ಮದುವೆ ಬೇಡ ಎಂದು ಪೋಸ್ಟ್ ಮಾಡಿದ್ದ ಬಾಲಕಿ; ಸುರೇಶ್ ಕುಮಾರ್ ಸ್ಪಂದನೆ
ಮೈಸೂರು, ಜನವರಿ 29: ತನಗೆ ಈ ಮದುವೆ ಇಷ್ಟ ಇಲ್ಲ, ಅಪ್ಪ ಅಮ್ಮ ಬಲವಂತವಾಗಿ ಮದುವೆ ಮಾಡಿಸುತ್ತಿದ್ದಾರೆ ಎಂದು ತನ್ನ ಗೆಳತಿಯ ಫೇಸ್ ಬುಕ್ ಪುಟದಲ್ಲಿ ಬರೆದು ಬೆಂಗಳೂರು ಸಿಟಿ ಪೊಲೀಸ್ (ಬಿಸಿಪಿ) ಪೇಜ್ ಗೆ ಟ್ಯಾಗ್ ಮಾಡಿ ಕಷ್ಟ ಹೇಳಿಕೊಂಡಿದ್ದ ಮೈಸೂರಿನ ಜಯಪುರದ ಬಾಲಕಿಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳುವುದಾಗಿ ಶಿಕ್ಷಣ ಸುರೇಶ್ ಕುಮಾರ್ ತಿಳಿಸಿದ್ದಾರೆ.
"ನಿನ್ನೆ ಮೈಸೂರಿನ 15 ವರ್ಷದ (9ನೇ ತರಗತಿಯಲ್ಲಿ ಓದುತ್ತಿರುವ) ಓರ್ವ ಬಾಲಕಿಯ ಮದುವೆಯನ್ನು ಆಕೆಯ ಕುಟುಂಬದವರು ಜನವರಿ 30ರಂದು ಮಾಡ ಹೊರಟಿದ್ದಾರೆ ಎಂಬ ವಿಷಯ ತಿಳಿಯಿತು. ತಕ್ಷಣ ನಾನು ಜೆಲ್ಲೆಯ ಜಿಲ್ಲಾಧಿಕಾರಿ, ಡಿಡಿಪಿಐ ಮತ್ತು ಮಕ್ಕಳ ರಕ್ಷಣಾ ಸಿಬ್ಬಂದಿಯನ್ನು ಸಂಪರ್ಕಿಸಿ ಅಗತ್ಯ ಸೂಚನೆ ನೀಡಿದೆ. ನಿನ್ನೆ ಬೆಳಿಗ್ಗೆ ಜಿಲ್ಲೆಯ ಅಧಿಕಾರಿಗಳು ಆ ಮನೆಗೆ ಹೋಗಿ ಆ ಬಾಲಕಿಯನ್ನು ರಕ್ಷಿಸಿ ಮೈಸೂರಿನ ಬಾಲಮಂದಿರಕ್ಕೆ ಕರೆತಂದಿದ್ದಾರೆ" ಎಂದು ತಿಳಿಸಿದ್ದಾರೆ.
"ಮದುವೆ ಇಷ್ಟವಿಲ್ಲ" ಎಂದು ಪೊಲೀಸರಿಗೆ ಫೇಸ್ಬುಕ್ ನಲ್ಲಿ ಟ್ಯಾಗ್ ಮಾಡಿದ ಮೈಸೂರು ಬಾಲಕಿ
"ಆಕೆಯ ಕುಟುಂಬದವರು "ಮದುವೆ ಮಾಡಬೇಕು ಎಂದು ನಿರ್ಧರಿಸಿದ್ದು ನಿಜ. ಆದರೆ 30ರಂದೇ ಮಾಡುವ ಉದ್ದೇಶವಿರಲ್ಲ" ಎಂದು ಹೇಳಿದ್ದಾರೆ. ಆ ಬಾಲಕಿಗೆ ಮುಂದೆ ಓದುವ ಹಂಬಲವಿದೆ. ಅದಕ್ಕೆ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗುವುದು" ಎಂದು ಭರವಸೆ ನೀಡಿದ್ದಾರೆ.