ಮೈಸೂರು: ಕೊರೊನಾ ಕಾರಣದಿಂದ ಸುತ್ತೂರು ಜಾತ್ರೆ ರದ್ದು
ಮೈಸೂರು, ಡಿಸೆಂಬರ್ 22: ಕೊರೊನಾ ಸೋಂಕು ಹಿನ್ನೆಲೆಯಲ್ಲಿ 2021ರ ಫೆಬ್ರವರಿ 8 ರಿಂದ 13 ರವರೆಗೆ ನಡೆಯಬೇಕಿದ್ದ ಸುತ್ತೂರು ಜಾತ್ರೆ ಈ ವರ್ಷ ರದ್ದು ಮಾಡಲಾಗಿದೆ ಎಂದು ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಕೊರೊನಾದಿಂದಾಗಿ ಎಲ್ಲ ಹಬ್ಬಗಳನ್ನೂ ಸರಳವಾಗಿ ಆಚರಿಸಲಾಗುತ್ತಿದ್ದು, ಈಗಾಗಲೇ ಕೆಲವು ಜಾತ್ರೆ ರದ್ದಾಗಿ ಕೇವಲ ಪೂಜಾ ಕೈಂಕರ್ಯಗಳು ನಡೆದಿದ್ದವು.
ಮೈಸೂರಲ್ಲಿ ಕೆಲಸ ಖಾಲಿ ಇದೆ; ಡಿ. 30ರೊಳಗೆ ಅರ್ಜಿ ಹಾಕಿ
ಅದರಂತೆ ಸುತ್ತೂರು ಕ್ಷೇತ್ರದಲ್ಲಿ ಪುಷ್ಯ ಬಹುಳ ದ್ವಾದಶಯಿಂದ ಮಾಘ ಶುದ್ದ ತದಿಗೆ ಅಂದರೆ 2021 ಫೆಬ್ರವರಿ 8 ರಿಂದ 13 ರವರೆಗೆ ನೆರವೇರಬೇಕಿದ್ದ ಸುತ್ತೂರು ಜಾತ್ರೆ ರದ್ದಾಗಿದ್ದು, ಜಾತ್ರೆಯಲ್ಲಿ ನಡೆಯುತ್ತಿದ್ದ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ, ಇತರ ಉತ್ಸವಗಳು, ಜೊತೆಗೆ ಕೃಷಿ ಮೇಳ, ವಸ್ತು ಪ್ರದರ್ಶನ, ದೇಸಿ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಇತರ ಸ್ಪರ್ಧೆಗಳು, ನಾಟಕಗಳು ಯಾವುದೇ ಪ್ರದರ್ಶನ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬದಲಾಗಿ ಫೆಬ್ರವರಿ 9 ರಂದು ಸಂಜೆ ಮಠದಿಂದ ಉತ್ಸವ ಮೂರ್ತಿಯನ್ನು ಕರ್ತೃ ಗದ್ದುಗೆಗೆ ತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗೂ ಸುತ್ತೂರಿನಲ್ಲಿರುವ ಎಲ್ಲ ಗ್ರಾಮ ದೇವತೆಗಳಿಗೂ ಪೂಜೆ ಸಲ್ಲಿಸಲಾಗುವುದು. ಇದನ್ನು ಆನ್ಲೈನ್ ಮೂಲಕ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.