಾತ್ರೆ ಎಂದೇ ಪ್ರಖ್ಯಾತವಾಗಿರುವ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆಬ್ರವರಿ 1 ರಿಂದ ಆರಂಭವಾಗಲಿದೆ ಎಂದು ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು .
ಈ ಕುರಿತು ಸುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಜಾತ್ರೆ ಫೆ.1ರ ಶುಕ್ರವಾರದಿಂದ 6 ರವರೆಗೂ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಈ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಫೆ.1ರ ಶುಕ್ರವಾರ ಶ್ರೀ ಶಿವರಾತ್ರಿ ಶಿವಯೋಗಿಗಳ ಕೈಂಕರ್ಯ ನಡೆಸಿದ ನಂತರ ಶಿವರಾತ್ರಿ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತಿರುವನಂತಪುರದ ಶ್ರೀ ಶಿವಗಿರಿ ಮಠದ ಪೀಠಾಧ್ಯಕ್ಷರಾದ ವಿಶುದ್ಧಾನಂದ ಜೀ ಅವರ ನೇತೃತ್ವದಲ್ಲಿ ರಾಜ್ಯದ ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ಹಾಗೂ ನೀರಾವರಿ ಸಚಿವ ಡಿ.ಕೆ ಶಿವಕುಮಾರ್ ಜಾತ್ರೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಸುತ್ತೂರು ಮಠದ ಶ್ರೀಗಳ ಆಶೀರ್ವಾದ ಪಡೆದ ರಾಹುಲ್ ಗಾಂಧಿ
ಈ ಮಹೋತ್ಸವದಲ್ಲಿ ಫೆಬ್ರವರಿ 3ರಂದು ರಥೋತ್ಸವ, 5 ರಂದು ತೆಪ್ಪೋತ್ಸವ, ಕೊಂಡೋತ್ಸವ ಹಾಲರವಿ ಉತ್ಸವ, ಲಕ್ಷದೀಪೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮದ ಜತೆಗೆ ವೈವಿಧ್ಯಮಯವಾದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯಲಿದೆ ಎಂದು ತಿಳಿಸಿದರು.
ಊಟ ನೀಡಲು ಐದು ಕಡೆ ವ್ಯವಸ್ಥೆ
ಜಾತ್ರೆಗೆ 8 ರಿಂದ 10 ಲಕ್ಷ ಮಂದಿ ಬರುವ ನಿರೀಕ್ಷೆಯಿದ್ದು, ಎಲ್ಲಾ ಭಕ್ತರಿಗೆ ತಿಂಡಿ, ಊಟ ನೀಡಲು ಐದು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 30 ದೊಡ್ಡ ಒಲೆಗಳಲ್ಲಿ ಅಡುಗೆ ತಯಾರಿ ನಡೆಯಲಿದೆ. 500 ಮಂದಿ ಬಾಣಸಿಗರು ಅಡುಗೆ ತಯಾರಿಸಲಿದ್ದಾರೆ. ಬೆಳಗ್ಗೆ ಸಿಹಿ ಪೊಂಗಲ್, ಚಿತ್ರಾನ್ನ, ಖಾರಬಾತ್, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತದೆ.
ಮೈಸೂರು ಜಿಲ್ಲೆಗೂ ಶ್ರೀ ಶಿವಕುಮಾರ ಸ್ವಾಮೀಜಿಗೂ ಅವಿನಾಭಾವ ಸಂಬಂಧ
ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ನಿಗಾ
ಸುಳ್ವಾಡಿ ಪ್ರಕರಣದಲ್ಲಿ ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದರಿಂದ ಸುತ್ತೂರು ಜಾತ್ರೆಯಲ್ಲೂ ಪ್ರಸಾದ ವಿತರಿಸುವ ಮುನ್ನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.ಅಡುಗೆ ಮನೆ ಹಾಗೂ ಸುತ್ತಮುತ್ತ 20 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಡುಗೆ ಮನೆಗೆ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ನಿಗಾ ಇಡಲಾಗುತ್ತದೆ ಎಂದರು.
ಸುತ್ತೂರು ಪುಣ್ಯಕ್ಷೇತ್ರದ ಮಹಿಮೆಯ ಕಥೆ
ಉಚಿತ ಸಾಮೂಹಿಕ ವಿವಾಹ
ಫೆ.1ರಂದು ಮುಂಜಾನೆ 4ಕ್ಕೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಅನುಜ್ಞೆ ಮಹಾ ಸಂಕಲ್ಪಪೂರ್ವಕ ಮಹಾ ರುದ್ರಾಭಿಷೇಕ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. 3ರಂದು ಬೆಳಗ್ಗೆ 10.55ಕ್ಕೆ ರಥೋತ್ಸವ, ಜಾತ್ರೆ ಅಂಗವಾಗಿ 27ನೇ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸಿದ್ದು, 800ಕ್ಕೂ ಹೆಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ವಸ್ತುಪ್ರದರ್ಶನ, ಕೃಷಿ ಮೇಳ, ಚಿತ್ರಕಲಾ ಸ್ಪರ್ಧೆ, ಚಿತ್ರಸಂತೆ, ಸೋಬಾನೆ ಪದ, ರಂಗೋಲಿ, ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ದೇಸಿ ಆಟಗಳ ಸ್ಪರ್ಧೆ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ ಹಾಗೂ 200 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ವಿವಾಹ ನೋಂದಣಿ ಪ್ರಮಾಣ ಪತ್ರ
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-ವರರಿಗೆ ಸೀರೆ, ಕುಪ್ಪಸ, ಮಾಂಗಲ್ಯ, ಕಾಲುಂಗುರ ಹಾಗೂ ಷರ್ಟ್, ಪಂಚೆ, ಶಲ್ಯ ನೀಡಲಾಗುತ್ತದೆ. ವಧು- ವರನ ಕಡೆಯ 50 ಮಂದಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿರಿಸುವ ದಂಪತಿಗಳ ವಿವಾಹ ನೋಂದಣಿಯನ್ನು ಸ್ಥಳದಲ್ಲೇ ಮಾಡಿ, ದೃಢೀಕರಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.