ಅಂತಿಮ ಫಲಿತಾಂಶದ ಬಗ್ಗೆ ನನಗೆ ವಿಶ್ವಾಸವಿದೆ: ಸುಮಲತಾ
ಮೈಸೂರು, ಮೇ 23 : ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಅಭ್ಯರ್ಥಿಗಳು ಕುತೂಹಲದಿಂದ ಎದುರು ನೋಡುತ್ತಿದ್ದು, ಸಕ್ಕರೆ ನಾಡು ಮಂಡ್ಯದಲ್ಲಿ 12ರ ನಂತರ ಮತ ಎಣಿಕೆ ಬಿರುಸಿನಿಂದ ಸಾಗಿದೆ. ಈ ಕ್ಷೇತ್ರ ಕಣ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುತ್ತಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ 6 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಫಲಿತಾಂಶದ ಈ ಸಂದರ್ಭದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದ ಫೈನಲ್ ರಿಸಲ್ಟ್ ನನಗೆ ಪಾಸಿಟಿವ್ ಆಗುತ್ತದೆ. ಮಂಡ್ಯದ ಜನ ಯಾವಾಗ್ಲೂ ಕೈ ಹಿಡಿದಿದ್ದಾರೆ, ಈಗಲೂ ಕೈ ಹಿಡಿಯುತ್ತಾರೆ. ಫಲಿತಾಂಶ ಹೇಗೆ ಬಂದ್ರೂ ಸಮಾನವಾಗಿ ಸ್ವೀಕರಿಸುತ್ತೇನೆ. ಫಲಿತಾಂಶದ ಬಗ್ಗೆ ನನಗೆ ವಿಶ್ವಾಸವಿದೆ. ಜನರು ನನ್ನ ಪರ ಇದ್ದರು, ಇದ್ದಾರೆ, ಮುಂದೆಯೂ ಇರುತ್ತಾರೆ ಎಂಬ ನಂಬಿಕೆಯಿದೆ. ಫಲಿತಾಂಶ ಹೇಗಿದ್ದರೂ ಸ್ವೀಕರಿಸುತ್ತೇನೆ ಎಂದರು. ಸುಮಲತಾರವರಿಗೆ ನಟ ದೊಡ್ಡಣ್ಣ ಸಾಥ್ ನೀಡಿದರು.